Saturday, June 21, 2025

Latest Posts

TOP NEWS : ಇಂದಿನ ಪ್ರಮುಖ ಸುದ್ದಿಗಳು – 31/12/2024

- Advertisement -

1. ನ್ಯೂ ಇಯರ್ ಸೆಲೆಬ್ರೇಷನ್ ಗೆ ನ್ಯೂ ರೂಲ್ಸ್ ,ವಿಚಿತ್ರ ಮಾಸ್ಕ್‌ ಧರಿಸುವವರಿಗೆ ಎಚ್ಚರಿಕೆ!

2024 ಕಳೆದು 2025ಕ್ಕೆ ಕಾಲಿಡಲು ಇನ್ನು ಜಸ್ಟ್ ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಹೊಸ ವರ್ಷದ ಸಂಭ್ರಮದಲ್ಲಿ ಮಿಂದೇಳಲು ಸಿಟಿ ಮಂದಿ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಈ ಬಾರಿ ನ್ಯೂ ಇಯರ್ ವೇಳೆ ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದು, ಪೋಲಿ ಆಟ ಆಡಿದರೆ ಜೈಲೂಟ ಪಿಕ್ಸ್ ಆಗಲಿದೆ. ಇನ್ನು ನ್ಯೂ ಇಯರ್‌ ಸೆಲೆಬ್ರೇಷನ್‌ನಲ್ಲಿ ಬೇಕಾಬಿಟ್ಟಿ ಹಾರಾಡಿದ್ರೆ, ವಿಚಿತ್ರ ವಿಚಿತ್ರ ಮಾಸ್ಕ್‌ ಧರಿಸುವವರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.ಹೊಸ ವರ್ಷಾಚರಣೆ ಹಿನ್ನೆಲೆ ಇಂದು ಎಂಜಿ ರೋಡ್‌, ಬ್ರಿಗೇಡ್‌ ರೋಡ್‌ನಲ್ಲಿ ಜನಜಂಗುಳಿಯೇ ಇರುತ್ತೆ. ಈ ಮಧ್ಯೆ ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೆ ಸಾವಿರಗಟ್ಟಲೆ ಪೊಲೀಸರನ್ನೂ ನಿಯೋಜನೆ ಮಾಡಲಾಗಿದೆ.ಇದೀಗ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದ್ದು, ಈ ಪ್ರಕಾರ ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ತೊಂದರೆ ಮಾಡುವಂತಿಲ್ಲ. ಇನ್ನು ಆಚರಣೆ ವೇಳೆ ಜೋರಾಗಹಿ ಕೂಗುವುದು, ಪಿಪಿ ಊದುವುದು, ವಿಚಿತ್ರವಾಗಿ ವರ್ತಿಸುವುದು, ಭೀಬತ್ಸವಾಗಿರುವ ಮಾಸ್ಕ್ ಗಳನ್ನ ಉಪಯೋಗಿಸದಂತೆ ಮಾರ್ಗಸೂಚಿ ನೀಡಲಾಗಿದೆ. ಇನ್ನು ಈ ಮಾರ್ಗಸೂಚಿಗಳನ್ನು ಮೀರಿದರೆ ಅಂತವರ ವಿರುದ್ದ ಪೊಲೀಸರು ಕ್ರಮ ಕೈಗೊಳ್ಳಲು ತಯಾರಿಯನ್ನೂ ನಡೆಸಿದ್ದಾರೆ. ಇನ್ನು 2024 ರ ಕೊನೆ ದಿನದ ಕೊನೆ ಕ್ಷಣಕ್ಕೆ ಕೌಂಟ್‌‌ಡೌನ್‌ ಶುರುವಾಗಿದೆ. ಎಂಜಿ ರೋಡ್ ನಲ್ಲಿ ಈಗಾಗಲೇ ಪೊಲೀಸರು ದೌಡಾಯಿಸಿದ್ದು, SDRF ಎರಡು ವಾಹನಗಳು ಹಾಗೂ 20 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಅಷ್ಟೇ ಅಲ್ಲದೇ KSRP ಯ ಎರಡು ತುಕಡಿಯನ್ನೂ ನಿಯೋಜಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕಮಾಂಡ್ & ಕಂಟ್ರೋಲ್‌ ರೂಂ, ಅಗ್ನಿಶಾಮಕ ದಳದ 10 ಜನ ಸಿಬ್ಬಂದಿಗಳನ್ನೂ ನಿಯೋಜಿಸಲಾಗಿದೆ. ಹಾಗೆಯೇ ಮಹಿಳೆಯರ ಸುರಕ್ಷತೆಗಾಗಿ ವುಮೈನ್ ಐಲ್ಯಾಂಡ್ ಅನ್ನೂ ಸ್ಥಾಪಿಸಿದ್ದಾರೆ.ಬೆಂಗಳೂರಿನಲ್ಲಿ ಹೊಸವರ್ಷದ ಸಂಭ್ರಮಾಚರಣೆಗೆ ಕ್ಷಣಗಣನೆ ಶುರುವಾಗಿದೆ. ಈ ಮಧ್ಯೆ ಬೆಂಗಳೂರಿನ ಎಂಜಿ ರೋಡ್, ಬ್ರಿಗೇಡ್‌ ರಸ್ತೆಗಳಲ್ಲಿ ಇಂದು ಜನಸಾಗರವೇ ತುಂಬಿರುತ್ತೆ. ಈ ಮಧ್ಯೆ ಬೆಂಗಳೂರಿನಲ್ಲಿ ನ್ಯೂಇಯರ್ ಹಿನ್ನೆಲೆ ನಗರದ 32 ಫ್ಲೈ ಓವರ್‌ಗಳು ಬಂದ್‌ ಆಗಲಿದೆ.ಇಂದು ರಾತ್ರಿ 9 ಗಂಟೆಯ ಬಳಿಕ ನಗರದ 32 ಫ್ಲೈ ಓವರ್‌‌ಗಳು ಬಂದ್‌ ಇರಲಿದೆ. ಯಾವುದೇ ಮುನ್ನೆಚ್ಚರಿಕಾ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇಂದು ರಾತ್ರಿ 9 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೂ ಈ 32 ಫ್ಲೈ ಓವರ್‌ಗಳು ಕ್ಲೋಸ್ ಇರಲಿದೆ. ಈ ಕಾರಣ ವಾಹನ ಸವಾರರು ಸರ್ವೀಸ್ ರಸ್ತೆಯನ್ನೇ ಬಳಸಬೇಕು ಎನ್ನಲಾಗಿದೆ.

