Saturday, June 21, 2025

Latest Posts

TOP NEWS: ಇಂದಿನ ಪ್ರಮುಖ ಸುದ್ದಿಗಳು – 30/12/2024

- Advertisement -

1. ನ್ಯೂ ಇಯರ್ ಗೆ BBMP ಯಿಂದ ರೂಲ್ಸ್ .ಎಲ್ಲೆಂದ್ರಲ್ಲಿ ಸೆಲೆಬ್ರೆಷನ್ ಮಾಡೋ ಹಾಗಿಲ್ಲ

ಹೊಸ ವರ್ಷದ ಸಂಭ್ರಮಕ್ಕೆ ಈಗಾಗಲೇ ದಿನಗಣನೆ ಶುರುವಾಗಿದೆ. ನಾಳೆ ರಾತ್ರಿಯಿಂದ ಸಂಭ್ರಮ ಶುರುವಾಗುತ್ತೆ. ಪೊಲೀಸರು ಬೆಂಗಳೂರಲ್ಲಿ ಈಗಾಗಲೇ ಬಂದೋಬಸ್ತ್‌ ಮಾಡಿಕೊಳ್ಳಲು ಶುರು ಮಾಡಿದ್ದಾರೆ. ಈ ಮಧ್ಯೆ ಬೆಂಗಳೂರಿನಲ್ಲಿ ಕೆಲವು ಕಡೆ ಬಿಗಿಭದ್ರತೆಗೂ ಪೊಲೀಸರು ತಯಾರಿ ನಡೆಸುತ್ತಿದ್ದಾರೆ. ಈ ಮಧ್ಯೆ ಬಿಬಿಎಂಪಿ ಕೂಡ ಬೆಂಗಳೂರಿನಲ್ಲಿ ನ್ಯೂ ಇಯರ್ ಸೆಲೆಬ್ರೇಷನ್‌ಗೆ ಗೈಡ್‌ಲೈನ್ಸ್‌ ಜಾರಿಮಾಡಿದೆ.

2.ದೆಹಲಿಯಲ್ಲಿ ಅರ್ಚಕರಿಗೂ ಲಾಟರಿ! ಪ್ರತಿ ತಿಂಗಳು 18 ಸಾವಿರ ಹಣ!

