ಕುಟುಂಬ ಕಲಹದ ಕರಾಳ ಅಂತ್ಯ ; ಮರ್ಯಾದೆಗೆ ಎದರಿ ಆತ್ಮ*ಹತ್ಯೆ

ಹಾವೇರಿಯ ವೆಂಕಟಾಪೂರ ಗ್ರಾಮದಲ್ಲಿ ಮರ್ಯಾದೆಗೆ ಧಕ್ಕೆ ತಗುಲಬಹುದು ಎಂಬ ಭಯದಿಂದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಸ್ಥಳೀಯವಾಗಿ ಶೋಕ ವ್ಯಕ್ತವಾಗುವಂತೆ ಮಾಡಿದೆ.

ಮೃತ ವ್ಯಕ್ತಿಯನ್ನು ದಾದಾಪೀರ (38) ಎಂದು ಗುರುತಿಸಲಾಗಿದೆ. ಮನೆಯಲ್ಲಿಯೇ ಯಾರೂ ಇಲ್ಲದ ವೇಳೆ ಅವರು ನೇಣು ಬಿಗಿದು ಜೀವತ್ಯಾಗ ಮಾಡಿದ್ದಾರೆ. ದಾದಾಪೀರರ ಸಹೋದರ ಮಹಮ್ಮದ್ ರಫೀಕ್ ಮತ್ತು ಅವರ ಪತ್ನಿ ನೂರುಬೇಬಿ ನಡುವೆ ಕೆಲಕಾಲದಿಂದ ಕಲಹ ನಡೆಯುತ್ತಿತ್ತು. ಈ ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ನೂರುಬೇಬಿ ಮಹಿಳಾ ಠಾಣೆಯಲ್ಲಿ ದಾದಾಪೀರ ಕುಟುಂಬದ ಒಟ್ಟು 11 ಮಂದಿಯ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪಿಸಿ ದೂರು ದಾಖಲಿಸಿದ್ದರು.

ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಮನೆಯವರಿಗೆ ಭೇಟಿ ನೀಡಿ ಸ್ಥಳ ಮಹಜರು ಕೂಡ ನಡೆಸಿದ್ದರು. ಇದೇ ವೇಳೆ, ಠಾಣೆಗೆ ವಿಚಾರಣೆಗಾಗಿ ಹಾಜರಾಗುವಂತೆ ದಾದಾಪೀರರಿಗೂ ಪೊಲೀಸರು ಕರೆಮಾಡಿದ್ದರು. ಈ ವಿಚಾರಣೆಗಾಗಿ ತೆರಳಿದರೆ ಕುಟುಂಬದ ಮಾನಹಾನಿ ಆಗಬಹುದು ಎಂಬ ಭಯದಿಂದ ದಾದಾಪೀರ ತಮ್ಮ ಮನೆಯವರೊಂದಿಗೆ ಚರ್ಚಿಸಿದರೂ, ಆತಂಕದಿಂದ ಚೇತರಿಸಿಕೊಳ್ಳದೇ ಕೊನೆಗೆ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬವು ಹೇಳಿದೆ.

ಈ ಸಾವಿಗೆ ನೂರುಬೇಬಿ ಹಾಗೂ ಆಕೆಯ ಕುಟುಂಬಸ್ಥರೇ ಕಾರಣ ಎಂದು ಆರೋಪ ಮಾಡಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ, ನೂರುಬೇಬಿ ಮತ್ತು ಇತರರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವನ್ನು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ದಾಖಲಿಸಿದೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author