ಬೆಂಗಳೂರು: ನಮ್ಮ ನಗರ ಪ್ರದೇಶಗಳಲ್ಲಿ ಸಂಕೀರ್ಣ ಸಮಸ್ಯೆ ಮತ್ತು ಸವಾಲುಗಳಿವೆ. ಇವುಗಳ ಬಗ್ಗೆ ಸುಮ್ಮನೆ ಚರ್ಚಿಸುವುದಕ್ಕಿಂತ ಸಮರ್ಥ ಪರಿಹಾರ ಕಂಡುಹಿಡಿಯುವುದು ಮುಖ್ಯ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅಭಿಪ್ರಾಯ ಪಟ್ಟಿದ್ದಾರೆ.
ಭಾರತೀಯ ಮಾನವ ವಸಾಹತುಗಳ ಸಂಸ್ಥೆಯು ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.
ನಗರ ಪ್ರದೇಶಗಳ ಅಭಿವೃದ್ಧಿ ಒಮ್ಮುಖವಾಗಬಾರದು. ಇಲ್ಲಿ ಪ್ರಗತಿಯ ಜತೆಗೆ ಸುಸ್ಥಿರತೆಯನ್ನು ಸಾಧಿಸಬೇಕಾದ ಅಗತ್ಯವೂ ಇದೆ ಎಂದು ಅವರು ಹೇಳಿದರು.
ನಗರ ಪ್ರದೇಶಗಳಲ್ಲಿ ಕೃಷಿ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ. ಆದ್ದರಿಂದ ಈ ನಿಟ್ಟಿನಲ್ಲಿ ಕೃಷಿ ಸಂಸ್ಕೃತಿಯ ಹೊಸ ರೂಪ ಮತ್ತು ವಿಧಾನಗಳನ್ನು ಕಂಡುಹಿಡಿಯಬೇಕಾಗಿದೆ ಎಂದು ಅವರು ನುಡಿದರು.
ನಗರಗಳು ಕೇವಲ ಉದ್ಯೋಗ ಸೃಷ್ಟಿಯ ಅಗತ್ಯ ಪೂರೈಸಿದರೆ ಸಾಲದು. ಇವು ಬದುಕಲು ಉತ್ತಮ ತಾಣಗಳಾಗಿಯೂ ಇರಬೇಕು. ಆದ್ದರಿಂದ ನಮ್ಮ ನಗರಗಳು ಸುಧಾರಣೆ ಕಾಣಬೇಕಾದ ತುರ್ತಿದೆ ಎಂದು ಅವರು ಪ್ರತಿಪಾದಿಸಿದರು.
ರಾಜ್ಯದಲ್ಲಿ ಶಾಲಾ ಹಂತದಲ್ಲೇ ಮಕ್ಕಳಿಗೆ ಹಣ್ಣು ಮತ್ತು ತರಕಾರಿ ಬೆಳೆಯುವುದನ್ನು ಕಲಿಸಲಾಗುತ್ತದೆ. ಹಾಗೆಯೇ ಸಮಾಜದಲ್ಲೂ ಅತ್ಯುತ್ತಮ ಪರಿಸರ ನಿರ್ಮಾಣಕ್ಕೆ ಸಾಮೂಹಿಕ ಜವಾಬ್ದಾರಿಯ ಪ್ರಜ್ಞೆ ಮತ್ತು ವೈಜ್ಞಾನಿಕ ವಿಧಾನಗಳು ಬರಬೇಕು ಎಂದು ಸಚಿವರು ಆಶಿಸಿದರು.
ಕಾರ್ಯಕ್ರಮದಲ್ಲಿ ತೇಜಸ್ವಿನಿ ಅನಂತಕುಮಾರ್, ಸಂಸ್ಥೆಯ ಮುಖ್ಯಸ್ಥ ಸಂದೀಪ್, ನಿತ್ಯಾ ರಾಮ್ ಮುಂತಾದವರು ಉಪಸ್ಥಿತರಿದ್ದರು.