2025ರಲ್ಲಿ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹೀಗಾಗಯೇ ಚುನಾವಣೆಯ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಿರುವ ಕೇಜ್ರಿವಾಲ್, ಇದೀಗ ಮತ್ತೊಂದು ಪ್ರಮುಖ ಘೋಷಣೆಯನ್ನು ಮಾಡಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್, ದೆಹಲಿಯ ದೇವಸ್ಥಾನಗಳಲ್ಲಿ ಕೆಲಸ ಮಾಡುವ ಅರ್ಚಕರಿಗೆ ಗೌರವಧನ ನೀಡುವುದಾಗಿ ಘೋಷಿಸಿದ್ದಾರೆ. ಮಹಿಳಾ ಸಮ್ಮಾನ್ ರಾಶಿ ಮತ್ತು ಸಂಜೀವನಿ ಯೋಜನೆ ನಂತರ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೋಮವಾರ ದೆಹಲಿಯ ಎಲ್ಲಾ ಅರ್ಚಕರು ಮತ್ತು ಅರ್ಚಕರಿಗೆ ಪ್ರತಿ ತಿಂಗಳು 18,000 ರೂಪಾಯಿ ವೇತನವನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ದೆಹಲಿಯ ದೇವಸ್ಥಾನಗಳಲ್ಲಿ ಕೆಲಸ ಮಾಡುವ ಅರ್ಚಕರಿಗೆ ಮತ್ತು ಗುರುದ್ವಾರಗಳಲ್ಲಿ ಕೆಲಸ ಮಾಡುವ ಗುರುಗಳಿಗೆ ಪ್ರತಿ ತಿಂಗಳು 18,000 ಗೌರವಧನ ನೀಡಲು ನಿರ್ಧರಿಸಿದ್ದೇವೆ ಅಂದಿದ್ದಾರೆ. ನಾಳೆಯಿಂದಲೇ ಈ ಯೋಜನೆಗೆ ನೋಂದಣಿ ಆರಂಭವಾಗಲಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದು, ಮಂಗಳವಾರ, ನಾನೇ ಅದನ್ನು ಕನ್ನಾಟ್ ಪ್ಲೇಸ್‌ನ ಹನುಮಾನ್ ದೇವಾಲಯದಿಂದ ಪ್ರಾರಂಭಿಸುತ್ತೇನೆ. ನಂತರ ನಮ್ಮ ಎಲ್ಲಾ ಅಭ್ಯರ್ಥಿಗಳು ಅದನ್ನು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ನೋಂದಾಯಿಸಿಕೊಳ್ಳಲಿದ್ದಾರೆ ಅಂತ ಕೇಜ್ರಿವಾಲ್ ಹೇಳಿದ್ದಾರೆ.ಆಮ್ ಆದ್ಮಿ ಪಕ್ಷ ಗೆದ್ದರೆ ದೆಹಲಿಯ ದೇವಸ್ಥಾನಗಳ ಅರ್ಚಕರು ಮತ್ತು ಗುರುದ್ವಾರ ಸಾಹಿಬ್‌ನ ಗುರುಗಳಿಗೆ ತಿಂಗಳಿಗೆ ₹18,000 ಗೌರವಧನ ನೀಡಲಾಗುತ್ತದೆ. ಈ ಯೋಜನೆಯು ಸಮಾಜಕ್ಕೆ ಅವರ ಆಧ್ಯಾತ್ಮಿಕ ಕೊಡುಗೆ ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಅವರ ಪ್ರಯತ್ನಗಳಿಗೆ ಗೌರವವಾಗಿದೆ ಅಂತ ಕೇಜ್ರಿವಾಲ್ ಹೇಳಿದ್ದಾರೆ. ಸಿಎಂ ಮಹಿಳಾ ಸಮ್ಮಾನ್ ಯೋಜನೆ ಮತ್ತು ಸಂಜೀವಿನಿ ಯೋಜನೆಯಂತಹ ಅರ್ಚಕರ ಯೋಜನೆ ಮತ್ತು ಅನುದಾನವನ್ನು ವಿರೋಧಿಸಬೇಡಿ ಎಂದು ಆಪ್ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಬಿಜೆಪಿ ನಾಯಕರಿಗೆ ಮನವಿ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ನಿನ್ನೆ ದೆಹಲಿಯ ಜನರ ಬಗ್ಗೆ ಬಿಜೆಪಿಗೆ ಯಾವುದೇ ದೂರದೃಷ್ಟಿ ಇಲ್ಲ ಎಂದು ದೂರಿದ್ದರು. ಬಿಜೆಪಿಗೆ ಸರಿಯಾದ ಅಭ್ಯರ್ಥಿಗಳೂ ಇಲ್ಲ. ಬಿಜೆಪಿ ಅಪ್ರಮಾಣಿಕವಾಗಿ ಚುನಾವಣೆ ಗೆಲ್ಲಲು ಯತ್ನಿಸುತ್ತಿದೆ. ಮಹಾರಾಷ್ಟ್ರ ಮತ್ತು ಹರ್ಯಾಣದಂತೆ ದೆಹಲಿಯಲ್ಲೂ ಚುನಾವಣೆ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ, ಆದರೆ ನಾವು ಹಾಗೆ ಮಾಡಲು ಬಿಡುವುದಿಲ್ಲ ಅಂತ ಹೇಳಿದ್ದರು.