2. ಹೊಸ ವರ್ಷದ ಸಂಭ್ರಮಾಚರಣೆ ,ರಾಜ್ಯದಲ್ಲಿ ದಾಖಲೆ ಬರೆದ ಮಧ್ಯ ಮಾರಾಟ

ಬೆಂಗಳೂರು ಮಾತ್ರವಲ್ಲದೇ ನಾಡಿನ ಮೂಲೆ ಮೂಲೆಯಲ್ಲೂ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿದ್ದು, ಇದರ ನಡುವೆಯೇ ಕರ್ನಾಟಕದಲ್ಲಿ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟ ಆಗಿದೆ.ಮದ್ಯ ಮಾರಾಟ ಮಾಡಲು ಲೈಸೆನ್ಸ್ ಹೊಂದಿರುವವರು ಸುಮಾರು 150 ಕೋಟಿ ರೂಪಾಯಿ ಸಾಲ ಸೌಲಭ್ಯ ಪಡೆದುಕೊಂಡಿದ್ದಾರೆ. ಡಿಸೆಂಬರ್ 28ರಂದು 6,22,062 ಕೇಸ್ ವಿಸ್ಕಿ ಮತ್ತು ಇತರ ಸ್ಪಿರಿಟ್ ಖರೀದಿ ಮಾಡಲಾಗಿದೆ. ಉಳಿದಂತೆ 4,04,998 ಕೇಸ್ ಬಿಯರ್ ಸೇರಿದಂತೆ 10,27,060 ಕೇಸ್ ಮದ್ಯ ಮಾರಾಟ ಆಗಿದೆ. ಇದರಲ್ಲಿ 80.58 ಕೋಟಿ ಮೊತ್ತದ ಬಿಯರ್ ಇದ್ದರೆ, 327,50 ಕೋಟಿ ಮೌಲ್ಯದ ಸ್ಪಿರಿಟ್ಸ್ ಮಾರಾಟವಾಗಿದೆ. ಒಂದೇ ದಿನದಲ್ಲಿ ಇಷ್ಟು ಮೊಟ್ಟದಲ್ಲಿ ಮದ್ಯ ಮಾರಾಟವಾಗಿದ್ದು, ದಾಖಲೆ ನಿರ್ಮಿಸಿದೆ. ಇದರೊಂದಿಗೆ ಮದ್ಯ ಖರೀದಿಗೆ ಸಹಕಾರ ನೀಡಿದ ಅಧಿಕಾರಿಗಳಿಗೆ ಸಂಘವು ಧನ್ಯವಾದ ತಿಳಿಸಿದೆ.

