ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಮುಕ್ತಾಯವಾಗಿದ್ದು, ನವೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಈಗಾಗಲೇ ಆಯೋಧ್ಯೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗ್ತಿದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಸ್ಥಗಿತಗೊಳಿಸಿದ್ದು, SPG ಟೀಂ ರಾಮಭೂಮಿಗೆ ಎಂಟ್ರಿ ಕೊಟ್ಟಿದೆ. ಪ್ರತಿಯೊಂದು ಚಟುವಟಿಕೆ ಮೇಲೂ ನಿಗಾ ವಹಿಸಿದೆ.
191 ಅಡಿ ಎತ್ತರದಲ್ಲಿ ಕೇಸರಿ ಧ್ವಜಾರೋಹಣ ಮಾಡಲಾಗುತ್ತದೆ. ರಾಮ ಮಂದಿರ ಸಂಪೂರ್ಣಗೊಂಡಿರುವ ಸಂಭ್ರಮದಲ್ಲಿರುವ ಉತ್ತರ ಪ್ರದೇಶ ಸರ್ಕಾರ, ಕಿಂಚಿತ್ತೂ ಸಂಭ್ರಮಕ್ಕೆ ಕೊರತೆ ಆಗದಂತೆ ಕಾರ್ಯಕ್ರಮ ರೂಪಿಸಲು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜೊತೆಗೆ ಕೈ ಜೋಡಿಸಿದೆ.
ಉತ್ತರಪ್ರದೇಶ ಉಪ ಮುಖ್ಯಮಂತ್ರಿ ಬ್ರಿಜೇಶ್, ಸಿದ್ಧತೆಗಳ ಪರಿಶೀಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಅಯೋಧ್ಯೆಯಲ್ಲಿ ಬೀದಿ ಬೀದಿಯಲ್ಲೂ ಬ್ಯಾರಿಕೇಡ್ ಹಾಕಿಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಈಗಾಗಲೇ ಅಯೋಧ್ಯೆಯಲ್ಲಿ ಸೇನಾ ಹೆಲಿಕಾಪ್ಟರ್ಗಳ ಗಸ್ತು ಶುರುವಾಗಿದ್ದು, ಹದ್ದಿನ ಕಣ್ಣಿಡಲಾಗಿದೆ. ಅಯೋಧ್ಯೆ ರಸ್ತೆಗಳಲ್ಲಿ ಹೂ ಕುಂಡಗಳ ಅಳವಡಿಕೆ ಮಾಡಲಾಗಿದೆ. ನವೆಂಬರ್ 24, 25ರಂದು ಆಗಿದ್ದ ಎಲ್ಲಾ ಅಡ್ವಾನ್ಸ್ ಬುಕ್ಕಿಂಗ್ ರದ್ದು ಮಾಡಲಾಗಿದೆ.
ಕಳೆದ ಬಾರಿ ದ್ರೌಪದಿ ಮುರ್ಮು ಅವರನ್ನು ಆಹ್ವಾನ ಮಾಡಿರಲಿಲ್ಲ. ಜಾತಿ ಕಾರಣಕ್ಕೆ ಅನ್ನೋ ಆರೋಪವೂ ಕೇಳಿ ಬಂದಿತ್ತು. ಆದರೆ ಈ ಬಾರಿ 7 ಸಾವಿರ ಜನ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. ಅದರಲ್ಲೂ ಹಿಂದುಳಿದ ವರ್ಗದ ಜನರನ್ನು ಈ ಬಾರಿ ಆಹ್ವಾನ ಮಾಡಲಾಗಿದೆ. ತೃತೀಯ ಲಿಂಗಿಗಳು, ದಲಿತರು, ಅಘೋರಿ ಸಮುದಾಯಕ್ಕೂ ಆಹ್ವಾನ ಕೊಡಲಾಗಿದೆ ಅನ್ನೋದು ವಿಶೇಷ.
ಧ್ವಜಾರೋಹಣಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದಾರೆ. ಸಾಕೇತ್ ಕಾಲೇಜ್ನಿಂದ ರಾಮ ಜನ್ಮಭೂಮಿ ತನಕ ತೆರೆದ ವಾಹನದಲ್ಲಿ ರ್ಯಾಲಿ ನಡೆಸಲಿದ್ದಾರೆ. ಆ ಬಳಿಕ ಅಭಿಜಿತ್ ಮುಹೂರ್ತದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಇದೇ ದಿನ ಶ್ರೀರಾಮ ಮತ್ತು ಸೀತಾದೇವಿಯ ವಿವಾಹ ನಡೆದಿತ್ತು ಎನ್ನುವ ಕಾರಣಕ್ಕೆ, ಅಭಿಜಿತ್ ಮುಹೂರ್ತ ನಿಗದಿ ಮಾಡಲಾಗಿದೆ.

