SDPI ನಾಯಕ ಮೌಲಾನಾ ನೂರುದ್ದೀನ್ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ನೀಡಿರುವ ವಿವಾದಾತ್ಮಕ ಹೇಳಿಕೆಯ ವಿಡಿಯೋ ಇದೀಗ ವೈರಲ್ ಆಗಿದೆ. ಟಿಪ್ಪು ಸುಲ್ತಾನ್ ಕುರಿತಂತೆ ಮಾತನಾಡಿದ ವೇಳೆ ಅವರು ಇಬ್ಬರ ವಿರುದ್ಧವೂ ಆಕ್ಷೇಪಾರ್ಹವಾಗಿ ಹೇಳಿಕೆ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ರಾಮನಗರದ ರೈಲ್ವೇ ಸ್ಟೇಷನ್ ಸರ್ಕಲ್ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮೌಲಾನಾ ನೂರುದ್ದೀನ್, ಶಾಸಕ ಯತ್ನಾಳ್ ಅವರನ್ನು ‘ಭಯೋತ್ಪಾದಕ’ ಎಂದಿದ್ದಾರೆ. ಪ್ರತಾಪ್ ಸಿಂಹ ಕುರಿತು ಆಕ್ಷೇಪಾರ್ಹ ಟಿಪ್ಪಣಿ ಮಾಡಿರುವುದು ವಿಡಿಯೋದಲ್ಲಿ ಕಾಣಿಸಿದೆ. ಟಿಪ್ಪು ಸುಲ್ತಾನ್ ಇಲ್ಲದಿದ್ದರೆ “ಪ್ರತಾಪ್ ಸಿಂಹ ಬ್ರಿಟಿಷರ ನಾಯಿ ತೊಳೆಯಬೇಕಿತ್ತು” ಎಂಬ ಹೇಳಿಕೆ ನೀಡಿರುವುದು ಗಮನಸೆಳೆಯಿದೆ.
ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಪ್ಪು ಪರ ಮಾತನಾಡುವವರು ದೇಶದ್ರೋಹಿಗಳು ಎಂದು ಅವರು ವಾಗ್ದಾಳಿ ನಡೆಸಿದ್ದು, ಟಿಪ್ಪು ಸುಲ್ತಾನ್ ಕಾಲದಲ್ಲಿ ಹಿಂದೂಗಳ ಮೇಲೆ ಹಿಂಸೆ ನಡೆದಿತ್ತೆಂಬ ತಮ್ಮ ಆರೋಪಗಳನ್ನು ಪುನಃ ಉಲ್ಲೇಖಿಸಿದ್ದಾರೆ.
ಕರ್ನಾಟಕ ಹಾಗೂ ಕೇರಳ ಸೇರಿ 3,500 ದೇವಸ್ಥಾನಗಳನ್ನ ಟಿಪ್ಪು ನಾಶ ಮಾಡಿದ್ದಾನೆ. ಲಕ್ಷಾಂತರ ಕೊಡವ ಸಮಾಜದವರ ನೆರಮೇಧ ನಡೆಸಿದ್ದಾನೆ. ಹೀಗಾಗಿ ನಮಗೆ ಟಿಪ್ಪು ಆದರ್ಶವಲ್ಲ, ಆತ ಹಿಂದೂ ಧರ್ಮದ ದ್ರೋಹಿಯಾಗಿದ್ದ. ಇಸ್ಲಾಮೀಕರಣ ಮಾಡಲು ಬಯಸಿದ್ದ, ಆದರೆ ಅದು ಆಗಲಿಲ್ಲ. ಅಂತವನಿಂದ ನಾವು ಆದರ್ಶ ಕಲಿಯಬೇಕಿಲ್ಲ ಎಂದಿದ್ದಾರೆ.
ಇದೇ ವೇಳೆ ದೆಹಲಿಯಲ್ಲಿ ನಡೆದ ಸ್ಫೋಟದ ವಿಚಾರವನ್ನೂ ಪ್ರಸ್ತಾಪಿಸಿರುವ ಯತ್ನಾಳ್, ಘಟನೆಯನ್ನು ಯಾವುದೇ ಮುಸ್ಲಿಂ ಧರ್ಮಗುರುಗಳು, ಮುಖಂಡರು ಖಂಡಿಸಿಲ್ಲ. ಇಲ್ಲಿ ಶಾಂತಿ ಸಭೆ ಮಾಡಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಎನ್ನುತ್ತಾರೆ ಅಷ್ಟೇ. ಅವರಿಗೆ ಏನಾದರೂ ಆದರೆ ಸಿದ್ದರಾಮಯ್ಯ ಮೊದಲು ಮಾತನಾಡುತ್ತಾರೆ. ಮುಸ್ಲಿಮರ ನಿಷ್ಟೆ ದೇಶಕ್ಕಲ್ಲ, ಬದಲು ಅವರ ಧರ್ಮಕ್ಕೆ ಎಂದು ಅಂಬೇಡ್ಕರ್ ಅಂದೇ ಹೇಳಿದ್ದರು ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