3.ರಾಜ್ಯಪಾಲರಿಗೆ ಸಿ.ಟಿ ರವಿ ದೂರು ,ಪೊಲೀಸರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಿ.ಟಿ.ರವಿ ನಡುವಿನ ಜಟಾಪಟಿ ರಾಜ್ಯಪಾಲರ ಅಂಗಳ ತಲುಪಿದೆ. ಇಂದು ಗರ್ವನರ್ ಅವರನ್ನು ಭೇಟಿ ಮಾಡಿದ ಸಿಟಿ ರವಿ, ಅಂದು ಪರಿಷತ್​ನಲ್ಲಿ ಏನೆಲ್ಲಾ ಆಯ್ತು, ತಮ್ಮ ಬಂಧನದ ಬಳಿಕ ನಡೆದ ಬೆಳವಣಿಗೆಗಳ ಬಗ್ಗೆ ಇಂಚಿಂಚು ಮಾಹಿತಿ ನೀಡಿ ಬಂದಿದ್ದಾರೆ ಇದರ ಬೆನ್ನಲ್ಲೇ ಇದೀಗ ರಾಜ್ಯಪಾಲರಿಗೆ 8 ಪುಟಗಳ ದೂರು ನೀಡಿದ್ದು, ತಮ್ಮ ಮೇಲಿನ ಪೊಲೀಸ್ ದೌರ್ಜನ್ಯದ ಕುರಿತು ಡಿಜಿ & ಐಜಿಪಿಯಿಂದ ಸ್ಪಷ್ಟನೆ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಡಿ.19ರಂದು ಇಡೀ ರಾತ್ರಿ ನಡೆದ ಪೊಲೀಸರ ಅಮಾನವೀಯ ವರ್ತನೆ ಮಾಡಿದ್ದಾರೆ. ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಬೆಳಗಾವಿ ನಗರ ಪೊಲೀಸ್ ಕಮಿಷನರ್​​ ಯಡಾ ಮಾರ್ಟಿನ್​, ಎಸ್‌ಪಿ ಗುಳೇದ್ ಮತ್ತು ಇತರೆ ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದು, ತಮಗೆ ಪ್ರಾಣಾಪಾಯ ಇದ್ದು, ಸೂಕ್ತ ಭದ್ರತೆ ಕೊಡಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ರಾಷ್ಟ್ರಪತಿ, ಕೇಂದ್ರ ಗೃಹ ಇಲಾಖೆ ಗಮನಕ್ಕೂ ತರುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದು, ದೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧವೂ ಆರೋಪ ಮಾಡಿದ್ದಾರೆ. ದೂರಿನಲ್ಲಿ ಫೇಕ್ ಎನ್‌ಕೌಂಟರ್ ವಿಚಾರ ಪ್ರಸ್ತಾಪಿಸಿರುವ ಸಿ.ಟಿ.ರವಿ, ಡಿಕೆ ಶಿವಕುಮಾರ್​ ಸೂಚನೆ ಮೇರೆಗೆ ಪೊಲೀಸರು ಸುಪಾರಿ ಕಿಲ್ಲರ್ ರೀತಿ ವರ್ತಿಸಿದರು. ನಿಗೂಢ ಸ್ಥಳಗಳಿಗೆ ಕರೆದೊಯ್ದು ಫೇಕ್ ಎನ್‌ಕೌಂಟರ್ ಮಾಡಲು ಸಂಚು ರೂಪಿಸಿದ್ದರು. ಪೊಲೀಸರು ಸುವರ್ಣಸೌಧದೊಳಗೆ ಪ್ರವೇಶ ಮಾಡಿ ಬಂಧಿಸಿದ್ದು, ಅಕ್ರಮ ನನ್ನ ಹಕ್ಕು ಚ್ಯುತಿ ಆಗಿದೆ ಎಂದಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಕೊಲೆ ಮಾಡಿವುದಾಗಿ ಧಮ್ಕಿ ಹಾಕಿದ್ದು, ಅವರ ಬಂಟರಿಂದಲು ಕೂಡ ಫೇಕ್ ಎನ್‌ಕೌಂಟರ್ ಸಂಚು ಆರೋಪ ಮಾಡಿದ್ದಾರೆ. ಸದನದ ವ್ಯಾಪ್ತಿಯಲ್ಲಿ ನಡೆದ ಘಟನೆ ಬಗ್ಗೆ ತನಿಖೆ ನಡೆಸುವ ಅಧಿಕಾರ ಸಿಐಡಿಗಿಲ್ಲ. ಘಟನೆ ನಡೆದ ಸ್ಥಳ ಸಿಐಡಿ ವ್ಯಾಪ್ತಿಗೂ ಬರುವುದಿಲ್ಲ. ನನ್ನ ಬಂಧನ ಅಕ್ರಮ, ಕಾನೂನು ವಿರೋಧಿ ಅಂತ ಹೈಕೋರ್ಟ್ ಅಭಿಪ್ರಾಯಪಟ್ಟಿದೆ ಎಂದು ಸುದೀರ್ಘ ದೂರಿನಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಿದ್ದಾರೆ.ಇನ್ನು ಗವರ್ನರ್ ಭೇಟಿ ಬಳಿಕ ಮಾತಾಡಿದ್ದ ಸಿ.ಟಿ.ರವಿ, ನನ್ನ ಕಬ್ಬಿನ ಗದ್ದೆ, ಕ್ರಷರ್​ಗೆ ಕರ್ಕೊಂಡು ಹೋಗಿ ಎನ್​ಕೌಂಟರ್ ಮಾಡಲು ಯತ್ನಿಸಿದ್ದರು. ಒಂದೋ ಹತ್ಯೆ ಮಾಡಬೇಕು, ಇಲ್ಲವೇ ಆತ್ಮಹತ್ಯೆಗೆ ಶರಣಾಗಬೇಕು ಅನ್ನುವಂತೆ ಕಾಟ ಕೊಟ್ಟರು ಅಂತಾ ಆರೋಪಿಸಿದ್ದಾರೆ. ಇತ್ತ ಎಂಎಲ್​ಸಿ ರವಿಕುಮಾರ್ ಸಹಾ ಆಕ್ರೋಶ ಹೊರ ಹಾಕಿದ್ದಾರೆ.

