ಕರ್ನಾಟಕ ಪೊಲೀಸರ ಲುಕ್ ಬದಲಾಗಿದೆ. ಸ್ಲೋಚ್ ಟೋಪಿ ಬದಲಾಗಿ ಹೊಸ ಪೀಕ್ ಕ್ಯಾಪ್ ನೀಡಲಾಗಿದೆ. ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್, ಪೊಲೀಸರಿಗೆ ಹೊಸ ಕ್ಯಾಪ್ ತೊಡಿಸಿ ಚಾಲನೆ ನೀಡಿದ್ದಾರೆ.

ಅಷ್ಟಕ್ಕೂ ಈ ಪೀಕ್ ಕ್ಯಾಪ್ ಐಡಿಯಾ ಒಳೆದಿದ್ದು ಸಿಎಂ ಸಿದ್ದರಾಮಯ್ಯ ಅವರಿಗಂತೆ. ಈ ಬಗ್ಗೆ ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದಾರೆ. ಇಂದು ಬಿಡುಗಡೆ ಮಾಡಿದ ಪೀಕ್ ಕ್ಯಾಪ್ ಮಾದರಿಯನ್ನೂ ಆಯ್ಕೆ ಮಾಡಿದ್ದು ಕೂಡ ನಾನೇ. 1956ರಿಂದ ಸುಮಾರು 70 ವರ್ಷಗಳಿಂದ ಇದ್ದ ಒಂದೇ ಮಾದರಿಯ ಕ್ಯಾಪ್ ಅನ್ನು, ಇಂದು ಬದಲಾಯಿಸಿದ್ದೇವೆ. ಅಧಿಕಾರಿ ಮತ್ತು ಸಿಬ್ಬಂದಿಗೆ ಒಂದೇ ಮಾದರಿ ಕ್ಯಾಪ್ ಒದಗಿಸಲಾಗಿದ್ದು, ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿ.

ಕೇವಲ ಕ್ಯಾಪ್ ಬದಲಾಗುವುದಲ್ಲ. ನಿಮ್ಮ ಕಾರ್ಯಕ್ಷಮತೆಯೂ ಬದಲಾಗಲಿ. ಪೊಲೀಸ್ ಇಲಾಖೆಯ ದಕ್ಷತೆಯಿಂದ ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತದೆ. ಇಂಡಿಯಾ ಜಸ್ಟೀಸ್ ವರದಿಯಲ್ಲಿ ಕರ್ನಾಟಕ ಪೊಲೀಸ್ ನಂಬರ್ ಒನ್ ಸ್ಥಾನದಲ್ಲಿದೆ ಎನ್ನುವ ವರದಿ ರಾಜ್ಯದ ಘನತೆ ಹೆಚ್ಚಿಸಿದೆ ಎಂದು, ಸಿದ್ದರಾಮಯ್ಯ ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ಧರಿಸುತ್ತಿದ್ದ ಕ್ಯಾಪ್, ಪ್ರತಿಭಟನೆ ಹಾಗೂ ಇನ್ನಿತರ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಲು ಸಮಸ್ಯೆ ಉಂಟು ಮಾಡುತ್ತಿತ್ತು. ಹಳೆ ಟೋಪಿ ತಲೆಯ ಮೇಲೆ ಸರಿಯಾಗಿ ನಿಲ್ಲುತ್ತಿರಲಿಲ್ಲ. ಪದೇ ಪದೇ ಜಾರುತ್ತಿದ್ದ ಕಾರಣಕ್ಕಾಗಿ ಕರ್ತವ್ಯ ನಿರ್ವಹಿಸಲು ಸಮಸ್ಯೆ ಆಗುತ್ತಿತ್ತು. ಈ ಕಾರಣಕ್ಕಾಗಿ ಇತರ ರಾಜ್ಯಗಳಲ್ಲಿ ಪೊಲೀಸ್ ಸಿಬ್ಬಂದಿಯ ಕ್ಯಾಪ್ ಶೈಲಿ, ಕರ್ನಾಟಕಲ್ಲಿ ಜಾರಿಗೆ ತರಬೇಕು ಎಂಬ ಬೇಡಿಕೆ ಇತ್ತು.

