ಬೆಳಗಾವಿಯಲ್ಲಿ ಡಿಸೆಂಬರ್ 8ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನಕ್ಕೆ ಈ ಬಾರಿ ಗುರ್ಲಾಪುರ ಮತ್ತು ಮುಧೋಳ ರೈತರ ಹೋರಾಟದ ಬಿಸಿ ತಟ್ಟಿದೆ. ರೈತರ ಸಂಘಟನೆಗಳ ಜೊತೆಗೆ ಮೀಸಲಾತಿ ಸೇರಿದಂತೆ ನೂರಕ್ಕೂ ಹೆಚ್ಚು ಸಂಘಟನೆಗಳು ಅಧಿವೇಶನ ಸಮಯದಲ್ಲೇ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರಿಂದ, ಸರ್ಕಾರವು ಬೀಗಿ ಭದ್ರತೆಗೆ ಕೈ ಹಾಕಿದೆ.
ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಹತ್ತು ದಿನಗಳ ಅಧಿವೇಶನಕ್ಕಾಗಿ 6 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಗೃಹ ಇಲಾಖೆಯು ತೀರ್ಮಾನಿಸಿದೆ. ಕಳೆದ ವರ್ಷಕ್ಕಿಂತ ಹೆಚ್ಚಿನ ಮಟ್ಟದ ಕಟ್ಟುನಿಟ್ಟಾದ ಭದ್ರತೆ ಈ ಬಾರಿ ಕಲ್ಪಿಸಲಾಗಿದೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ನೇತೃತ್ವದಲ್ಲಿ ಬೆಳಗಾವಿ ಉತ್ತರ ವಲಯದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆದು, ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳ ಕುರಿತು ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಂಡಿದೆ.
ರೈತರು, ಮೀಸಲಾತಿ ಪರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳಿಂದ ಅಧಿವೇಶನ ಸಮಯದಲ್ಲಿ ಭಾರೀ ಪ್ರತಿಭಟನೆಗಳ ನಿರೀಕ್ಷೆ ಇರುವುದರಿಂದ ಸುವರ್ಣ ವಿಧಾನಸೌಧ ಸುತ್ತಮುತ್ತ ಹೆಚ್ಚಿನ ಎಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ.
ವರದಿ : ಲಾವಣ್ಯ ಅನಿಗೋಳ

