ವಿಜಯಪುರ : ಮುಂಬರುವ ಚುನಾವಣೆಗಳಲ್ಲಿ ಸಾಮೂಹಿಕವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸುತ್ತೇವೆ. ಯಾವುದೇ ಪಕ್ಷದ ಕಚೇರಿಯಲ್ಲಿ ಕುಳಿತು ರೆಡಿ ಮಾಡಲ್ಲ. ಜನರೆದುರು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದು ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ವಿಜಯಪುರದಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾರು ನಿರಂತರ ಸಾಮಾಜಿಕವಾಗಿ ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತಾರೆ. ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಾರೋ ಅಂಥವರಿಗೆ ನಾವು ಸ್ಥಳೀಯ ಸಂಸ್ಥೆಗಳ ಚುನಾವಣೆ ಟಿಕೆಟ್ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಪಕ್ಷ ಗಟ್ಟಿಗೊಳಿಸಲು ಇಂದಿನಿಂದಲೇ ಎಲ್ಲರೂ ಸಿದ್ದರಾಗಬೇಕು. ಪಕ್ಷದ ಸಂಘಟನೆಯಲ್ಲಿ ತೊಡಗಬೇಕು. ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ಈ ಭಾಗದ ನಿಂಬೆ ಬೆಳೆಗಾರರು ನಡೆಸಿರುವ ಪ್ರತಿಭಟನೆಗಳನ್ನು ನಾನು ಗಮನಿಸಿದ್ದೇನೆ. ಇಡೀ ರಾಜ್ಯದಲ್ಲಿ ಶೇಕಡಾ 80ರಷ್ಟು ಜನ ನಿಂಬೆ ಬೆಳೆಗಾರ ರೈತರು ವಿಜಯಪುರ ಜಿಲ್ಲೆಯಲ್ಲಿದ್ದಾರೆ. ಎಂಟುವರೆ ಸಾವಿರ ಹೆಕ್ಟೆರ್ ಕೃಷಿ ಪ್ರದೇಶದಲ್ಲಿ ನಿಂಬೆ ಬೆಳೆಯುತ್ತಿದ್ದಾರೆ. ಒಂದು ಚೀಲಕ್ಕೆ 400 ರೂಪಾಯಿ ಬೆಂಬಲ ನೀಡಬೇಕೆಂಬ ಬೇಡಿಕೆ ಇದೆ. ಆದರೆ ಸಿಎಂ ಹಾಗೂ ಡಿಸಿಎಂ ಅವರು ಈ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಬಗ್ಗೆ ಇದುವರೆಗೂ ಸಕಾರಾತ್ಮಕವಾಗಿ ಹೇಳಿಲ್ಲ. ಈ ಎಲ್ಲ ರೈತರ ಪರ ಜೆಡಿಎಸ್ ಪಕ್ಷ ಸದಾ ಇರುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ಅಭಯ ನೀಡಿದ್ದಾರೆ.