ಕಾಂಗ್ರೆಸ್ ಶಾಸಕರೊಬ್ರು, ತಮ್ಮ ಕ್ಷೇತ್ರದಲ್ಲಿ ನಿರಂತರ ವಿದ್ಯುತ್ ಕಡಿತದಿಂದ ರೋಸಿ ಹೋಗಿ, ವಿದ್ಯುತ್ ಇಲಾಖೆಯ ಮೂವರು ಅಧಿಕಾರಿಗಳ ಮನೆಗೆ, ತಾವೇ ಕಂಬ ಹತ್ತಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಸಾರ್ವಜನಿಕರು ಅನುಭವಿಸುವ ತೊಂದರೆ ಅಧಿಕಾರಿಗಳಿಗೂ ತಿಳಿಯಲಿ ಎಂಬುದು ಅವರ ಉದ್ದೇಶವಾಗಿತ್ತು. ಈ ಕೃತ್ಯದ ವಿರುದ್ಧ ಇಲಾಖೆಯು ಶಾಸಕರ ವಿರುದ್ಧ ದೂರು ದಾಖಲಿಸಿದ್ದು, ಸರ್ಕಾರಿ ಕೆಲಸಕ್ಕೆ ಅಡ್ಡಿ ಮತ್ತು ನಿಯಮ ಉಲ್ಲಂಘನೆ ಆರೋಪ ಮಾಡಿದೆ.
ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ಝಬ್ರೆಡಾದ ಕಾಂಗ್ರೆಸ್ ಶಾಸಕ ವೀರೇಂದ್ರ ಜಾತಿ ಅವರು, ಪ್ರತಿದಿನ ತನ್ನ ಏರಿಯಾದಲ್ಲಿ ವಿದ್ಯುತ್ ಕಡಿತದಿಂದ ಬೇಸತ್ತಿದ್ರು. ತಾವೇ ವಿದ್ಯುತ್ ಕಂಬ ಹತ್ತಿ ಇಲಾಖೆಯ ಮೂವರು ಅಧಿಕಾರಿಗಳ ಮನೆಯ ವಿದ್ಯುತ್ ಕಡಿತಗೊಳಿಸಿದ್ದಾರೆ. ವಿದ್ಯುತ್ ಕಡಿತದ ಕುರಿತು ವಿದ್ಯುತ್ ಇಲಾಖೆಯು ಶಾಸಕರ ವಿರುದ್ಧ, ರೂರ್ಕಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಂಡ ಮೂವರಲ್ಲಿ ವಿದ್ಯುತ್ ಇಲಾಖೆಯ ಮುಖ್ಯ ಎಂಜಿನಿಯರ್ ಕೂಡ ಒಬ್ಬರು ಎಂದು ಹೇಳಲಾಗಿದೆ.
ಮೊದಲು ಬೋಟ್ ಕ್ಲಬ್ನಲ್ಲಿರುವ ಸೂಪರಿಂಟೆಂಡಿಂಗ್ ಎಂಜಿನಿಯರ್ ವಿವೇಕ್ ರಜಪೂತ್ ಅವರ, ಅಧಿಕೃತ ನಿವಾಸದ ಹೊರಗಿನ ವಿದ್ಯುತ್ ಕಂಬವನ್ನು ಹತ್ತಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಇದಾದ ನಂತರ, ಮುಖ್ಯ ಎಂಜಿನಿಯರ್ ಅನುಪಮ್ ಸಿಂಗ್ ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್ ವಿನೋದ್ ಪಾಂಡೆ ಅವರ ಅಧಿಕೃತ ನಿವಾಸದ ಬಳಿ, ವಿದ್ಯುತ್ ಕಂಬ ಹತ್ತಿ ವಿದ್ಯುತ್ ಕಟ್ ಮಾಡಿದ್ದಾರೆ.
ಇನ್ನು, ಈ ಬಗ್ಗೆ ಶಾಸಕ ಮಾತನಾಡಿದ ಶಾಸಕರು, “ನಮ್ಮ ಏರಿಯಾದಲ್ಲಿ ದಿನಕ್ಕೆ ಐದರಿಂದ ಎಂಟು ಗಂಟೆಗಳ ಕಾಲ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಮತ್ತು ವ್ಯಾಪಾರದಲ್ಲಿ ಗಮನಾರ್ಹ ನಷ್ಟ ಉಂಟಾಗುತ್ತಿದೆ. ವಿದ್ಯುತ್ ಕಡಿತದ ವಿಷಯದ ಬಗ್ಗೆ 10 ದಿನಗಳಿಂದ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ರು, ಯಾವುದೇ ಕ್ರಮ ತೆಗೆದಿಕೊಂಡಿಲ್ಲ. ಈಗ ಅವರ ಮನೆಯಲ್ಲಿ ಒಂದು ಗಂಟೆ ಕರೆಂಟ್ ಇಲ್ಲದಕ್ಕೆ ಹೇಗೆ ನರಳಾಡಿದ್ದಾರೆ. ಪ್ರತಿದಿನ ನಮ್ಮ ಏರಿಯಾದಲ್ಲಿ ಜನ ಗಂಟೆಗಟ್ಟಲೆ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.




