ಆಪರೇಷನ್ ಸಿಂಧೂರ್ ವಿಶೇಷ :
ನವದೆಹಲಿ : ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿರುವ ಆಪರೇಷನ್ ಸಿಂಧೂರಕ್ಕೆ ಪಾಕಿಸ್ತಾನದ ಭಯೋತ್ಪಾದಕರ ಅಡಗುತಾಣಗಳು ಧ್ವಂಸವಾಗಿವೆ. ಭಾರತದ ಅತ್ಯಾಧುನಿಕ ಕ್ಷಿಪಣಿ ದಾಳಿಗೆ ಪಾಪಿಸ್ತಾನ ಅಕ್ಷರಶಃ ಪತರುಗುಟ್ಟಿ ಹೋಗಿದೆ. ಉಗ್ರರ ರಾಷ್ಟ್ರದಾದ್ಯಂತ ಎಲ್ಲೆಡೆ ತುರ್ತು ಪರಿಸ್ಥಿತಿ ಘೋಷಿಸಿದೆ. ಅಲ್ಲದೆ ಭಾರತದ ದಾಳಿಯ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ತುರ್ತು ಭದ್ರತಾ ಸಭೆ ನಡೆಸಿ ಭಾರತದ ವಿರುದ್ಧದ ಕಾರ್ಯಾಚರಣೆಗೆ ಪಾಕ್ ಸೇನೆಗೆ ಸಂಪೂರ್ಣ ಪರಮಾಧಿಕಾರ ನೀಡುವ ಮೂಲಕ ದಾಳಿಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಭಂಡತನದ ಹೇಳಿಕೆ ನೀಡಿದ್ದಾರೆ.
ಈ ನಡುವೆಯೇ ಕುತಂತ್ರಿ ಚೀನಾದೊಂದಿಗೆ ಭಾರತದ ಮೇಲೆ ಪಾಕಿಸ್ತಾನ ದಾಳಿ ಮಾಡುವ ಮಾಹಿತಿ ತಿಳಿಯುತ್ತಿದ್ದಂತೆ ಭಾರತ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿನ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಡುತ್ತಿದೆ. ಅಲ್ಲದೆ ಆಪರೇಷನ್ ಸಿಂಧೂರ್ ಯಶಸ್ವಿಯಾದ ಬಳಿಕ ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಡಿ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಭಾರತದ ಗಡಿ ರಾಜ್ಯಗಳು, ಸಮುದ್ರ ತೀರದ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ. ಯಾವುದೇ ಅನಾಹುತಕ್ಕೆ ಅವಕಾಶ ನೀಡದಂತೆ ಎಲ್ಲ ರೀತಿಯ ಪರಿಸ್ಥಿತಿಗಳನ್ನು ನಿಭಾಯಿಸಲು ಸನ್ನದ್ಧರಾಗಿರುವಂತೆ ಅವರು ತಿಳಿಸಿದ್ದಾರೆ.
ಮೇ 10ರ ವರೆಗೆ ನೋ ಫ್ಲೈಯಿಂಗ್..
ಇನ್ನೂ ಪಾಕಿಸ್ತಾನ ಚೀನಾದ ಸಹಾಯದಿಂದ ಯಾವುದೇ ಸ್ವರೂಪದಲ್ಲಿ ದಾಳಿ ನಡೆಸಬಹುದು ಎಂಬ ಕಾರಣಕ್ಕೆ ಬಾರತದಲ್ಲಿ ವಿಮಾನ ಹಾರಾಟವನ್ನು ನಿರ್ಬಂಧಿಸಲಾಗಿದೆ. ಮುಖ್ಯವಾಗಿ ಭಾರತ-ಪಾಕಿಸ್ತಾನದ ಉದ್ವಿಗ್ನತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಮತ್ತು ಪಶ್ಚಿಮ ಭಾರತದ ಪ್ರದೇಶದಲ್ಲಿ ನೋ ಫ್ಲೈಯಿಂಗ್ ಎಂದು ಘೋಷಿಸಿ ಅಲ್ಲಿ ವಿಮಾನ ಹಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಅಲ್ಲದೆ ಮೇ 10 ರ ಶನಿವಾರದವರೆಗೆ ಸುಮಾರು 20 ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಎಂದು ಕೇಂದ್ರ ನಾಗರಿಕ ವಿಮಾನಯಾನ ಇಲಾಖೆಯು ಆದೇಶಿಸಿದೆ.
ಯಾವೆಲ್ಲ ಏರ್ಪೋರ್ಟ್ಗಳು ಬಂದ್..!
ಮುಖ್ಯವಾಗಿ ಲೆಹ್, ಶ್ರೀನಗರ, ಜಮ್ಮು, ಅಮೃತಸರ, ಪಠಾಣ್ಕೋಟ್, ಚಂಡೀಗಢ, ಜೋಧಪುರ, ಜೈಸಲ್ಮೇರ್, ಜಾಮ್ನಗರ್, ಭಟಿಂಡಾ, ಭುಜ್, ಧರ್ಮಶಾಲಾ, ಶಿಮ್ಲಾ, ರಾಜ್ಕೋಟ್, ಪೋರಬಂದರ್, ಬಿಕಾನೆರ್, ಹಿಂದನ್, ಕಿಶನ್ಗಢ, ಕಾಂಡ್ಲಾ ಹಾಗೂ ಗ್ವಾಲಿಯರ್ ಸೇರಿದಂತೆ ದೇಶದ ಹಲವು ವಿಮಾನ ನಿಲ್ದಾಣಗಳು ಬಂದ್ ಆಗಿವೆ. ಇನ್ನೂ ಭದ್ರತಾ ಕಾರಣಗಳಿಂದಾಗಿ ಈ ಸ್ಥಳಗಳಿಗೆ ಹೊರಡುವ ಹಾಗೂ ಇಲ್ಲಿಂದ ತೆರಳುವ ಎಲ್ಲ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಮತ್ತು ಪ್ರಯಾಣಿಕರು ತಮ್ಮ ವಿಮಾನ ಪ್ರಯಾಣವನ್ನು ಅದಕ್ಕೆ ಅನುಗುಣವಾಗಿ ಯೋಜಿಸುವಂತೆ ವಿವಿಧ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ತಮ್ಮ ಅಧಿಸೂಚನೆಯಲ್ಲಿ ಮನವ ಮಾಡಿಕೊಂಡಿವೆ. ಇನ್ನೂ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಅಡಗುತಾಣಗಳ ಮೇಲೆ ಭಾರತ ನಡೆಸಿದ ದಾಳಿಯ ನಂತರ, ಬಹುತೇಕ ಎಲ್ಲಾ ವಿದೇಶಿ ವಿಮಾನಯಾನ ಸಂಸ್ಥೆಗಳು ಬುಧವಾರ ಬೆಳಿಗ್ಗೆಯಿಂದ ಪಾಕಿಸ್ತಾನದ ವಾಯುಪ್ರದೇಶದ ಮೇಲಿನ ಹಾರಾಟವನ್ನು ಸ್ಥಗಿತಗೊಳಿಸಿವೆ.
ವಿಮಾನಯಾನ ಸಂಸ್ಥೆಗಳಿಂದ ಕ್ರಮಗಳೇನು..?
ಸರ್ಕಾರ ವಿಧಿಸಿರುವ ವಾಯುಪ್ರದೇಶ ನಿರ್ಬಂಧಗಳಿಂದಾಗಿ ಅಮೃತಸರ, ಬಿಕನೇರ್, ಚಂಡೀಗಢ, ಧರ್ಮಶಾಲಾ, ಗ್ವಾಲಿಯರ್, ಜಮ್ಮು, ಜೋಧ್ಪುರ, ಕಿಶನ್ಗಢ, ಲೇಹ್, ರಾಜ್ಕೋಟ್ ಮತ್ತು ಶ್ರೀನಗರ ಸೇರಿದಂತೆ ವಿಮಾನ ನಿಲ್ದಾಣಗಳಿಂದ 165 ಕ್ಕೂ ಹೆಚ್ಚು ವಿಮಾನಗಳನ್ನು 2025ರ ಮೇ 10ರ ಬೆಳಿಗ್ಗೆ 5.29 ಗಂಟೆಯವರೆಗೆ ರದ್ದುಗೊಳಿಸಲಾಗಿದೆ ಎಂದು ಇಂಡಿಗೋ ಹೇಳಿಕೆ ನೀಡಿದೆ. ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗೆ ವಿಮಾನದ ಸ್ಥಿತಿಯನ್ನು ಆನ್ಲೈನ್ನಲ್ಲಿ ಪರಿಶೀಲಿಸಲು ಸಲಹೆ ನೀಡಿದೆ. ಅಗತ್ಯವಿರುವ ಬುಕಿಂಗ್ಗಳನ್ನು ರದ್ದುಪಡಿಸಿ ಉಚಿತ ಮರುಹೊಂದಿಕೆ ಅಥವಾ ಪೂರ್ಣ ಮರುಪಾವತಿಯನ್ನು ನೀಡಲಾಗಿದೆ ಎಂದು ಇಂಡಿಗೋ ತಿಳಿಸಿದೆ.
