www.karnatakatv.net: ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ಕಾಗಲವಾಡಿ ಗ್ರಾಮದಲ್ಲಿ ಉಪಟಳ ಕೊಡುತ್ತಿದ್ದ ಕೋತಿಗಳನ್ನು ಆಹಾರ ನೀಡದೆ ಎರಡು ಬೋನುಗಳಲ್ಲಿ ಮೂರು ದಿನಗಳಿಂದ ಒತ್ತೊತ್ತಾಗಿ ಕೂಡಿ ಹಾಕಲಾಗಿದೆ ಎಂಬ ಆರೋಪ ಕೇಳಿ ಬಂದ ತಕ್ಷಣ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಶನಿವಾರ ರಾತ್ರಿ ಗ್ರಾಮಕ್ಕೆ ಭೇಟಿ ನೀಡಿ ಬಂದಿಸಿದ್ದ ಕೋತಿಗಳನ್ನು ಬಿಆರ್ಟಿ ಅರಣ್ಯಕ್ಕೆ ಬಿಡಲು ಕ್ರಮ ಕೈಗೊಂಡರು.
ಚಾಮರಾಜನಗರ ತಾಲ್ಲೂಕಿನ ಕಾಗಲವಾಡಿ ಗ್ರಾಮದಲ್ಲಿ ಜನರಿಗೆ ತೊಂದರೆ ನೀಡುತ್ತಿದ್ದ ಸುಮಾರು 50ರಷ್ಟು ಕೋತಿಗಳನ್ನು ಗ್ರಾಮ ಪಂಚಾಯಿತಿ ಆಡಳಿತ, ಕೋತಿ ಹಿಡಿಯುವವರನ್ನು ಕರೆಸಿ ಸೆರೆ ಹಿಡಿಸಿತ್ತು. ಕೋತಿಗಳನ್ನು ಎರಡು ಕಿರಿದಾದ ಬೋನುಗಳಲ್ಲಿ ಒತ್ತೊತ್ತಾಗಿ ಕೂಡಿ ಹಾಕಲಾಗಿತ್ತು.
ಈ ಬಗ್ಗೆ ವಿಡಿಯೊ ಮಾಡಿದ್ದ ಸ್ಥಳೀಯ ಯುವಕರೊಬ್ಬರು, ಮೂರು ದಿನಗಳಿಂದ ಕೋತಿಗಳನ್ನು ಕೂಡಿ ಹಾಕಲಾಗಿದ್ದು, ಆಹಾರ ನೀಡಿಲ್ಲ ಎಂದು ಆರೋಪಿಸಿದ್ದರು. ಶನಿವಾರ ರಾತ್ರಿ ಈ ವಿಡಿಯೊ ವಾಟ್ಸ್ ಆ್ಯಪ್ ನಲ್ಲಿ ಹರಿದಾಡಿತ್ತು. ವಿಷಯ ತಿಳಿಯುತ್ತಿದ್ದಂತೆ ಶನಿವಾರ ರಾತ್ರಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ, ಕೋತಿಗಳನ್ನು ಕಾಡಿಗೆ ಬಿಡುವುದಕ್ಕೆ ಕ್ರಮ ಕೈಗೊಂಡರು.