4. ಸರ್ಕಾರಕ್ಕೆ ಬಿ.ವೈ ವಿಜಯೇಂದ್ರ ಎಚ್ಚರಿಕೆ , CBI ಗೆ ವಹಿಸದಿದ್ದಲ್ಲಿ ಪ್ರತಿಭಟನೆ

ಆರ್ ಡಿ ಪಿ ಆರ್, ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಭಾಗಿಯಾಗಿದ್ದಾರೆ ಎನ್ನಲಾದ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನ ಸಿಬಿಐ ಗೆ ಹಸ್ತಾಂತರಿಸಬೇಕು . ಇಲ್ಲಂದ್ರೆ ಜನವರಿ 4ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ನಗರದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಪ್ರಕರಣವನ್ನು ಸಿಬಿಐಗೆ ವಹಿಸಲು ರಾಜ್ಯ ಸರ್ಕಾರ ವಿಫಲವಾದಲ್ಲಿ ಜನವರಿ 4 ರಂದು ಕಲಬುರಗಿಯಲ್ಲಿ ಪಕ್ಷದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಕಲಬುರಗಿಯಲ್ಲಿರುವ ಪ್ರಿಯಾಂಕ್ ಖರ್ಗೆ ಅವರ ನಿವಾಸಕ್ಕೂ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಪ್ರಿಯಾಂಕ್ ಖರ್ಗೆ ವಿರುದ್ಧ ಕ್ರಮ ಕೈಗೊಂಡರೆ ದೆಹಲಿಯಿಂದ ನಿಮಗೆ ಕರೆ ಬರುತ್ತದೆ ಮತ್ತು ನಿಮ್ಮ ಖುರ್ಚಿಗೆ ಕುತ್ತು ಬರುತ್ತದೆ ಎಂದು ಹೆದರಬೇಡಿ. ಯಾವುದಕ್ಕೂ ಹೆದರಬೇಡಿ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಕ್ರಮ ಕೈಗೊಳ್ಳಿ. ಹಿಂದುಳಿದ ವರ್ಗಗಳ ಚಾಂಪಿಯನ್ ಆಗಿರುವುದಾಗಿ ನೀವೆ ಹೇಳಿಕೊಂಡಿದ್ದೀರಿ. ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ’ ಎಂದರು. ಅಲ್ಲದೇ ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ರಾಜ್ಯದಲ್ಲಿ ಈಗಿನಂತೆ ಹಿಂದೆಂದೂ ಆಗಿರಲಿಲ್ಲ. ಮೃತ ಗುತ್ತಿಗೆದಾರನ ಸಹೋದರಿಯರು ಸಹಾಯ ಕೋರಿ ಪೊಲೀಸರ ಮೊರೆ ಹೋಗಿದ್ದರು. ಆದರೆ, ಪೊಲೀಸರು ಅವರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಬದಲಾಗಿ ಪೊಲೀಸರು ಅವರನ್ನು ಅವಮಾನಿಸಿದ್ದಾರೆ. ಪೊಲೀಸರ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ. ಅವರು ಕ್ರಮ ಕೈಗೊಂಡಿದ್ದಿದ್ದರೆ ಗುತ್ತಿಗೆದಾರನ ಜೀವ ಉಳಿಸಬಹುದಿತ್ತು’ ಅಂತ ವಿಜಯೇಂದ್ರ ಆರೋಪಿಸಿದ್ದಾರೆ.

 

5.ಸರ್ಕಾರದಿಂದ ಮಹತ್ವದ ನಿರ್ಧಾರ , ಪ್ರಿಯಾಂಕ್ ಖರ್ಗೆ ಮೇಲೆ ಬಿಜೆಪಿ ಆರೋಪ

ಬೀದರ್ ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಳ್ ಜೀವ ಕಳೆದುಕೊಂಡ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಇದರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ತಳುಕು ಹಾಕಿಕೊಂಡಿದ್ದು ವಿರೋಧ ಪಕ್ಷ ರಾಜೀನಾಮೆಗೆ ಆಗ್ರಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ಕೊಡುತ್ತೇವೆ ಅಂತ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಡಾ.ಜಿ ಪರಮೇಶ್ವರ್ , ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಯವರ ಮೇಲೆ ಬಿಜೆಪಿ ಆರೋಪ ಮಾಡಿದೆ. ಇದನ್ನು ಸಿಐಡಿಗೆ ಕೊಟ್ಟಿದ್ದೇವೆ. ಇಂದು ಈ ಬಗ್ಗೆ ಅಧಿಕೃತವಾಗಿ ಆದೇಶ ಹೊರಡಿಸಲಾಗುವುದು. ಸಚಿವರ ಮೇಲೆ ಅನಾವಶ್ಯಕವಾಗಿ ಆರೋಪ ಮಾಡುತ್ತಿರುವುದು ಸರ್ಕಾರಕ್ಕೆ ಸರಿ ಬರಲ್ಲ. ಜೀವ ಕಳೆದುಕೊಂಡವರು ಬರೆದಿರುವ ಪತ್ರದಲ್ಲಿ ಸಚಿವರ ಹೆಸರು ಕೂಡ ಇಲ್ಲ. ಆದರೂ ಸಚಿವರ ಹೆಸರನ್ನು ಬಳಸಿಕೊಂಡು ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಅಂತ ಹೇಳಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆ ಏನೆಂದು ತಿಳಿಯಲು ನಾವು ಹಾಗೂ ಸಿಎಂ ಸಿದ್ದರಾಮಯ್ಯ ಅವರು ಚರ್ಚೆ ಮಾಡಿ ಪ್ರಕರಣವನ್ನು ಸಿಐಡಿಗೆ ಕೊಟ್ಟಿದ್ದೇವೆ. ಬಿಜೆಪಿ ಹೇಳಿದಂತೆ ಎಲ್ಲ ಕೇಸ್​ ಅನ್ನು ತೆಗೆದುಕೊಂಡು ಹೋಗಿ ಸಿಬಿಐಗೆ ಕೊಡುವುದಕ್ಕೆ ಆಗಲ್ಲ. ಎಲ್ಲ ರಾಜಕೀಯ ಮಾಡೋಕೆ ಹೋಗಬಾರದು. ಸಿಐಡಿ ಸಮರ್ಥವಾಗಿದೆ. ಈಗಾಗಲೇ ಅನೇಕ ಕೇಸ್​ಗಳು ಪರಿಹರಿಸಿದೆ. ಪ್ರಕರಣ ಸಂಬಂಧ ಪ್ರಿಯಾಂಕ್ ಖರ್ಗೆ ರಾಜೀನಾಮೆ ‌ಕೊಡುವ ಅಗತ್ಯವಿಲ್ಲ ಅಂತ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.

6. ಸಿಎಂ ಸಿದ್ದು ವಿರುದ್ಧ ಆರ್.ಅಶೋಕ್ ಟೀಕೆ .ಸಿದ್ದು ಸಿಎಂ ಆದಾಗೆಲ್ಲಾ ಆತ್ಮಹತ್ಯೆ ಗ್ಯಾರಂಟಿ

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ರಾಜಕೀಯ ತಿರುವು ಪಡೆದುಕೊಂಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವಿನ ವಾಕ್ಸಮರಕ್ಕೆ ಅವಕಾಶ ಮಾಡಿಕೊಟ್ಟಿದೆ! ಪ್ರಕರಣಕ್ಕೆ ಸಂಬಂಧಿಸಿ ಸಚಿವ ಪ್ರಿಯಾಂಕ್ ಖರ್ಗೆ ಮನೆಗೆ ಮುತ್ತಿಗೆ ಹಾಕುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದೀಗ ವಿಪಕ್ಷ ನಾಯಕ ಆರ್.ಅಶೋಕ್ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.’ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದಾಗಲೆಲ್ಲ ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ಭಾಗ್ಯ, ಆತ್ಮಹತ್ಯೆ ಗ್ಯಾರೆಂಟಿ’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ, ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ, ಕೋಲಾರ ಜಿಲ್ಲಾಧಿಕಾರಿ ಡಿ.ಕೆ.ರವಿ ಆತ್ಮಹತ್ಯೆ, ಕಲಬುರಗಿ ದಕ್ಷ ಪೊಲೀಸ್‌ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಹತ್ಯೆ, ಅನ್ನಭಾಗ್ಯ ಹಗರಣದ ಸಾಕ್ಷ್ಯ ಸಂಗ್ರಹಿಸಿದ್ದ ಐ.ಎ.ಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಉತ್ತರ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಸಾವು, ಹೂವಿನ ಹಡಗಲಿಯ ಡಿವೈಎಸ್‌ಪಿ ಆಗಿದ್ದ ಅನುಪಮಾ ಶೆಣೈಗೆ ಕಿರುಕುಳ ನಂತರ ನೌಕರಿಗೆ ರಾಜೀನಾಮೆ, ಮೈಸೂರಿನ ಜಿಲ್ಲಾಧಿಕಾರಿ ಶಿಖಾ ಅವರಿಗೆ ಸಿಎಂ ಆಪ್ತರಿಂದ ಕಿರುಕುಳ, ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಮಹಾನಿರ್ದೇಶಕಿಯಾಗಿದ್ದ ರಶ್ಮಿ ಅವರ ಮೇಲೆ ಹಾಡುಹಗಲೇ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ.

7.ಹೆಸರು ದುರುಪಯೋಗ ಮಾಡಿ ವಂಚನೆ ! ಐಶ್ವರ್ಯಾ ಗೌಡ ವಿರುದ್ಧ ಡಿಕೆ ಸುರೇಶ್ ದೂರು

ತನ್ನ ಹೆಸರು ಹೇಳಿಕೊಂಡು ಚಿನ್ನದ ವ್ಯಾಪಾರಿ ಬಳಿ ಕೋಟಿ ಕೋಟಿ ವಂಚನೆ ಮಾಡಿದ ಆರೋಪದಲ್ಲಿ ಜೈಲು ಸೇರಿರುವ ಐಶ್ವರ್ಯ ಗೌಡ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರಿಗೆ ಮಾಜಿ ಸಂಸದ ಡಿಕೆ ಸುರೇಶ್ ದೂರು ನೀಡಿದ್ದಾರೆ.ಡಿಕೆ ಸುರೇಶ್ ನನ್ನ ಸಹೋದರ ಎಂದು ಹೇಳಿಕೊಂಡು ಚಿಕ್ಕದ ಅಂಗಡಿ ಮಾಲೀಕರ ಬಳಿಕ ಐಶ್ವರ್ಯ ಗೌಡ ಕೋಟಿ ಕೋಟಿ ವಂಚನೆ ಮಾಡಿದ್ದಳು. ವನಿತಾ ಐತಾಳ ನೀಡಿರುವ ದೂರಿನ ಮೇರೆಗೆ ಈಗಾಗಲೇ ಐಶ್ವರ್ಯ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.ಪ್ರಕರಣದಲ್ಲಿ ತನ್ನ ಹೆಸರು ತಳುಕು ಹಾಕಿಕೊಂಡ ಹಿನ್ನೆಲೆಯಲ್ಲಿ ಡಿಕೆ ಸುರೇಶ್ ಸ್ಪಷ್ಟನೆ ನೀಡಿದ್ದರು. “ನಮಗೆ ಇರೋದು ಒಬ್ಬಳೇ ತಂಗಿ. ನನಗೆ ಗೊತ್ತಿಲ್ಲದೇ ಇವನಿಗೆ ಇನ್ನೊಬ್ಬಳು ತಂಗಿ ಯಾರು ಎಂದು ನಮ್ಮ ಅಣ್ಣ ಡಿಕೆ ಶಿವಕುಮಾರ್‌ ಬೇಜಾರಾಗಿದ್ದಾರೆ” ಎಂದು ಹೇಳಿದ್ದರು. ಈ ಪ್ರಕರಣದ ಬಗ್ಗೆ ಕೆಲವು ದಿನಗಳ ಹಿಂದೆ ಗಮನಿಸಿದ್ದೇನೆ. ಯಾರೇ ನನ್ನ ಹೆಸರು ದುರ್ಬಳಕೆ ಮಾಡಿಕೊಂಡಿದ್ದರೂ ಈ ಬಗ್ಗೆ ತನಿಖೆ ಮಾಡಲಿ ಎಂದು ಹೇಳಿದ್ದರು. ಅಲ್ಲದೆ, ಈ ಸಂಬಂಧ ಶೀಘ್ರವೇ ಪೊಲೀಸ್‌ ಆಯುಕ್ತರಿಗೆ ದೂರು ನೀಡುತ್ತೇನೆ ಎಂದು ಅವರು ತಿಳಿಸಿದ್ದರು. ಯಾರೇ ಈ ತಪ್ಪು ಮಾಡಿದ್ದರೂ ತಕ್ಕ ಶಿಕ್ಷೆ ಕೊಡಲಿ. ಅನ್ಯಾಯ ಆಗಿರುವವರಿಗೆ ನ್ಯಾಯ ಸಿಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಇದರ ಬೆನ್ನಲ್ಲೇ ಡಿಕೆ ಸುರೇಶ್ ಅವರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಡಿಕೆ ಸುರೇಶ್ ದೂರನ್ನು ನೀಡಿದ್ದಾರೆ. ಪತ್ರದ ಮೂಲಕ ದೂರು ನೀಡಿ ಪ್ರಕರಣದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

