Monday, August 4, 2025

Latest Posts

ಸಾರಿಗೆ ಮುಷ್ಕರದ ಬಿಸಿ ಸರ್ಕಾರಕ್ಕೆ ಹೊಸ ಬಿಕ್ಕಟ್ಟು

- Advertisement -

ಆಗಸ್ಟ್ 5ಕ್ಕೆ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ನಿಗಧಿಯಾಗಿದೆ. KSRTC, BMTC ನೌಕರರು ವೇತನ ಪರಿಷ್ಕರಣೆ, ವೇತನ ಹಿಂಬಾಕಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿದ್ದಾರೆ. ಸಾರಿಗೆ ನೌಕರರ ಈ ಅನಿರ್ದಿಷ್ಟಾವಧಿ ಮುಷ್ಕರ ರಾಜ್ಯ ಸರ್ಕಾರದ ತಲೆ ಕೆಡಿಸಿದೆ.

ಈಗಾಗಲೇ ಸರ್ಕಾರ ಹಲವು ಸುತ್ತಿನ ಸಭೆ ನಡೆಸಿ ನೌಕರರನ್ನು ಸಮಾಧಾನಪಡಿಸಲು ಸರ್ಕಸ್ ಮಾಡಿದ್ದಾರೆ. ಆದರೆ ಅದು ವಿಫಲವಾಗಿದೆ. ಹೀಗಾಗಿ ಆಗಸ್ಟ್ 5 ಮುಷ್ಕರ ಫಿಕ್ಸ್ ಆಗಿದ್ದು, ಮುಷ್ಕರದ ವೇಳೆ ಎದುರಾಗಬಹುದಾದ ಅನಾನುಕೂಲ, ಅವಾಂತರಗಳನ್ನು ತಪ್ಪಿಸಲು ಸಾರಿಗೆ ಇಲಾಖೆ ಪರ್ಯಾಯ ವ್ಯವಸ್ಥೆ ಏನು ಎಂಬುದರ ಬಗ್ಗೆ ಚಿತ್ತ ಹರಿಸಿದೆ. ಹೀಗಾಗಿ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಪ್ರಮುಖರ ಜೊತೆ ಸಾರಿಗೆ ಇಲಾಖೆ ಮಹತ್ವದ ಸಭೆ ನಡೆಸಿದೆ.

ಸಭೆಯಲ್ಲಿ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತ ಯೋಗೀಶ್, ಅಪರ ಆಯುಕ್ತ ಮಲ್ಲಿಕಾರ್ಜುನ್ ಸೇರಿ ಹಿರಿಯ ಅಧಿಕಾರಿಗಳು ಭಾಗಿ ಆಗಿದ್ದರು. ಈ ವೇಳೆ ಖಾಸಗಿ ಬಸ್ ಮಾಲೀಕರಿಗೆ ಮನವಿ ಮಾಡಿರುವ ಸಾರಿಗೆ ಇಲಾಖೆ, ಮುಷ್ಕರ ಶುರುವಾದರೆ ಖಾಸಗಿ ಬಸ್ ಗಳ ಮೂಲಕ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಸೇವೆ ಒದಗಿಸಿ ಎಂದು ಹೇಳಿದ್ದಾರೆ. ಆದರೆ ಸಭೆಯಲ್ಲಿ ಭಾಗಿ ಆಗಿದ್ದ ಖಾಸಗಿ ಸಾರಿಗೆ ಸಂಘಟನೆಗಳ ಪ್ರಮುಖರು, ಮುಷ್ಕರದ ವೇಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿ ಸರ್ಕಾರಿ ನಿಗಮ ಬಸ್​​ಗಳಿಗೆ ಪರ್ಯಾಯವಾಗಿ ಖಾಸಗಿ ಬಸ್​​ಗಳನ್ನು ರಸ್ತೆಗೆ ಇಳಿಸಲು ಹಲವು ಬೇಡಿಕೆ ಮುಂದಿಟ್ಟಿದ್ದಾರೆ.