ಇದೇ ಕಾರಣಕ್ಕೆ ವಿವಿಧ ರಾಜ್ಯಗಳ ಪೊಲೀಸ್ ಸಿಬ್ಬಂದಿ, ಧರಿಸುವ ಕ್ಯಾಪ್ಗಳನ್ನು ಪರಿಶೀಲನೆ ನಡೆಸಿದ್ದರು. ಬಳಿಕ ತೆಲಂಗಾಣ ಪೊಲೀಸರು ಧರಿಸುತ್ತಿದ್ದ ಪೀಕ್ ಕ್ಯಾಪ್ ವಿತರಣೆ ಮಾಡಲು, ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಹೊಸ ಮಾದರಿಯ ಕ್ಯಾಪ್ನಿಂದ ಪೊಲೀಸ್ ಸಿಬ್ಬಂದಿಯೂ ಖುಷಿ ಆಗಿದ್ದಾರೆ. ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದ ನಂತರದಲ್ಲಿ ಹೊಸ ಕ್ಯಾಪ್ ಧರಿಸಿ, ಪೊಲೀಸರು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ಸ್ಲೋಚ್ ಹ್ಯಾಟ್ಗೆ ವಿದಾಯ ಹೇಳಿ ಪೊಲೀಸ್ ಸಿಬ್ಬಂದಿಗೆ ಹೊಸ ಪೀಕ್ ಕ್ಯಾಪ್ ವಿತರಣೆ ಮಾಡಿದ ಬಗ್ಗೆ, ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಪೋಸ್ಟ್ ಮಾಡಿದ್ದಾರೆ. ಪ್ರತಿಭಟನೆ, ಆರೋಪಿಯನ್ನು ಹಿಡಿಯಲು ಓಡುವಾಗ, ಲಾಠಿ ಪ್ರಹಾರದ ವೇಳೆ ಸ್ಲೋಚ್ ಕ್ಯಾಪ್ ಕೆಳಗೆ ಬೀಳುತ್ತಿತ್ತು. ಪೊಲೀಸರ ಹ್ಯಾಟ್ ಕೆಳಗೆ ಬಿದ್ದರೆ ಸಮವಸ್ತ್ರಕ್ಕೆ ಅಗೌರವ ತೋರಿದಂತಾಗುತ್ತದೆ. ಹೀಗಾಗಿ ಕಳೆದ 4 ದಶಕಗಳಿಂದ ಪೀಕ್ ಕ್ಯಾಪ್ ನೀಡುವಂತೆ ಪೊಲೀಸರು ಬೇಡಿಕೆಯಿಟ್ಟಿದ್ದರು.
ಕೊನೆಗೆ ನಮ್ಮ ಸರ್ಕಾರ ಹೊಸ ಮಾದರಿಯ ಕಡು ನೀಲಿ ಬಣ್ಣದ ಪೀಕ್ ಕ್ಯಾಪ್ ವಿತರಿಸಲು ಒಪ್ಪಿಗೆ ನೀಡಿತ್ತು. ಹೊಸ ಪೀಕ್ ಕ್ಯಾಪ್ನಲ್ಲಿ ಎಲಾಸ್ಟಿಕ್ ಇರುವುದರಿಂದ ಪೊಲೀಸರ ತಲೆಯಲ್ಲಿ ಸರಿಯಾಗಿ ಕೂರಲಿವೆ. ಇಂದಿನಿಂದ ರಾಜ್ಯದ 1 ಲಕ್ಷ ಪೊಲೀಸ್ ಸಿಬ್ಬಂದಿಗೆ ಹೊಸ ಪೀಕ್ ಕ್ಯಾಪ್ ನೀಡುತ್ತಿದ್ದೇವೆ ಎಂದು ಡಿಕೆಶಿ ಹೇಳಿದ್ದಾರೆ.