8.ನಟ ದರ್ಶನ್ ಗೆ ಶಾಕ್ !, ಸದ್ಯದಲ್ಲೇ ಜಾಮೀನು ರದ್ದು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸರ್ಕಾರ ಅಸ್ತು ಎಂದಿದೆ. ದರ್ಶನ್ ಜಾಮೀನು ರದ್ದಿಗೆ ಮೇಲ್ಮನವಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಮೇಲ್ಮನವಿ ಸಲ್ಲಿಕೆಗೆ ಗೃಹ ಇಲಾಖೆ ಅಧಿಕಾರಿಗಳಿಂದ ಪೊಲೀಸ್‌ ಇಲಾಖೆಗೆ ಆದೇಶ ಸಿಕ್ಕಿದೆ.ನಟ ದರ್ಶನ್ ಗೆ ಹೈಕೋರ್ಟ್ ಪೂರ್ಣ ಪ್ರಮಾಣದ ಜಾಮೀನು ನೀಡಿದ್ದು, ಬೆಂಗಳೂರು ಪೊಲೀಸರು ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಸಿದ್ದತೆ ನಡೆಸುತ್ತಿದ್ದಾರೆ. ಮೆರಿಟ್ಸ್ ಆಫ್ ದಿ ಕೇಸ್’ ಮೇಲೆ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲು ಪೊಲೀಸರು ಸಿದ್ದತೆ ನಡೆಸಿದ್ದು, ನಟ ದರ್ಶನ್ ಸೇರಿ ಎಲ್ಲಾ ಆರೋಪಿಗಳ ಜಾಮೀನು ರದ್ದು ಕೋರಿ ಪೊಲೀಸರು ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದಾರೆ.ನಟ ದರ್ಶನ್ , ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳಿಗೆ ಹೈಕೋರ್ಟ್ ಇತ್ತೀಚೆಗೆ ಜಾಮೀನು ಮಂಜೂರು ಮಾಡಿತ್ತು. ಈ ಮಧ್ಯೆ ನಟ ದರ್ಶನ್ ಸರ್ಜರಿ ಮಾಡಿಸಿಕೊಳ್ಳದೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಈ ಬೆನ್ನಲ್ಲೇ ಪೊಲೀಸರು ಸುಪ್ರೀಂಕೋರ್ಟ್ ಮೊರೆ ಹೋಗಲು ಸಿದ್ದತೆ ನಡೆಸಿದ್ದು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ.

