ಆಪರೇಷನ್ ಸಿಂಧೂರ್ ವಿಶೇಷ :
ಬೆಂಗಳೂರು : ಬೆಳಗಾವಿ ವೀರರಾಣಿ ಕಿತ್ತೂರು ಚನ್ನಮ್ಮಾಜಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮನ ಕ್ರಾಂತಿಯ ನೆಲ, ದೇಶದಲ್ಲಿ ಕ್ರಾಂತಿ ಆದಾಗ ಸಹಜವಾಗಿ ಕ್ರಾಂತಿಯ ನೆಲದ ಪಾತ್ರವೂ ಇರುತ್ತದೆ. ಈ ಹಿಂದೆ ಭಾರತ ಪಾಪಿ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟೈಕ್ ಮಾಡಿತ್ತು. ಆ ಕಾರ್ಯಾಚರಣೆಯ ರೂಪರೇಷೆ ಸಿದ್ದವಾಗಿದ್ದು ನಮ್ಮ ಹೆಮ್ಮೆಯ ಕ್ರಾಂತಿಯ ನೆಲ ಬೆಳಗಾವಿಯಲ್ಲಿ ಎನ್ನುವುದೆ ಸಂತಸ.
ಈಗ ಪಾಕಿಸ್ತಾನದ ವಿರುದ್ಧ ಭಾರತ ಸಮರ ಸಾರಿದೆ. ಎಲ್ಲ ಭಾರತೀಯರು ಹೆಮ್ಮೆಪಡುವ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ರಣಹೇಡಿ ಪಾಕಿಸ್ತಾನ ಪತರುಗುಟ್ಟಿ ಹೋಗಿದೆ. ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಇದೀಗ ಶಾಂತಿ ಮಂತ್ರ ಪಠಿಸುವ ತಂತ್ರದ ಮೊರೆ ಹೋಗಿದೆ. ಆದರೆ ಈ ಆಪರೇಷನ್ ಸಿಂಧೂರ್ ನಡೆಸಿ 100ಕ್ಕೂ ಅಧಿಕ ಉಗ್ರರ ರುಂಡ ಚಂಡಾಡಿರುವ ಭಾರತೀಯ ಸೇನೆಯು ಪಹಲ್ಗಾಮ್ ದಾಳಿಯಲ್ಲಿ ಬಲಿಯಾದ ಅಮಾಯಕ ಪ್ರವಾಸಿಗರ ಸಾವಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಿದೆ.
ಇನ್ನೂ ಈ ಮಹಾತ್ವಾಕಾಂಕ್ಷಿ ದೇಶ ರಕ್ಷಣೆಯ ಕಾರ್ಯದಲ್ಲಿ ಕನ್ನಡದ ಪಾಲು ಇರದಿದ್ದರೆ ಹೇಗೆ..? ಭಾರತ ಯಾವುದೇ ಒಂದು ಮೈಲಿಗಲ್ಲನ್ನು ಸಾಧಿಸಿದರೆ ಅದರಲ್ಲಿ ಕನ್ನಡಿಗರ, ಅದರಲ್ಲೂ ಬೆಳಗಾವಿಯ ಪಾತ್ರ ಇದ್ದೆ ಇರುತ್ತದೆ. ಅದೇ ರೀತಿ ಆಪರೇಷನ್ ಸಿಂಧೂರ್, ಈ ಕಾರ್ಯಾಚರಣೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಕೊಣ್ಣೂರ ಗ್ರಾಮದ ಸೊಸೆ ಕೂಡಾ ಮುಖ್ಯ ಪಾತ್ರ ವಹಿಸುತ್ತಿರುವ ವಿಚಾರ ಬೆಳಗಾವಿ ಜಿಲ್ಲೆಯ ಜನ ಹೆಮ್ಮೆ ಪಡುವ ಸಂಗತಿಯಾಗಿದೆ.
ಬೆಳಗಾವಿಯ ಸೊಸೆ ಈಗ ಭಾರತದ ಹೆಮ್ಮೆ..!
ಪಾಕ್ ಉಗ್ರರ ವಿರುದ್ಧ ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಸೇನಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಭಾರತೀಯ ಸೇನೆ ಪಾಕಿಸ್ತಾನದಲ್ಲಿರುವ ಉಗ್ರರ ಎಲ್ಲ ಅಡಗುತಾಣಗಳನ್ನು ಉಡೀಸ್ ಮಾಡಿದೆ. ಭಾರತದ ದಾಳಿಗೆ ಹೆದರಿ ಬಂಕರ್ಗಳಲ್ಲಿ ಅಡಗಿದ್ದ ಪುಕ್ಕಲು ಪಾಪಿ ಉಗ್ರರನ್ನು ನಿರ್ನಾಮ ಮಾಡುವ ಮೂಲಕ ರಣಹೇಡಿ ದೇಶಕ್ಕೆ ತಕ್ಕ ಶಾಸ್ತಿ ಮಾಡಿದೆ. ಪಾಕಿಸ್ತಾನಕ್ಕೆ ನಡುರಾತ್ರಿಯಲ್ಲಿಯೇ ಸೂರ್ಯೋದಯವಾಗುವಂತೆ ಮಿಸೈಲ್ಗಳು ತಮ್ಮ ಹೊಳಪನ್ನು ತೋರಿಸಿದ್ದವು.