3. ನ್ಯೂ ಇಯರ್ ಸೆಲೆಬ್ರೇಷನ್ ಗೆ ಕೌಂಟ್‌‌ಡೌನ್‌.ವಿದೇಶದಲ್ಲಿ ರಾಜಕಾರಣಿಗಳ ಸಂಭ್ರಮಾಚರಣೆ

ಜನಸಾಮಾನ್ಯರು ಹೊಸ ವರ್ಷಾಚರಣೆಯನ್ನು ಆಚರಿಸುವ ವಿಧಾನವೇ ಬೇರೆ ಮತ್ತು ಗಣ್ಯರು, ಸೆಲೆಬ್ರಿಟಿ ಹಾಗೂ ರಾಜಕಾರಣಿಗಳು ಆಚರಿಸುವ ರೀತಿ ಬೇರೆ. ಉಳ್ಳವರು ಹಣವನ್ನು ನೀರಿನತೆ ಚೆಲ್ಲಿ ತಮಗಿಷ್ಟವಾಗುವ ರೀತಿಯಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ವಿಷಯವೇನೆಂದರೆ, ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನ್ಯೂ ಈಯರ್ ಸೆಲೆಬ್ರೇಷನ್​ಗಾಗಿ ಕುಟುಂಬ ಸಮೇತ ಟರ್ಕಿ ಮತ್ತು ಕೆನಡಾ ತೆರಳಿದ್ದಾರೆ. ಹಾಗೆಯೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕುಟುಂಬದ ಜೊತೆ ವಿದೇಶಕ್ಕೆ ತೆರಳಿದ್ದು ಅಲ್ಲೇ ಹೊಸ ವರ್ಷವನ್ನು ಸ್ವಾಗತಿಸಲಿದ್ದಾರೆ. ರಾಜ್ಯದ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಮತ್ತು ಈಗ ಕೇಂದ್ರದಲ್ಲಿ ಸಚಿವರಾಗಿರುವ ಹೆಚ್ ಡಿ ಕುಮಾರಸ್ವಾಮಿ ತಮ್ಮ ಕುಟುಂಬದ ಜೊತೆ ಗೋವಾದಲ್ಲಿ ಹೊಸವರ್ಷದ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

4.ಮತ್ತೋರ್ವರಿಗೂ ಮಹಾ ವಂಚನೆ!ಡಿ.ಕೆ ಸುರೇಶ್ ನಕಲಿ ತಂಗಿ ಕರ್ಮಕಾಂಡ!

ಡಿ ಕೆ ಸುರೇಶ್ ತಂಗಿ ಅಂತ ಹೇಳಿಕೊಂಡು ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದೆ. ಐಶ್ವರ್ಯ ಗೌಡ 8.41 ಕೋಟಿ ರೂಪಾಯಿ ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ್ದಾರೆ ಅಂತ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ ಮಾಲೀಕರು ದೂರು ನೀಡಿದ್ದಾರೆ. ಇದೀಗ ಇದೇ ಐಶ್ವರ್ಯ ಗೌಡ ವಿರುದ್ಧ ಇನ್ನೊಂದು ವಂಚನೆ ಕೇಸ್ ದಾಖಲಾಗಿದೆ. ಸದ್ಯ ಚಿನ್ನಾಭರಣ ವಂಚನೆ ಕೇಸ್‌ನಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಐಶ್ವರ್ಯ ಗೌಡ ದಂಪತಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಂಸದ ಡಿ.ಕೆ.ಸುರೇಶ್ ತಂಗಿ ಹೆಸರಲ್ಲಿ ಮತ್ತೊಬ್ಬರಿಗೆ ಐಶ್ವರ್ಯಗೌಡ ವಂಚನೆ ಮಡಿದ್ದಾರೆ ಅಂತ ಐನಾತಿ ವಂಚಕಿ ಐಶ್ವರ್ಯಗೌಡ ವಿರುದ್ಧ ಬೆಂಗಳೂರಿನಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಆರ್.ಆರ್.ನಗರ ಠಾಣೆಯಲ್ಲಿ ಐಶ್ವರ್ಯಗೌಡ ಹಾಗೂ ಆಕೆಯ ಪತಿ ಹರೀಶ್ ಮತ್ತು ಬೌನ್ಸರ್ ಗಜಾ ಎಂಬಾತನ ವಿರುದ್ಧ ಕೇಸ್ ದಾಖಲಾಗಿದೆ.ಆರ್.ಆರ್.ನಗರ ನಿವಾಸಿ ಶಿಲ್ಪಗೌಡ ಎಂಬುವವರು ದಂಪತಿ ವಿರುದ್ಧ ದೂರು ನೀಡಿದ್ದಾರೆ. ಇವರ ವಿರುದ್ಧ 3.25 ಕೋಟಿ ಹಣ ಹಾಗೂ 430 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ್ದಾಳೆಂದು ದೂರು ದಾಖಲಿಸಿದ್ದಾರೆ. ಆರ್.ಆರ್.ನಗರದ ನಿವಾಸಿ ಶಿಲ್ಪಗೌಡ ಎಂಬುವವರಿಗೆ 2022ರಲ್ಲಿ ಪರಿಚಿತಳಾಗಿದ್ದ ಐಶ್ವರ್ಯಗೌಡ, ನಾನು‌ ಡಿ.ಕೆ.ಸುರೇಶ್ ತಂಗಿ. ಗೋಲ್ಡ್ ಬ್ಯುಸಿನೆಸ್ ಮಾಡ್ತೀನಿ, ‍ಚಿಟ್ ಫಂಡ್ ವ್ಯವಹಾರ ಮಾಡ್ತೀನಿ. ರಿಯಲ್ ಎಸ್ಟೇಟ್ ಹಾಗೂ ವಿಲ್ಲಾ ನಿರ್ಮಾಣ ಮಾಡ್ತಿನೆಂದು ಪರಿಚಯ ಮಾಡ್ಕೊಂಡಿದ್ದಳಂತೆ. 2022 ರಿಂದ 2023 ರವರೆಗೆ ಹಂತ ಹಂತವಾಗಿ 3.25 ಕೋಟಿ ಹಣ ಹಾಗೂ 430 ಗ್ರಾಂ ಚಿನ್ನಾಭರಣವನ್ನು ಐಶ್ವರ್ಯ ಗೌಡ ಪಡೆದಿದ್ದಾರೆ ಅಂತ ಶಿಲ್ಪಾ ಗೌಡ ಪ್ರಕರಣ ದಾಖಲಿಸಿದ್ದಾರೆ. ನೀಡಿದ ಹಣ ಹಾಗೂ ‍ಚಿನ್ನಾಭರಣ ವಾಪಸ್ ಕೇಳಿದಾಗ ನನಗೆ ದೊಡ್ಡ ರಾಜಕಾರಣಿಗಳ ಬೆಂಬಲವಿದೆ. ನಿನಗೆ ಒಂದು ಗತಿ ಕಾಣಿಸುತ್ತೇನೆ ಬೆದರಿಕೆ ಹಾಕಿರುವುದಾಗಿ ಶಿಲ್ಪಾ ಗೌಡ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

