ರಾಜ್ಯದಲ್ಲೂ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆಗಾಗಿ, ರಾಜ್ಯ ಬಿಜೆಪಿ ನಾಯಕರು ಸಿದ್ಧತೆ ಆರಂಭಿಸಿದ್ದಾರೆ. ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಬಿಜೆಪಿ ಪಕ್ಷದಿಂದ ಬೆಂಗಳೂರಿನಲ್ಲಿ ಕಾರ್ಯಗಾರ ಹಮ್ಮಿಕೊಂಡಿದ್ದಾರೆ. ಶಾಸಕರು, ಜಿಲ್ಲಾ ಘಟಕದ ಅಧ್ಯಕ್ಷರು ಸೇರಿ 200ಕ್ಕೂ ಹೆಚ್ಚು ನಾಯಕರು ಭಾಗಿಯಾಗಿದ್ರು.
ಕಾರ್ಯಾಗಾರಕ್ಕೆ ಬಿಜೆಪಿ ರಾಷ್ಟ್ರೀಯ ಶಿಸ್ತು ಸಮಿತಿ ಅಧ್ಯಕ್ಷ ಓಂ ಪಾಠಕ್ ಚಾಲನೆ ನೀಡಿದ್ರು. ಬಳಿಕ ಮಾತನಾಡಿ, ಭಾರತೀಯ ಚುನಾವಣಾ ಆಯೋಗ ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಕೈಗೊಳ್ಳುತ್ತಿದೆ. ಬಿಹಾರದಲ್ಲಿ SIR ಪೂರ್ಣಗೊಂಡಿದ್ದು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಕರ್ನಾಟಕದಲ್ಲೂ ಘೋಷಣೆಯಾಗಲಿದೆ. ಹೀಗಾಗಿ ಬಿಜೆಪಿ ಸಿದ್ಧತೆ ನಡೆಸುತ್ತಿದೆ ಅಂತಾ ಹೇಳಿದ್ರು.
ಇದೇ ವೇಳೆ ಕಾಂಗ್ರೆಸ್ ಮತ್ತು ಇಂಡಿಯಾ ಬಣದ ಇತರೆ ಪಕ್ಷಗಳನ್ನು ಟೀಕಿಸಿದ್ದು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಶೀಲನೆ ಬಗ್ಗೆ, ಕೆಲವರು ತಪ್ಪು ಕಲ್ಪನೆಗಳ ಸೃಷ್ಟಿಸಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸ್ವಚ್ಛ ಮತ್ತು ಅಧಿಕೃತ ಮತದಾರರ ಪಟ್ಟಿ ಬಹಳ ಮುಖ್ಯ. ಚುನಾವಣೆಯಲ್ಲಿ ಭಾಗವಹಿಸುವ ಅಕ್ರಮ ನುಸುಳುಕೋರರು, ದೇಶದ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುತ್ತಾರೆ.
ಮತದಾರರಾಗಲು ಪೌರತ್ವ ಪಡೆಯುವುದು ಅನಿವಾರ್ಯ. 2004ರವರೆಗೆ ನಿರಂತರವಾಗಿ ಎಸ್ಐಆರ್ ನಡೆಯುತ್ತಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಅದನ್ನು ರದ್ದು ಮಾಡಿದ್ರು. ಮತ್ತೆ ಎಸ್ಐಆರ್ ಆರಂಭಿಸಿರುವುದು ಧನಾತ್ಮಕ ಮತ್ತು ಸಾರ್ಥಕ ಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.