9.ಉಗ್ರರು ರಾಹುಲ್, ಪ್ರಿಯಾಂಕಾಗೆ ವೋಟ್ ಹಾಕ್ತಾರೆ, ಸಚಿವ ನಿತೇಶ್ ರಾಣೇ ವಿವಾದಾತ್ಮಕ ಹೇಳಿಕೆ

ಕೇರಳವು ಮಿನಿ ಪಾಕಿಸ್ತಾನವಾಗಿದೆ ಅಂತ ಹೇಳುವ ಮೂಲಕ ಮಹಾರಾಷ್ಟ್ರದ ಸಚಿವ ನಿತೀಶ್‌ ರಾಣೆ ವಿವಾದ ಸೃಷ್ಟಿಸಿದ್ದಾರೆ. ಸಚಿವರ ಹೇಳಿಕೆ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.ಪುಣೆ ಜಿಲ್ಲೆಯ ಪುರಂದರ ತಾಲೂಕಿನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಚಿವ, ಕೇರಳವು ಮಿನಿ ಪಾಕಿಸ್ತಾನವಾಗಿದೆ. ಆದ್ದರಿಂದಲೇ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅಲ್ಲಿಂದ ಆಯ್ಕೆಯಾಗಿದ್ದಾರೆ. ಕೇರಳ ಮಿನಿ ಪಾಕಿಸ್ತಾನವಾಗಿದ್ದರಿಂದಲೇ ಗಾಂಧಿಗಳು ಗೆಲ್ಲುತ್ತಿದ್ದಾರೆ. ಏಕೆಂದರೆ ಎಲ್ಲಾ ಭಯೋತ್ಪಾದಕರು ಅವರಿಗೆ ಮತ ಹಾಕುತ್ತಾರೆ. ಇದು ಸತ್ಯ… ಸತ್ಯ… ಸತ್ಯ… ಅಂತ ನಾಲಿಗೆ ಹರಿಬಿಟ್ಟಿದ್ದಾರೆ. ವಿವಾದಿತ ಹೇಳಿಕೆ ಬೆನ್ನಲ್ಲೇ ಸಚಿವ ನಿತೀಶ್‌ ರಾಣೆ ವಿರುದ್ಧ ಮಹಾ ವಿಕಾಸ್‌ ಅಘಾಡಿ ಒಕ್ಕೂಟ ಕೆರಳಿ ಕೆಂಡವಾಗಿದೆ. ಶಿವಸೇನೆ ನಾಯಕ ಆನಂದ್ ದುಬೆ ಮಾತನಾಡಿ, ಪ್ರಧಾನಿ ಮೋದಿ ಕೇವಲ 1 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರಿಂದ ಬಿಜೆಪಿ ನಾಯಕರು ಚಿಂತಿತರಾಗಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು 4 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿರುವುದು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಕೇರಳ ಭಾರತದ ಭಾಗ, ಅಲ್ಲಿ ವಾಸಿಸುತ್ತಿರುವ ಜನ ನಮ್ಮವರು. ಪಾಕಿಸ್ತಾನದಂತೆ ಆಗುತ್ತಿದೆ ಅನ್ನೋದಾದ್ರೆ ಅಮಿತ್‌ ಶಾ ಅವರಿಗಾಗಲಿ, ರಾಜ್ಯಪಾಲರಿಗಾಗಲಿ ಏಕೆ ದೂರು ನೀಡಿಲ್ಲ. ಇದು ನೀಚತನದ ರಾಜಕೀಯ ಎಂದು ಕಿಡಿ ಕಾರಿದ್ದಾರೆ. ಇನ್ನೂ ವಿವಾದದ ಬೆನ್ನಲ್ಲೇ ನಿತೀಶ್‌‌ ರಾಣೆ ಸ್ಪಷ್ಟನೆ ನೀಡಿದ್ದು, ಕೇರಳದ ಜನರನ್ನಲ್ಲ ಪರಿಸ್ಥಿತಿಯನ್ನ ಪಾಕಿಸ್ತಾನದೊಂದಿಗೆ ಹೋಲಿಕೆ ಮಾಡಿರುವುದಾಗಿ ಉಲ್ಟಾ ಹೊಡೆದಿದ್ದಾರೆ.ಈ ಬೆನ್ನಲ್ಲೇ ಕೇಂದ್ರ ಸಚಿವ ನಾರಾಯಣ ರಾಣೆ ಮಾತನಾಡಿದ್ದು, ಕೇರಳ ಭಾರತದ ಭಾಗವೇ ಆದರೂ ಅಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಎಲ್ಲರೂ ಚಿಂತಿಸಬೇಕಾದ ವಿಷಯ. ಹಿಂದೂಗಳನ್ನು ಮುಸ್ಲಿಂ ಮತ್ತು ಕ್ರೈಸ್ತರನ್ನಾಗಿ ಪರಿವರ್ತನೆ ಮಾಡುತ್ತಿರುವುದು ಅಲ್ಲಿ ದಿನನಿತ್ಯದ ವಿಷಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

 

 

 

 

- Advertisement -

Latest Posts

Don't Miss