5. ಡಿಜಿಪಿ ಅಲೋಕ್ ಮೋಹನ್​ಗೆ ಸಿಟಿ ರವಿ ದೂರು,ಡಿಕೆ ಶಿ, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆರೋಪ

ಡಿ. 19 ರಂದು ರಾತ್ರಿ ಅಕ್ರಮವಾಗಿ ಬಂಧಿಸಿ ಅಲೆದಾಡಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಜಿ&ಐಜಿಪಿ ಅಲೋಕ್ ಮೋಹನ್​ಗೆ ವಿಧಾನ ಪರಿಷತ್ ಸದಸ್ಯ ಸಿಟಿ ರವಿ 8 ಪುಟಗಳ ದೂರು ನೀಡಿದ್ದಾರೆ. ಇಂದು ನಗರದ ಡಿಜಿಪಿ ಕಚೇರಿಯಲ್ಲಿ ಭೇಟಿ ನೀಡಿ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​, ಬೆಳಗಾವಿ ನಗರ ಪೊಲೀಸ್ ಕಮಿಷನರ್​​ ಯಡಾ ಮಾರ್ಟಿನ್ ಮತ್ತು ಬೆಳಗಾವಿ ಎಸ್​ಪಿ ಭೀಮಾಶಂಕರ್ ಗುಳೇದ್ ವಿರುದ್ಧ ಆರೋಪ ಮಾಡಿದ್ದಾರೆ.ತಮ್ಮನ್ನು ಎತ್ತಿ ಪಶುವಿನ ರೀತಿ ಕಿಡ್ನ್ಯಾಪ್ ಮಾಡಿದ್ದಾರೆಂದು ಬೆಳಗಾವಿ ಪೊಲೀಸ್​ ಕಮಿಷನರ್​, ಎಸ್​ಪಿ ವಿರುದ್ಧ ಸಿ.ಟಿ.ರವಿ ಆರೋಪ ಮಾಡಿದ್ದಾರೆ. ಇಡೀ ಸನ್ನಿವೇಶ ಫೇಕ್ ಎನ್​​ಕೌಂಟರ್ ರೀತಿ ಇತ್ತು. ಲೈಸೆನ್ಸ್ಡ್ ಸುಪಾರಿ ಕಿಲ್ಲರ್​​ಗಳ‌ ರೀತಿ ಇತ್ತು ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಟಿ ರವಿ, ನನ್ನನ್ನು ಅಕ್ರಮವಾಗಿ ಬಂಧಿಸಿ, ದೂರುಕೊಟ್ಟ ಬಳಿಕವೂ ಎಫ್​ಐ ಆರ್ ಹಾಕದೆ ನನ್ನ ಮೇಲೆ ದೌರ್ಜನ್ಯವೆಸಗಿ, ಕೆಲವು ಪ್ರಭಾವಿ ವ್ಯಕ್ತಿಗಳ ನಿದರ್ಶನದಂತೆ ರಾತ್ರಿ ಇಡೀ ನಿರ್ಜನ ಪ್ರದೇಶಗಳಲ್ಲಿ ಸುತ್ತಾಡಿಸಿ, ಸಂಪೂರ್ಣವಾಗಿ ಕಾನೂನಿನ ಉಲ್ಲಂಘನೆ ಮಾಡಿದ ಪೊಲೀಸ್ ಇಲಾಖೆಯ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಗೆ ಬಿಜೆಪಿ ನಿಯೋಗದೊಂದಿಗೆ ತೆರಳಿ ದೂರು ನೀಡಲಾಗಿದೆ ಅಂತ ಬರೆದುಕೊಂಡಿದ್ದಾರೆ.ಇನ್ನು ಪ್ರಕರಣ ಸಂಬಂಧ ಬಿಜೆಪಿ ನಿಯೋಗ ಈ ಹಿಂದೆ ರಾಜ್ಯಪಾಲರಿಗೆ ದೂರು ನೀಡಿತ್ತು. ಹೀಗಾಗಿ ನಿನ್ನೆ ಸಿ.ಟಿ ರವಿಗೆ ಬುಲಾವ್ ನೀಡಿದ್ದ ರಾಜ್ಯಪಾಲರು ಪ್ರಕರಣದ ಸಂಪೂರ್ಣ ವಿವರ ಪಡೆದುಕೊಂಡಿದ್ದರು. ಸಿ.ಟಿ ರವಿ ಕೂಡಾ 8 ಪುಟಗಳ ದೂರು ನೀಡಿದ್ದರು. ಈ ದೂರಿನಲ್ಲಿ ಡಿ.ಕೆ ಶಿವಕುಮಾರ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

 

6.ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಆರೋಪ ,ನಾನು ಬಿಜೆಪಿ ಸಿದ್ಧಾಂತಕ್ಕೆ ವಿರುದ್ಧ!

26 ವರ್ಷದ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಡುತ್ತಿರುವ ಆರೋಪಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ ತಳ್ಳಿಹಾಕಿದ್ದಾರೆ ಮತ್ತು ಅದರ ಸಿದ್ಧಾಂತಕ್ಕೆ ವಿರುದ್ಧವಾಗಿರುವುದರಿಂದ ಬಿಜೆಪಿ ತನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದ್ದಾರೆ. ಎಎನ್‌ಐ ಜೊತೆ ಮಾತನಾಡಿ, ಆತ್ಮಹತ್ಯೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಸಂಬಂಧವಿದೆ ಎಂಬುದನ್ನು ಸಾಬೀತುಪಡಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದರು. ಬಿಜೆಪಿಯು ಎಲ್ಲವನ್ನೂ ಮಾಡಬಹುದು. ಆದರೆ, ಈ ಆತ್ಮಹತ್ಯೆಯು ಸರ್ಕಾರಕ್ಕೂ ಮತ್ತು ನನಗೂ ಹೇಗೆ ಸಂಬಂಧಿಸಿದೆ ಎಂಬುದನ್ನು ಕರ್ನಾಟಕದ ಜನರ ಮುಂದಿಡುವಲ್ಲಿ ಅವರಿಗೆ ಇನ್ನೂ ಸಾಧ್ಯವಾಗುತ್ತಿಲ್ಲ. ಈ ವಿಚಾರದ ಮೂಲಕ ಅವರು ತಮ್ಮ ನಾಯಕತ್ವವನ್ನು ಸ್ಥಾಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಬಿಜೆಪಿ ಈಗ ಒಂದು ಬಣ-ಪ್ರೇರಿತ ಪಕ್ಷವಾಗಿದೆ. ಕರ್ನಾಟಕದಲ್ಲಿ ನಾಯಕತ್ವದ ಕಿತ್ತಾಟ ನಡೆಯುತ್ತಲೇ ಇದೆ. ಅವರು ಎಂದಿನಂತೆ ಈ ಸಾವನ್ನು ರಾಜಕೀಯ ಮಾಡುತ್ತಿದ್ದಾರೆ’ ಅಂತ ದೂರಿದರು. ಇನ್ನು ‘ಬಿಜೆಪಿಯವರು ನನ್ನನ್ನು ಗುರಿಯಾಗಿಸುತ್ತಿದ್ದಾರೆ. ಏಕೆಂದರೆ, ನಾನು ಅವರ ಸಿದ್ಧಾಂತಕ್ಕೆ ವಿರುದ್ಧವಾಗಿದ್ದೇನೆ. ನಾನು ಆರ್‌ಎಸ್‌ಎಸ್ ಮತ್ತು ಮನುಸ್ಮೃತಿಯ ವಿರುದ್ಧ ಇದ್ದೇನೆ ಮತ್ತು ನಾನು ಅದರ ಬಗ್ಗೆ ದನಿಯೆತ್ತಿದ್ದೇನೆ. ಅಲ್ಲದೆ, ನಾವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳನ್ನು ಮತ್ತು ಸಂವಿಧಾನವನ್ನು ಅನುಸರಿಸುತ್ತೇವೆ. ಆದ್ದರಿಂದ ಅವರು ಸಹಜವಾಗಿ ಇಂತಹ ವಿಚಾರಗಳಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಾರೆ. ಸಂತ್ರಸ್ತರಲ್ಲಿ ಯಾರಿಗಾದರೂ ನ್ಯಾಯ ದೊರಕಿಸಿಕೊಡಲು ಬಿಜೆಪಿಗೆ ನಿಜವಾಗಿಯೂ ಆಸಕ್ತಿ ಇದ್ದರೆ, ಮೊದಲು ವಿಜಯೇಂದ್ರ ತನ್ನ ತಂದೆಯ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣದಲ್ಲಿ ತಾವು ರಾಜೀನಾಮೆ ನೀಡಲಿ’ ಎಂದು ಸವಾಲೆಸೆದರು.

