20 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಸಿಎಂ, ಡಿಸಿಎಂ ಜೊತೆ ಕುಳಿತು, ಹೈಕಮಾಂಡ್ ಪಟ್ಟಿ ಫೈನಲ್ ಮಾಡಲಿದೆ. ಸದ್ಯ ದೆಹಲಿಯಲ್ಲಿರುವ ಸಿದ್ದು, ಡಿಕೆಶಿ ವಾಪಸ್ ಆದ ಬಳಿಕ, ಪಟ್ಟಿ ಪ್ರಕಟವಾಗಲಿದೆ.
ನಿನ್ನೆ ಒಟ್ಟಾಗಿ ದೆಹಲಿಗೆ ಹೋಗಿರುವ ಸಿದ್ದು-ಡಿಕೆ, ಸುರ್ಜೇವಾಲರನ್ನು ಭೇಟಿಯಾಗಿದ್ದಾರೆ. ಒಂದೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ, ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ಒಪ್ಪಿಗೆ ಸಿಕ್ಕಿದೆ. ಮತ್ತೊಂದು ಸುತ್ತಿನ ಮಾತುಕತೆ ಬಳಿಕ ಫೈನಲ್ ಆಗಿದೆ. ಇನ್ನು, 4 ಎಂಎಲ್ಸಿ ಸ್ಥಾನಗಳ ಆಯ್ಕೆ ವಿಚಾರವನ್ನು, ಹೈಕಮಾಂಡಿಗೆ ಬಿಡಲಾಗಿದೆ.
ಸಭೆ ಬಳಿ ಸುರ್ಜೇವಾಲಾ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಒಂದೇ ಕಾರಿನಲ್ಲಿ ಹೊರಗೆ ಊಟಕ್ಕೆ ಹೋಗಿದ್ದಾರೆ. ಮೂವರು ನಾಯಕರ ಒಗ್ಗಟ್ಟಿನ ಮಂತ್ರ, ತೀವ್ರ ಕುತೂಹಲ ಮೂಡಿಸಿದೆ.
ದೆಹಲಿಯ ಥಾಲ್ ಕಠೋರಾ ಸ್ಟೇಡಿಯಂನಲ್ಲಿ ಇಂದು ಎಐಸಿಸಿ ಒಬಿಸಿ ಘಟಕದ ಸಭೆ ಇದೆ. ಭಾಗಿಧಾರಿ ನ್ಯಾಯ ಸಮ್ಮೇಳನದಲ್ಲಿ ರಾಹುಲ್ ಗಾಂಧಿ ಜೊತೆ ಸಿದ್ದು ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಏಕೈಕ ಒಬಿಸಿ ಸಿಎಂ ಸಿದ್ದರಾಮಯ್ಯ ಆಗಿದ್ದಾರೆ. ಹೀಗಾಗಿ ಸಿದ್ದು ವರ್ಚಸ್ಸು ಬಳಸಿಕೊಳ್ಳಲು, ವರಿಷ್ಠರು ಮುಂದಾಗಿದ್ದಾರೆ. ಸಿದ್ದರಾಮಯ್ಯರಿಗೆ ರಾಷ್ಟ್ರ ರಾಜಕೀಯದಲ್ಲಿ ಸ್ಥಾನಮಾನ ಕೊಟ್ಟು, ರಾಜ್ಯದಲ್ಲಿ ಡಿಕೆಶಿ ನಾಯಕತ್ವಕ್ಕೆ ಗ್ರೀನ್ ಸಿಗ್ನಲ್ ಕೊಡುತ್ತಾ ಅನ್ನೋ ಕುತೂಹಲಕ್ಕೆ ಕಾರಣವಾಗಿದೆ.
ಸಿದ್ದು, ಡಿಕೆಶಿ ತಮ್ಮದೇ ವರ್ಚಸ್ಸು ಹೊಂದಿದ್ದಾರೆ. ಇಬ್ಬರು ಘಟಾನುಘಟಿ ನಾಯಕರು. ಯಾರೊಬ್ಬರ ವಿಶ್ವಾಸವನ್ನು ಕಳೆದುಕೊಂಡರೂ, ಕಾಂಗ್ರೆಸ್ ಸಂಘಟನೆಗೆ ಭಾರೀ ಹೊಡೆತ ಬೀಳಲಿದೆ. ಹೀಗಾಗಿ ಹೈಕಮಾಂಡ್ ವರಿಷ್ಠರು ಜಾಣ್ಮೆಯ ಹೆಜ್ಜೆಗಳನ್ನಿಟ್ಟಿದ್ದಾರೆ.