ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತನೆ ಮಾಡಿರುವ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ಗೆ ಅಮೆರಿಕ ವೀಸಾ ನಿರಾಕರಿಸಿದೆ. ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು 20 ದಿನಗಳ ಪ್ರವಾಸಕ್ಕೆ ಅರುಣ್ ಯೋಗಿರಾಜ್ ಅಮೆರಿಕಾಗೆ ಹೋಗಬೇಕಿತ್ತು. ಅದಕ್ಕಾಗಿ ಜೂನ್ನಲ್ಲಿ ವೀಸಾಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅಮೆರಿಕ ವೀಸಾ ನಿರಾಕರಣೆ ಮಾಡಿದೆ.
ವಿಶ್ವ ಅಕ್ಕ ಕನ್ನಡ ಸಮ್ಮೇಳನ ಕಾರ್ಯಕ್ರಮವನ್ನು ಅಮೆರಿಕದ ವರ್ಜೀನಿಯಾದ ರಿಚ್ಮಂಡ್ ನಗರದಲ್ಲಿ ಆಯೋಜಿಸಿತ್ತು. ಈ ಕಾರ್ಮಕ್ರಮಕ್ಕೆ ಯೋಗಿರಾಜ್ ಮತ್ತು ಅವರ ಕುಟುಂಬಸ್ಥರಿಗೆ ಆಹ್ವಾನಿಸಲಾಗಿತ್ತು ಎನ್ನಲಾಗಿದೆ. ಸದ್ಯ ವೀಸಾ ಅರ್ಜಿಯನ್ನು ತಿರಸ್ಕರಿಸಿರುವ ಅಮೆರಿಕ ರಾಯಭಾರ ಕಚೇರಿ ಇದುವರೆಗೆ ಯಾವುದೇ ಕಾರಣವನ್ನು ನೀಡಿಲ್ಲ.
ಈ ಕುರಿತು ಅರುಣ್ ಪ್ರತಿಕ್ರಿಯಿಸಿದ್ದು, ಅಮೆರಿಕ ಕಾರ್ಯಕ್ರಮಕ್ಕೆ ತೆರಳಲು ವೀಸಾಗೆ ಅರ್ಜಿ ಸಲ್ಲಿಸಿದ್ದೆ. ವೀಸಾ ಯಾವ್ಯಾವ ದಾಖಲೆ ಕೇಳಿದ್ದರು, ಎಲ್ಲವನ್ನೂ ಕೊಟ್ಟಿದ್ದೆ. ವೀಸಾ ನಿರಾಕರಣೆ ಆಗಿದ್ದಕ್ಕೆ ಯಾವುದೇ ನಿರಾಸೆ ಆಗಿಲ್ಲ. ವೀಸಾಗೆ ಅವಕಾಶ ಸಿಕ್ಕಿದ್ದರೆ ಕನ್ನಡಿಗರ ಭೇಟಿಯಾಗಬಹುದಿತ್ತು. ಕುಟುಂಬದ ಜತೆ ಸಮಯ ಕಳೆಯಬಹುದು ಎಂದು ನಿರ್ಧರಿಸಿದ್ದೆ. ಮುಂದಿನ ವರ್ಷ ಅವಕಾಶ ಸಿಕ್ಕರೆ ಹೋಗುತ್ತೇನೆ. ಮತ್ತೊಮ್ಮೆ ವೀಸಾಗೆ ಅರ್ಜಿ ಸಲ್ಲಿಸಲ್ಲ ಎಂದು ಹೇಳಿದ್ದಾರೆ.