ಕುರುಬ ಸಮದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸುವ ವಿಚಾರ, ಜಾತಿ ಜಟಾಪಟಿಗೆ ಕಾರಣವಾಗಿದೆ. ಸೆಪ್ಟೆಂಬರ್ 18ರಂದು ವಾಲ್ಮೀಕಿ ಸಮುದಾಯ ಮಹತ್ವದ ಸಭೆ ಕರೆಯಲಾಗಿದೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿರುವ, ವಾಲ್ಮೀಕಿ ಗುರುಪೀಠದಲ್ಲಿ ಸಭೆ ಕರೆಯಲಾಗಿದೆ. ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ.
ಸಭೆಗೆ ವಾಲ್ಮೀಕಿ ಸಮುದಾಯದ ಸಚಿವರು, ಶಾಸಕರು, ಮಾಜಿ ಶಾಸಕರು, ಹಾಲಿ ಎಂಎಲ್ಸಿ, ಮಾಜಿ ಎಂಎಲ್ಸಿ, ಧರ್ಮದರ್ಶಿಗಳು, ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರಿಗೆ ಆಹ್ವಾನಿಸಲಾಗಿದೆ. ವಾಲ್ಮೀಕಿ ಗುರುಪೀಠದ ಸಭೆಯಲ್ಲಿ, ಪ್ರಮುಖವಾಗಿ 3 ವಿಚಾರಗಳ ಕುರಿತು ಚರ್ಚಿಸಲು ನಿರ್ಧರಿಸಲಾಗ್ತಿದೆ.
ವಾಲ್ಮೀಕಿ ನಾಯಕ ಜಾತಿಗೆ ಇತರೆ ಮೇಲ್ವರ್ಗದ ಜಾತಿಗಳನ್ನು ಸೇರ್ಪಡೆ ವಿಚಾರ, ನಾಯಕ ತಳವಾರ ಹೆಸರಲ್ಲಿ ಇತರೆ ಜಾತಿಯ ತಳವಾರರು, ನಕಲಿ ಜಾತಿ ಪ್ರಮಾಣ ಪತ್ರ ತೆಗೆದುಕೊಳ್ಳುವುದನ್ನು ತಡೆಯುವುದು ಮತ್ತು ಜಾತಿ ಕಾಲಂನಲ್ಲಿ ಜಾತಿ ಹೆಸರನ್ನು ನಮೂದಿಸುವ ಕುರಿತು ಮಹತ್ವದ ಚರ್ಚೆ ನಡೆಸಲಾಗ್ತಿದೆ.
ಕುರುಬ ಸಮುದಾಯದ ಜೊತೆ ಕೋಲಿ ಸಮುದಾಯವನ್ನೂ ಎಸ್ಟಿ ಕ್ಯಾಟಗರಿಗೆ ಸೇರಿಸಲಾಗ್ತಿದೆ. ಸೆಪ್ಟೆಂಬರ್ 19 ಅಥವಾ 20ರಂದು ಎರಡೂ ಸಮುದಾಯಗಳ ಮುಖಂಡರ ಸಭೆ ನಡೆಸುತ್ತಿರುವುದಾಗಿ, ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸಭೆ ಬಳಿಕ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದ್ದಾರೆ.