ವಿಮಾನಯಾನ ಪ್ರಾಧಿಕಾರದ ನಿರ್ದೇಶನಗಳಿಗೆ ಅನುಗುಣವಾಗಿ, ಮೇ 10 ರಂದು ಬೆಳಿಗ್ಗೆ 5.29 ಗಂಟೆಯವರೆಗೆ ಜಮ್ಮು, ಶ್ರೀನಗರ, ಲೇಹ್, ಜೋಧ್ಪುರ, ಅಮೃತಸರ, ಭುಜ್, ಜಾಮ್ನಗರ, ಚಂಡೀಗಢ ಮತ್ತು ರಾಜ್ಕೋಟ್ಗೆ ಹೋಗುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಪ್ರಕಟಿಸಿದೆ. ಪ್ರಯಾಣಿಕರಿಗೆ ಮರುಹೊಂದಿಸುವ ಶುಲ್ಕ ಅಥವಾ ಪೂರ್ಣ ಮರುಪಾವತಿಯ ಮೇಲೆ ಒಂದು ಬಾರಿ ವಿನಾಯಿತಿ ನೀಡಲಾಗುವುದು. ಹೆಚ್ಚಿನ ವಿವರಗಳಿಗಾಗಿ ಗ್ರಾಹಕರು ಅದರ ಕಾಲ್ ಸೆಂಟರ್ ಅಥವಾ ವೆಬ್ಸೈಟ್ ಮೂಲಕ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಹೇಳಿದೆ.
ಮೇ 10 ರಂದು ಬೆಳಿಗ್ಗೆ 5.30 ರವರೆಗೆ ಅಮೃತಸರ, ಗ್ವಾಲಿಯರ್, ಜಮ್ಮು, ಶ್ರೀನಗರ ಮತ್ತು ಹಿಂಡನ್ಗೆ ಹೋಗುವ ಮತ್ತು ಹೋಗುವ ವಿಮಾನಗಳಿಗೆ ಪೂರ್ಣ ಮರುಪಾವತಿ ಅಥವಾ ಉಚಿತ ಮರುಹೊಂದಿಕೆಯನ್ನು ಏರ್ ಇಂಡಿಯಾ ಎಕ್ಸ್ಪ್ರೆಸ್ ದೃಢಪಡಿಸಿದೆ. ಉದ್ವಿಗ್ನ ಪರಿಸ್ಥಿತಿಯ ಕಾರಣ, ಉತ್ತರ ಭಾರತದ ವಿಮಾನ ನಿಲ್ದಾಣಗಳಾದ ಧರ್ಮಶಾಲಾ, ಲೇಹ್, ಜಮ್ಮು, ಶ್ರೀನಗರ ಮತ್ತು ಅಮೃತಸರಗಳನ್ನು ಮುಂದಿನ ಸೂಚನೆ ಬರುವವರೆಗೂ ಮುಚ್ಚಲಾಗಿದ್ದು, ನಿರ್ಗಮನ, ಆಗಮನ ಮತ್ತು ಸಂಬಂಧಿತ ವಿಮಾನಗಳ ಮೇಲೆ ಸಂಭಾವ್ಯ ಪರಿಣಾಮ ಬೀರುತ್ತದೆ ಎಂದು ಸ್ಪೈಸ್ಜೆಟ್ ತಿಳಿಸಿದೆ.