Dharwad News: ಧಾರವಾಡ: ಧಾರವಾಡ ಜಿಲ್ಲೆಯ ಕುಂದಗೋಳ ಮತ್ತು ಶಿರಗುಪ್ಪಿ ಹೋಬಳಿಗಳ, ಬೆಳೆಗೆ ವಿಮೆ ಮಾಡಿಕೊಂಡಿದ್ದ ರೈತರ ಖಾತೆಗೆ ₹ 30 ಕೋಟಿ ಮೊತ್ತದ ಬೆಳೆ ವಿಮೆ ನೇರವಾಗಿ ಜಮೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಮೊದಲು ಅಗ್ರಿಕಲ್ಚರ್ ಇನ್ಶುರೆನ್ಸ್ ಕಂಪೆನಿ ತಾಂತ್ರಿಕ ಕಾರಣ ನೀಡಿ ಪರಿಹಾರ ತಡವಾಗಿತ್ತು. DLJC (District Level Joint Committee) ಸಭೆಯಲ್ಲಿ ಈ ಸಮಸ್ಯೆ ಎತ್ತಿಕೊಂಡ ಬಳಿಕ, ಕೇಂದ್ರ ಕೃಷಿ ಸಚಿವ ಶಿವರಾಜ್ಸಿಂಗ್ ಚೌಹಾಣ್ ಅವರ ನೇತೃತ್ವದಲ್ಲಿ ಮುಂದಿನ ಹಂತದ ಚರ್ಚೆಗಳು ನಡೆದವು. ಬಳಿಕ ಈ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು ಈಗ ನಗದು ಜಮೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಪ್ರಹ್ಲಾದ ಜೋಶಿ ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೆಲವು ಮಧ್ಯವರ್ತಿಗಳು “ನಾವು ವಿಮೆ ಬಿಡುಗಡೆ ಮಾಡಿಸಿದ್ದೇವೆ” ಎಂದು ಹೇಳಿ ರೈತರಿಂದ ಹಣ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMFBY) ಯಲ್ಲಿ ರೈತರು ಯಾರಿಗೂ ಹಣ ನೀಡುವ ಅವಶ್ಯಕತೆ ಇಲ್ಲ. ಯಾವುದೇ ಸಮಸ್ಯೆ ಇದ್ದರೆ ಜಿಲ್ಲಾಧಿಕಾರಿ ಅಥವಾ ಕೃಷಿ ಅಧಿಕಾರಿಗಳ ಸಂಪರ್ಕ ಮಾಡಿ ಎಂದು ಸಚಿವ ಜೋಶಿ ಅವರು ರೈತರಲ್ಲಿ ಮನವಿ ಮಾಡಿದ್ದಾರೆ.
ಇಂತಹ ಸಂಕಷ್ಟದ ಸಮಯದಲ್ಲಿ ವಿಮೆ ಹಣ ದೊರಕಿ ರೈತರಿಗೆ ನೆರವಾಗುವಂತಹ ಯೋಜನೆ ರೂಪಿಸಿ ರೈತರ ಬೆನ್ನಿಗೆ ನಿಂತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅದನ್ನು ಸಕಾರಾತ್ಮಕ ಬದಲಾವಣೆಗಳೊಂದಿಗೆ ಅನುಷ್ಠಾನಗೊಳಿಸುತ್ತಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ಸಿಂಗ್ ಚವ್ಹಾಣ್ ಅವರಿಗೆ ಧನ್ಯವಾದಗಳನ್ನು ಸಚಿವ ಜೋಶಿ ತಿಳಿಸಿದ್ದಾರೆ.