ಯುವ ರಾಜ್ಕುಮಾರ್, ಸಂತೋಷ್ ಆನಂದ್ರಾಮ್ ಜೊತೆಗೆ ಸಿನಿಮಾ ಘೋಷಿಸಿದ ಹೊಂಬಾಳೆ ಫಿಲ್ಮ್ಸ್..!
ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್ ಕಾಂಬಿನೇಶನ್ನಲ್ಲಿ ಮೂಡಿಬಂದಿದ್ದ ‘ಕೆಜಿಎಫ್ 2’ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಹಣ ಹೂಡಿತ್ತು. ಈ ಚಿತ್ರ ಪ್ರೇಕ್ಷಕರ ಚಪ್ಪಾಳೆಯ ಜೊತೆಗೆ ಬಾಕ್ಸ್ ಆಫೀಸ್ನಲ್ಲಿ ಸಾವಿರ ಕೋಟಿ ರೂಪಾಯಿ ಬಾಚುವುತ್ತ ಸಾಗುತ್ತಿದೆ. ಈ ಖುಷಿಯ ನಡುವೆ ಹೊಂಬಾಳೆ ಫಿಲ್ಮ್ಸ್ ಇನ್ನೊಂದು ಸಿನಿಮಾ ಘೋಷಣೆ ಮಾಡಿದೆ. ಅದು ಯುವ ರಾಜ್ಕುಮಾರ್ ಜೊತೆಗೆ ಎನ್ನುವುದು ವಿಶೇಷ.
ದೊಡ್ಮನೆ ಅಭಿಮಾನಿಗಳೆಲ್ಲರೂ ಕಾಯ್ತಿದ್ದ ಆ ಘಳಿಗೆ ಬಂದಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಛಾಯೆಯನ್ನೇ ಹೊಂದಿರೋ ದೊಡ್ಮನೆ ಕುಡಿ ಯುವರಾಜ್ಕುಮಾರ್ ಈಗ ಅಧಿಕೃತವಾಗಿ ಸ್ಯಾಂಡಲ್ವುಡ್ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಅರೇ ಈಗಾಗಲೇ “ಯುವ ರಣಧೀರ ಕಂಠೀರವ” ಸಿನಿಮಾ ಮೂಲಕ ಯುವ ಅದ್ಧೂರಿಯಾಗಿ ಲಾಂಚ್ ಆಗಿದ್ರಲ್ವಾ ಅಂತೀರಾ..
ಹೌದು, ಈ ಸಿನಿಮಾ ಮೂಲಕ ಯುವರಾಜ್ಕುಮಾರ್ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡೋ ಎಲ್ಲಾ ತಯಾರಿಗಳು ಆಗಿತ್ತು. ಈ ಸಿನಿಮಾದ ಟೀಸರ್ ಸಹ ರಿಲೀಸಾಗಿ ಯುವರಾಜ್ಕುಮಾರ್ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ರು. ಆದರೆ ಈ ಮಧ್ಯೆ ನಮ್ಮ ಪ್ರೀತಿಯ ಅಪ್ಪು ನಮ್ಮಿಂದ ದೂರಾದರು, ಹಾಗಾಗಿ ಈ ಸಿನಿಮಾವನ್ನ ಮುಂದೂಡಿದ್ದಾರೆ.
ಬದಲಿಗೆ ಅಪ್ಪುಗಾಗಿಯೇ ಕಥೆ ಬರೆದು ತಯಾರಿಮಾಡಿಕೊಂಡಿದ್ದ ನಿರ್ದೇಶಕ ಸಂತೋಷ್ ಆನಂದ್ರಾಮ್ ಈಗ ಆ ಕಥೆಯನ್ನ ಅಪ್ಪು ಛಾಯೆಯನ್ನೇ ಹೊಂದಿರೋ ಯುವರಾಜ್ಕುಮಾರ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಸುದ್ದಿ ತಿಳಿದಿದ್ದ ದೊಡ್ಮನೆ ಅಭಿಮಾನಿಗಳು ಅಧಿಕೃತ ಸುದ್ದಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ರು. ಏಪ್ರಿಲ್-27ರಂದು ಹೊಂಬಾಳೆ ಫಿಲ್ಮ್ಸ್ ತಮ್ಮ ಟ್ವಿಟ್ಟರ್ ಪೇಜ್ನಲ್ಲಿ ಅಧಿಕೃತವಾಗಿ ಯುವರಾಜ್ಕುಮಾರ್ರನ್ನ ಹೆಮ್ಮೆಯಿಂದ ಪರಿಚಯಿಸಿದ್ದಾರೆ. ಅಲ್ಲದೇ ಬೆಳ್ಳಿತೆರೆಯಲ್ಲಿ “ಯುವ ಪರ್ವ ಶುರು” ಎಂಬ ಸಾಲನ್ನ ಹಾಕಿ ಯುವ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.