ಪಾಕಿಸ್ತಾನದ 9 ಉಗ್ರರ ತಾಣಗಳು ಹಾಗೂ 21 ಉಗ್ರರ ನೆಲೆಗಳನ್ನು ಸಂಪೂರ್ಣ ಧ್ವಂಸ ಮಾಡಿರುವ ಕುರಿತು ಮೊಟ್ಟ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸುವ ಮೂಲಕ ಆಪರೇಷನ್ ಸಿಂಧೂರ್ ಬಗ್ಗೆ ಜಾಗತಿಕ ಮಟ್ಟದ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಗಟ್ಟಿ ಗಿತ್ತಿ ಲೆಫ್ಟಿನೆಂಟ್ ಕರ್ನಲ್ ಸೋಫೀಯಾ ಖುರೇಷಿ ಬೆಳಗಾವಿಯ ಹೆಮ್ಮೆಯ ಸೊಸೆಯಾಗಿದ್ದಾರೆ ಎನ್ನುವುದು ಸಂತಸದ ವಿಚಾರ. ಇನ್ನೂ ಬಹುರಾಷ್ಟ್ರೀಯ ಸೇನಾ ತುಕಡಿಯನ್ನು ಮುನ್ನಡೆಸಿರುವ ಮೊದಲ ಭಾರತೀಯ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸೋಫೀಯಾ ಖುರೇಷಿ ಮೂಲತಃ ಗುಜರಾತನ ಬರೋಡಾದವರಾಗಿದ್ದಾರೆ.
ಆದರೆ ಕಳೆದ 2015ರಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದ ತಾಜುದ್ದೀನ್ ಬಾಗೇವಾಡಿ ಅವರನ್ನು ಪ್ರೀತಿಸಿ ವಿವಾಹವಾಗಿರುವ ಸೋಫೀಯಾ ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ಅವರ ಪತಿ ತಾಜುದ್ದೀನ್ ಜಾನ್ಸಿಯಲ್ಲಿ ಕರ್ನಲ್ ಆಗಿ ಸೇವೆಯಲ್ಲಿದ್ದಾರೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಗ್ಗೆ ಎಳೆ ಎಳೆಯಾಗಿ ಮಾಧ್ಯಮಗಳಿಗೆ ಸಾಕ್ಷ್ಯಿ ಸಮೇತ ಬಿಚ್ಚಿಟ್ಟ ಕರ್ನಲ್ ಸೂಫಿಯಾ ಬೆಳಗಾವಿಯ ಸೊಸೆ ಎನ್ನುವದು ಕನ್ನಡಿಗರ ಪಾಲಿಗೆ ಗರ್ವದ ಸಂಗತಿಯಾಗಿದೆ.
ಏನು ಹೇಳಿದ್ದರು ಕರ್ನಲ್ ಸೋಫೀಯಾ..?
ಇನ್ನೂ ಪ್ರಮುಖವಾಗಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಯಶಸ್ವಿಯ ಬಳಿಕ ಜಾಗತಿಕ ಮಟ್ಟದ ಮಾಧ್ಯಮಗಳ ಎದುರು ನಡೆದಿದ್ದ ಸುದ್ದಿಗೋಷ್ಠಿಯನ್ನು ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಮ್ ಮಿಶ್ರಿಯ ಜೊತೆಯಾಗಿ ಇಬ್ಬರು ಮಹಿಳಾ ಅಧಿಕಾರಿಗಳು ಅಂತರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಅವರಲ್ಲಿ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹಾಗೂ ಲೆಫ್ಟಿನೆಂಟ್ ಕರ್ನಲ್ ಸೋಫೀಯಾ ಖುರೇಷಿ. ಇನ್ನೂ ಸುದ್ದಿಗೋಷ್ಟಿಯಲ್ಲಿ ಮಾಧ್ಯಮಗಳಿಗೆ ತಾವು ಕೈಗೊಂಡಿದ್ದ ಜಬಾಬ್ದಾರಿಯುತ ಕಾರ್ಯಾಚರಣೆಯ ಬಗ್ಗೆ ಅತ್ಯಂತ ಅರ್ಥಗರ್ಭಿತವಾಗಿ ಸರಳ ವಿವರಣೆ ಮಾಡಿದ್ದರು ಈ ಸೋಫೀಯಾ.
