ಅಫ್ಘಾನ್‌ ಕ್ರಿಕೆಟಿಗರ ಮೇಲೆ ಪಾಪಿ ಪಾಕ್ ಪೈಶಾಚಿಕ ಕೃತ್ಯ!

ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಮುಂಬರುವ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ತ್ರಿಕೋನ T20 ಸರಣಿಯಿಂದ, ಹಿಂದೆ ಸರಿಯುವ ನಿರ್ಧಾರವನ್ನು ಪ್ರಕಟಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿದೆ.

ಪಾಕ್‌ ವೈಮಾನಿಕ ದಾಳಿಯನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಖಂಡಿಸಿದ್ದು, ಪಾಕಿಸ್ತಾನ ಆಡಳಿತ ನಡೆಸಿದ ಹೇಡಿತನದ ದಾಳಿ ಎಂದು ಆಕ್ರೋಶ ಹೊರಹಾಕಿದೆ. ನವೆಂಬರ್ 5ರಿಂದ 29ರವರೆಗೆ ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ನಡೆಯಲಿರುವ ತ್ರಿಕೋನ ಸರಣಿಯಲ್ಲಿ ಅಫ್ಘಾನಿಸ್ತಾನ ಭಾಗವಹಿಸಬೇಕಿತ್ತು. ಅದರಲ್ಲಿ ಶ್ರೀಲಂಕಾ ಕೂಡ ಭಾಗವಹಿಸಬೇಕಿತ್ತು.

 

ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕ ರಶೀದ್ ಖಾನ್ ಅವರು “ಅನಾಗರಿಕ” ವೈಮಾನಿಕ ದಾಳಿಯನ್ನು ತೀವ್ರವಾಗಿ ಖಂಡಿಸಿ, ತ್ರಿಕೋನ ಸರಣಿಯಿಂದ ಹಿಂದೆ ಸರಿಯುವ ಅಫ್ಘಾನಿಸ್ತಾನದ ನಿರ್ಧಾರವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

ಕಳೆದ ಅಕ್ಟೋಬರ್ 11ರಿಂದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಿದ್ದು, ಅಫ್ಘಾನ್ ಪಡೆಗಳು ಹಲವಾರು ಪಾಕಿಸ್ತಾನಿ ಮಿಲಿಟರಿ ಪೋಸ್ಟ್‌ಗಳ ಮೇಲೆ ದಾಳಿ ಮಾಡಿದ ನಂತರ ಗಡಿಯಲ್ಲಿ ಭೀಕರ ಘರ್ಷಣೆಗಳು ನಡೆದಿವೆ. ಅಪಾರ ಸಾವು ನೋವಿನ ಬಳಿಕ ಕದನ ವಿರಾಮ ಘೋಷಿಸಲಾಗಿತ್ತು. ಇದೀಗ ಮತ್ತೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದೆ. ಡುರಾಂಡ್ ರೇಖೆಯ ಉದ್ದಕ್ಕೂ ಅರ್ಗುನ್ ಮತ್ತು ಬೆರ್ಮಲ್ ಜಿಲ್ಲೆಗಳಲ್ಲಿನ, ವಸತಿ ಪ್ರದೇಶಗಳನ್ನು ಹೊಡೆದುರುಳಿಸಿದೆ.

About The Author