ಕೆಜಿಎಫ್-2 ಸಕ್ಸಸ್ ಅಲೆಯಲ್ಲಿರೋ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿರೋ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈ ಸಿನಿಮಾವನ್ನ ಬಿಗ್ ಬಜೆಟ್ನಲ್ಲಿ ನಿರ್ಮಾಣ ಮಾಡಲಿದೆ. ಇದು ಯಾವ ರೀತಿಯ ಸಿನಿಮಾ, ಕಥೆ ಏನು ಎಂಬ ಬಗ್ಗೆ ಸಂತೋಷ್ ಆಗಲಿ, ನಟ ಯುವರಾಜ್ಕುಮಾರ್ ಆಗಲಿ ಎಲ್ಲಿಯೂ ಬಾಯಿ ಬಿಟ್ಟಿಲ್ಲ. ವಿಭಿನ್ನವಾದ ಮತ್ತು ಫ್ಯಾಮಿಲಿ ಸಬ್ಜೆಕ್ಟ್ ಮೂಲಕ ಯುವ ರಾಜ್ಕುಮಾರ್ರನ್ನು ಸಂತೋಷ್ ತೆರೆಮೇಲೆ ತರಲು ಸಜ್ಜಾಗಿದ್ದಾರೆ ಎಂಬ ಮಾಹಿತಿಗಳು ಸಿಕ್ಕಿವೆ.
ಸಂತೋಷ್ ಹೊಂಬಾಳೆಯ ನಾಲ್ಕನೇ ಸಿನಿಮಾ..!
ಈ ಸಿನಿಮಾದ ಮೂಲಕ ಸಂತೋಷ್ ಹೊಂಬಾಳೆ ಜತೆ ನಾಲ್ಕನೇ ಬಾರಿಗೆ ಕೈಜೋಡಿಸುತ್ತಿದ್ದಾರೆ. ಈ ಸಿನಿಮಾ ಅನೌನ್ಸ್ ಆದ ನಂತರ ಆ ಸಿನಿಮಾದ ಫಸ್ಟ್ ಲುಕ್ ಅನ್ನು ಅಭಿಮಾನಿಗಳು ಪುನೀತ್ ರಾಜ್ಕುಮಾರ್ ಅವರ ಸಮಾಧಿಯ ಬಳಿ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಪುನೀತ್ ರಾಜ್ಕುಮಾರ್ ಜೊತೆಗೆ ‘ಯುವರತ್ನ’, ‘ರಾಜಕುಮಾರ’, ನಟ ಜಗ್ಗೇಶ್ ಜೊತೆಗೆ ‘ರಾಘವೇಂದ್ರ ಸ್ಟೋರ್ಸ್’ ನಂತರದಲ್ಲಿ ಇದು ನಾಲ್ಕನೇ ಸಿನಿಮಾವಾಗಿದೆ. ಈಗ ಯುವ ರಾಜ್ಕುಮಾರ್ ಜೊತೆ ಸಂತೋಷ್ ಸಿನಿಮಾಕ್ಕಾಗಿ ಕೈಜೋಡಿಸಿದ್ದಾರೆ. ಇದು ಅಪ್ಪು ಅಭಿಮಾನಿಗಳಿಗಂತೂ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ.
ಕರ್ನಾಟಕ ನ್ಯೂಸ್