7. ಬೆಂಗಳೂರಲ್ಲಿ ಪೋಸ್ಟರ್ ಅಭಿಯಾನ ಶುರು ,ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಹೋರಾಟ

ಬೀದರ್ ಗುತ್ತಿಗೆದಾರರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ಮತ್ತಷ್ಟು ತೀವ್ರಗೊಳಿಸಿದೆ. ಬೆಂಗಳೂರಿನ ರೇಸ್‌ ಕೋರ್ಸ್ ರಸ್ತೆಯಲ್ಲಿ ಬಿಜೆಪಿ ನಾಯಕರು ಪೋಸ್ಟರ್ ಅಭಿಯಾನ ನಡೆಸಿದರು.ಬಿಜೆಪಿ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಸಿಟಿ ರವಿ ಹಾಗೂ ರವಿಕುಮಾರ್ ಸೇರಿದಂತೆ ಅನೇಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗುತ್ತಿಗೆದಾರ ಸಚಿವ ಸಾವಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಹೊಣೆಗಾರರು ಎಂದು ಘೋಷಣೆ ಕೂಗಿದರು. ಕೈಲಿದ್ದ ಪೋಸ್ಟರ್ ಅಂಟಿಸಿ ಆಕ್ರೋಶ ಹೊರ ಹಾಕಿದರು.ಇದೊಂದು ಭ್ರಷ್ಟ ಸರ್ಕಾರ. ಏನೇ ಮಾಡಿದರೂ ತಮ್ಮನ್ನು ಯಾರು ಕೇಳುವುದಿಲ್ಲ ಎಂದುಕೊಂಡಿದ್ದಾರೆ. ಗುತ್ತಿಗೆದಾರರನ ಡೆತ್‌ನೋಟಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತರ ಹೆಸರು ಇದೆ. ಇದಕ್ಕೆ ಸಚಿವರೇ ಜವಾಬ್ದಾರರು ಎಂದು ಬಿಜೆಪಿ ನಾಯಕರು ಸಚಿವ ‘ಪ್ರಿಯಾಂಕ್ ಖರ್ಗೆ ಸುಪಾರಿ ಸ್ಪಾನ್ಸರ್’ ಎಂಬ ಪೋಸ್ಟರ್‌ ಅನ್ನು ವಿವಿಧೆಡೆ ಗೋಡೆಗಳಿಗೆ ಅಂಟಿಸಿದರು. ಸಚಿವರು ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.ಸೂಸೈಡ್ ಹಾಗೂ ಸುಪಾರಿ ಭಾಗ್ಯ ನೀಡಿದ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂಬ ಪೋಸ್ಟರ್‌ಗಳನ್ನು ಅಂಟಿಸಿ, ಕೈ ಹಿಡಿದು ಬಿಜೆಪಿ ಕಾಯರ್ತರು ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಈ ಹಿಂದೆ ನಡೆದಿದ್ದ ಕೆಲವು ಘಟನೆಗಳನ್ನು ವಿವರಿಸಿದ ಸಚಿವರಾದ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್, ನಾಗೇಂದ್ರ ಮತ್ತು ಶಾಸಕ ಚೆನ್ನಾರೆಡ್ಡಿ ಅವರ ಫೋಟೋ ಪೋಸ್ಟರ್ ಮಾಡಿಸಿದ್ದಾರೆ.

8.ಶೋಕಾಚರಣೆ ಇದ್ರು ನ್ಯೂ ಇಯರ್ ಪಾರ್ಟಿ,ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಆರೋಪ!

ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವ್ರ ಅಗಲಿಕೆಯ ಶೋಕದಲ್ಲಿ ಇಡೀ ದೇಶ ಮುಳುಗಿದೆಆದ್ರೆ ಇದೀಗ ಮನ್‌ಮೋಹನ್ ಸಿಂಗ್ ನಿಧನದ ಕೆಲವೇ ದಿನದಲ್ಲಿ ರಾಹುಲ್ ಗಾಂಧಿ ಇದೀಗ ವಿದೇಶಕ್ಕೆ ಹಾರಿದ್ದಾರೆ. ರಾಹುಲ್ ಗಾಂಧಿ ಹೊಸ ವರ್ಷ ಆಚರೆಣೆಗೆ ವಿಯೆಟ್ನಾಂಗೆ ತೆರಳಿದ್ದಾರೆ ಅಂತ ಬಿಜೆಪಿ ಆರೋಪಿಸಿದೆ. ಇಡೀ ದೇಶ ಮನ್‌ಮೋಹನ್ ಸಿಂಗ್ ಶೋಕಾಚರಣೆಯಲ್ಲಿದೆ. ಆದರೆ ರಾಹುಲ್ ಗಾಂಧಿ ಮಾತ್ರ ಹೊಸ ಪಾರ್ಟಿ ಮೂಡ್‌ನಲ್ಲಿದ್ದಾರೆ ಅಂತಿದ್ದಾರೆ ಬಿಜೆಪಿ ನಾಯಕರು. ಅಂದಹಾಗೆ ಡಿಸೆಂಬರ್ 26ರ ರಾತ್ರಿ ಮನ್‌ಮೋಹನ್ ಸಿಂಗ್ ನಿಧರಾಗಿದ್ದರೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 27 ಕಾರ್ಯಕ್ರಮ ರದ್ದುಗೊಳಿಸಿದ್ದರು. ಇದೇ ವಿಚಾರವನ್ನು ಬಿಜೆಪಿ ನಾಯಕ ಶೆಹಜಾದ್ ಪೂನವಾಲ, ಅಮಿತ್ ಮಾಳವಿಯಾ ಪ್ರಸ್ತಾಪಿಸಿದ್ದಾರೆ. ಮನ್‍‌ಮೋಹನ್ ಸಿಂಗ್ ನಿಧನದಿಂದ ಪ್ರಧಾನಿ ಮೋದಿ ತಮ್ಮ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದರು. ಆದರೆ ಕಾಂಗ್ರೆಸ್ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೊಸ ವರ್ಷ ಆಚರಣೆಗೆ ವಿಯೆಟ್ನಾಂ ಪ್ರವಾಸ ಮಾಡಿದ್ದಾರೆ ಅಂತ ಬಿಜೆಪಿ ಆರೋಪಿಸಿದೆ.ಇನ್ನು ರಾಹುಲ್ ಗಾಂಧಿ ವಿದೇಶ ಪ್ರವಾಸ ವಿಚಾರದಲ್ಲಿ ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ರಾಜಕೀಯ ಆರೋಪ ಪ್ರತ್ಯಾರೋಪ ಆರಂಭಗೊಂಡಿದೆ. ರಾಹುಲ್ ಗಾಂಧಿ ಶೋಕಾಚರಣೆ, ದೇಶದ ಗಂಭೀರ ಸಮಸ್ಯೆಗಳು,ಪ್ರಮುಖ ವಿಚಾರಗಳ ಬರುವಾಗ ವಿದೇಶಕ್ಕೆ ತೆರಳಿ ಪಾರ್ಟಿ ಮಾಡುತ್ತಾರೆ. ಈ ವರ್ಷ ಹೊಸದಲ್ಲ. 2008ರ ಮುಂಬೈ ದಾಳಿ ವೇಳೆ ರಾಹುಲ್ ಗಾಂಧಿ ವಿದೇಶದಲ್ಲಿ ರಾತ್ರಿ ಇಡೀ ಪಾರ್ಟಿ ಮಾಡುತ್ತಿದ್ದರು ಅಂತ ಶೆಹಜಾದ್ ಪೂನವಾಲ ಆರೋಪ ಮಾಡಿದ್ದಾರೆ. ‘ಇತ್ತ ಬಿಜೆಪಿ ಆರೋಪಗಳಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಮನ್‌ಮೋಹನ್ ಸಿಂಗ್ ಅಂತ್ಯಸಂಸ್ಕಾರ, ಚಿತಾಭಸ್ಮದ ವಿಚಾರದಲ್ಲಿ ಬಿಜೆಪಿ ಸರ್ಕಾರ ರಾಜಕೀಯ ಮಾಡಿದೆ. ಸಿಖ್ ಸಮುದಾಯಕ್ಕೆ ಅಪಮಾನ ಮಾಡಿದೆ. ಇದೀಗ ರಾಹುಲ್ ಗಾಂಧಿ ವಿದೇಶ ಪ್ರವಾಸ ಮಾಡುತ್ತಿರುವ ಕುರಿತು ಆತಂಕ ಪಡುತ್ತಿರುವುದೇಕೆ? ರಾಹುಲ್ ಗಾಂಧಿ ವೈಯುಕ್ತಿತವಾಗಿ ತೆರಳಿದ್ದಾರೆ. ಆದರ ಬಗ್ಗೆ ಬಿಜೆಪಿಗೆ ಯಾಕಿಷ್ಟು ತಳಮಳ ಅಂತ ಕಾಂಗ್ರೆಸ್ ಸಂಸದ ಮಣಿಕಂ ಟಾಗೋರ್ ತಿರುಗೇಟು ನೀಡಿದ್ದಾರೆ. ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್ ಜಟಾಪಟಿ ಆರಂಭಗೊಂಡಿದೆ.