ಖಾಸಗಿ ಬಸ್ ಮಾಲೀಕರ ಸಂಘ 4 ಪ್ರಮುಖ ಬೇಡಿಕೆಗಳನ್ನ ಸರ್ಕಾರದ ಮುಂದಿಟ್ಟಿದೆ.

1. ಮುಷ್ಕರದ ಅವಧಿಯಲ್ಲಿ ತಮ್ಮ ಸೇವೆಗಳನ್ನು ವಿಸ್ತರಿಸುವ ಖಾಸಗಿ ಸ್ಟೇಜ್ ಕ್ಯಾರೇಜ್ ನಿರ್ವಾಹಕರಿಗೆ ಕನಿಷ್ಠ 15 ದಿನಗಳವರೆಗೆ ರಸ್ತೆ ತೆರಿಗೆ ವಿನಾಯಿತಿ ನೀಡಬೇಕು.
2. ಸಮಾನ ಪರವಾನಗಿ ವಿತರಣೆ 60:40 ಪರವಾನಗಿ ಅನುಪಾತವನ್ನು ಜಾರಿಗೆ ತರಲು ತಕ್ಷಣದ ಕ್ರಮಗಳನ್ನು ಪ್ರಾರಂಭಿಸಬೇಕು, ಇದರಲ್ಲಿ ಶೇ 60 ಸ್ಟೇಜ್ ಕ್ಯಾರೇಜ್ ಪರವಾನಗಿಗಳನ್ನು ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಹಂಚಲಾಗುತ್ತದೆ ಮತ್ತು ಶೇ 40 ಖಾಸಗಿ ನಿರ್ವಾಹಕರಿಗೆ ಮೀಸಲಿಡಲಾಗುತ್ತದೆ.
3. ಡಿಜಿಟಲ್ ಸರ್ವೈಲೆನ್ಸ್ ಆಡಿಟ್ ಪ್ರಕರಣಗಳ ಅಡಿಯಲ್ಲಿ ವಿಧಿಸಲಾದ ದಂಡದ ಶೇ 50 ವಿನಾಯಿತಿಯನ್ನು ಖಾಸಗಿ ನಿರ್ವಾಹಕರಿಗೆ ವಿಸ್ತರಿಸಬೇಕು.
4. ಅಧಿಸೂಚಿತ ಸಮಯ ಮತ್ತು ಮಾರ್ಗಗಳನ್ನು ಅನಧಿಕೃತವಾಗಿ ಅತಿಕ್ರಮಿಸುವ ಸರ್ಕಾರಿ ಬಸ್‌ಗಳ ವಿರುದ್ಧ ತಕ್ಷಣದ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು.

ಖಾಸಗಿ ಬಸ್ ಮಾಲೀಕರು ಮುಷ್ಕರ ದಿನ ಖಾಸಗಿ ಬಸ್‌ಗಳನ್ನು ರೋಡಿಗೆ ಇಳಿಸಬೇಕಾದರೆ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ತಿಳಿಸಿದ್ದಾರೆ. ಆಗಸ್ಟ್ 4, ಅಂದರೆ ಸೋಮವಾರದಂದು ಸಿಎಂ ಸಿದ್ದರಾಮಯ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಮುಷ್ಕರಕ್ಕೆ ಮುಂದಾಗಿರುವ ನೌಕರರ ಜೊತೆ ನಿರ್ಣಾಯಕ ಸಭೆ ನಡೆಸಲಿದ್ದಾರೆ. ಆಗಸ್ಟ್ 5 ರ ಮುಷ್ಕರದ ಭವಿಷ್ಯ ನಿರ್ಧಾರವಾಗಲಿದೆ. ಒಟ್ಟಾರೆ ಈ ಎಲ್ಲಾ ವಿದ್ಯಮಾನಗಳ ಮಧ್ಯೆ ರಾಜ್ಯದ ಲಕ್ಷಾಂತರ ಪ್ರಯಾಣಿಕರು ಆತಂಕದಲ್ಲಿ ಇರುವುದಂತೂ ಸತ್ಯ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss