www.karnatakatv.net: ರಾಜ್ಯ- ತುಮಕೂರು:ತೋಟದಲ್ಲಿದ್ದ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದ ಮಕ್ಕಳನ್ನು ರಕ್ಷಿಸಲು ಬಾವಿಗೆ ಹಾರಿದ ತಾಯಿಯೂ ಮೃತಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತಾಲೂಕಿನ ಕೋರಾ ಠಾಣಾ ವ್ಯಾಪ್ತಿಯ ತಿರುಮಲ ಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ತೋಟದ ಬಾವಿಗೆ ಬಿದ್ದ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದಾರೆ. ತಾಯಿ ಹೇಮಲತಾ ಹಾಗೂ ಇಬ್ಬರು ಮಕ್ಕಳಾದ ಮಾನಸ(6), ಪೂರ್ವಿಕಾ(3) ಮೃತ ದುರ್ದೈವಿಗಳು. ಹೇಮಲತಾ ತೋಟದ ಕೆಲಸಕ್ಕೆ ಇಂದು ಬೆಳಗ್ಗೆ ಮಕ್ಕಳೊಡನೆ ಬಂದಿದ್ರು. ಪೂರ್ವಿಕಾ ಅಲ್ಲೇ ಇದ್ದ ಸೀಬೆ ಗಿಡದ ಬಳಿ ಆಟ ಆಡುತ್ತಿದ್ದ ವೇಳೆ ಆಕಸ್ಮಿಕವಾಗಿ ತೆರೆದ ಬಾವಿಗೆ ಬಿದ್ದಿದ್ದಾಳೆ. ಇದನ್ನ ಕಂಡ ಮತ್ತೊಬ್ಬ ಮಗಳು ಮಾನಸ ಸಹ ಬಾವಿಗೆ ಹಾರಿದ್ದಾಳೆ. ಇಬ್ಬರನ್ನೂ ರಕ್ಷಿಸಲು ತಾಯಿ ಬಾವಿಗೆ ಹಾರಿದ್ದು, ನಂತರ ಹೊರಬರಲಾರದೆ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಕೋರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.