9. ಸಂಸದ ತೇಜಸ್ವಿಗೆ ಮದುವೆ ಫಿಕ್ಸ್! ಹುಡುಗಿ ಯಾರು ಗೊತ್ತಾ?

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಮೋಸ್ಟ್ ಎಲಿಜಿಬೆಲ್ ಬ್ಯಾಚುಲರ್ ಎನಿಸಿಕೊಂಡಿರುವ ಯುವ ರಾಜಕಾರಣಿ ಕೆಲವೇ ತಿಂಗಳಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ. ಚೆನ್ನೈ ಮೂಲದ ಗಾಯಕಿ, ಭರತನಾಟ್ಯ ಕಲಾವಿದಯೂ ಆಗಿರುವ ಶಿವಶ್ರೀ ಸ್ಕಂದಪ್ರಸಾದ್ ಅವರನ್ನು ತೇಜಸ್ವಿ ಸೂರ್ಯ ವರಿಸಲಿದ್ದಾರೆ. ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದಪ್ರಸಾದ್ ಅವರ ಎರಡೂ ಕುಟುಂಬಗಳು ಈಗಾಗಲೇ ಮಾತುಕತೆ ನಡೆಸಿ ಮದುವೆಗೆ ಒಪ್ಪಿಗೆ ನೀಡಿವೆ ಅನ್ನೋ ಮಾಹಿತಿ ಸಿಕ್ಕಿದೆ. ಇನ್ನು ಶಾಸ್ತ್ರ ವಿಶ್ವವಿದ್ಯಾಲಯದಿಂದ ಬಯೋ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿಯನ್ನು ಪಡೆದಿರುವ ಶಿವಶ್ರೀ ಸ್ಕಂದಪ್ರಸಾದ್, ಚೆನ್ನೈ ವಿಶ್ವವಿದ್ಯಾನಿಲಯದಿಂದ ಭರತನಾಟ್ಯದಲ್ಲಿ ಎಂಎ ಮತ್ತು ಚೆನ್ನೈ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಎಂಎ ಪದವಿ ಪಡೆದಿದ್ದಾರೆ.ಇನ್ನು ಶಿವಶ್ರೀ ಸ್ಕಂದಪ್ರಸಾದ್ ಇದೇ ವರ್ಷದ ಜನವರಿಯಲ್ಲಿ ಸಖತ್ ಸುದ್ದಿಯಾಗಿದ್ರು. ಶಿವಶ್ರೀ ಹಾಡಿದ್ದ ಪೂಜಿಸಲೆಂದೆ ಹೂಗಳ ತಂದೆ ಹಾಡನ್ನ ಪ್ರಧಾನಿ ಮೋದಿ ಹೊಗಳಿದ್ರು. ಕಲ್ಪನಾ ಅವ್ರ ಎರಡು ಕನಸು ಸಿನಿಮಾದ ಪೂಜಿಸಲೆಂದೆ ಹೋಗಳ ತಂದೆ ತೆರೆಯೋ ಬಾಗಿಲನು ರಾಮಾ ಅನ್ನೋ ಹಾಡನ್ನು ಶಿವಶ್ರಿ ತಮ್ಮದೇ ಸ್ಟೈಲ್ ನಲ್ಲಿ ಮಧುರವಾಗಿ ಹಾಡಿದ್ರು. ತಮ್ಮ ಯೂಟ್ಯೂಬ್ ಲಿಂಕ್ ನಲ್ಲಿ ಆ ಹಾಡನ್ನು ಹಂಚಿಕೊಂಡಿದ್ರು. ಇದೇ ವರ್ಷದ ಅಯೋಧ್ಯೆ ಶ್ರೀ ರಾಮ ಮಂದಿರ ಪ್ರತಿಷ್ಠಾಪನೆ ಹೊತ್ತಲ್ಲಿ ಪ್ರಧಾನಿ ಈ ಹಾಡನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ರು ಕೂಡ. ಆಗಂತೂ ಗೂಗಲ್ ನಲ್ಲಿ ಶಿವಶ್ರೀ ಬಗ್ಗೆ ಹುಡುಕಾಟ ಜೋರಾಗಿಯೇ ಇತ್ತು. ಸದ್ಯ 2025 ರ ಮಾರ್ಚ್ ನಲ್ಲಿ ತೇಜಸ್ವಿ ಸೂರ್ಯ-ಶಿವಶ್ರೀ ಸ್ಕಂದಪ್ರಸಾದ್ ವಿವಾಹ ನಡೆಯಲಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

 

- Advertisement -

Latest Posts

Don't Miss