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ 9 ಅಡಗುತಾಣಗಳ ಮೇಲೆ ಭಾರತೀಯ ಸೇನೆಯು ದಾಳಿ ನಡೆಸಿದೆ. ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಮಿಲಿಟರಿ ಆಪರೇಷನ್ ಸಿಂಧೂರ ಹೆಸರಿನಲ್ಲಿ 9 ಉಗ್ರರ ತಾಣ ಮತ್ತು ತರಬೇತಿ ಸೌಲಭ್ಯ ಶಿಬಿರದ ಮೇಲೆ ದಾಳಿ ನಡೆಸಿದೆ. ಗಡಿಯಾಚೆಗಿನ ಭಯೋತ್ಪಾದನೆಯ ನೇರ ಸಂಪರ್ಕದ ಸಂಬಂಧ ಕುರಿತು ನಿಖರ ಗುಪ್ತಚರ ಮಾಹಿತಿ ಆಧಾರದ ಮೇಲೆ ಎಚ್ಚರಿಕೆಯಿಂದ ಈ ದಾಳಿ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದರು.
ಈ ಹಿಂದೆ ಭಾರತದ ವಿರುದ್ಧ ಭಯೋತ್ಪಾದಕ ದಾಳಿ ಸಂಘಟಿಸಿ, ಅದಕ್ಕೆ ಕಾರಣರಾದ ಉಗ್ರರ ನೆಲೆಗಳನ್ನು ಮಾತ್ರ ಗುರಿಯಾಗಿಸಲಾಗಿತ್ತು. ಲಾಹೋರ್ನಿಂದ ಸುಮಾರು 40 ಕಿಲೋಮೀಟರ್ ಉತ್ತರದಲ್ಲಿರುವ ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ತರಬೇತಿ ನೆಲೆಯೂ ಸೇರಿದಂತೆ ಇತರೆಡೆ ಆಪರೇಷನ್ ನಡೆದಿದೆ. 2008ರ ನವೆಂಬರ್ 26ರಂದು ನಡೆದಿದ್ದ ಮುಂಬೈ ದಾಳಿಯ ರೂವಾರಿಗಳಾದ ಅಜ್ಮಲ್ ಕಸಬ್ ಮತ್ತು ಡೇವಿಡ್ ಹೆಡ್ಲಿ ಇಲ್ಲಿಂದಲೇ ತರಬೇತಿ ಪಡೆದಿದ್ದರು ಎಂದು ಸೋಫೀಯಾ ಅಂತರಾಷ್ಟ್ರೀಯ ಸಮುದಾಯಕ್ಕೆ ಮಾಹಿತಿ ನೀಡಿದ್ದರು.
ಬಾಲ ಕಟ್ ಮಾಡ್ತೀವಿ..
ಪಹಲ್ಗಾಮ್ನಂತಹ ಗಡಿಯಾಚೆಗಿನ ದಾಳಿಗಳಿಗೆ ಭಾರತವು ತಕ್ಕ ಉತ್ತರ ನೀಡಿದೆ ಎಂದು ಸರ್ಕಾರ ತಿಳಿಸಿದೆ. ಭಾರತ ಭಯೋತ್ಪಾದಕರ ನೆಲೆಗಳನ್ನು ಕೆಡವಲು ಮತ್ತು ನಿಷ್ಕ್ರಿಯಗೊಳಿಸುವುದರ ಮೇಲೆ ಈ ದಾಳಿಯು ಕೇಂದ್ರೀಕರಿಸಿದೆ. ಬಾರತದ ಮೇಲೆ ಪಾಕಿಸ್ತಾನ ದಾಳಿಯಂತಹ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ ಪಾಕಿಗಳ ಬಾಲವನ್ನುಕಟ್ ಮಾಡುವುದಾಗಿ ಅವರು ನೇರವಾಗಿ ಎಚ್ಚರಿಕೆ ರವಾನಿಸಿದ್ದರು. ಇಡೀ ಭಾರತಕ್ಕೆ ಅಲ್ಲದೆ ಪ್ರಪಂಚಕ್ಕೆ ಕಂಟಕವಾಗಿರುವ ಭಯೋತ್ಪಾದನೆ ನಿರ್ಮೂಲನೆಯ ಮಹತ್ವದ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಬೆಳಗಾವಿಯ ಸೊಸೆಗೆ ಇನ್ನಷ್ಟು ಶುಭವಾಗಲಿ, ಅವರಿಂದ ದೇಶಕ್ಕಾಗಿ ಮತ್ತಷ್ಟು ಈ ರೀತಿಯ ಉಗ್ರ ಸಂಹಾರವಾಗಲಿ ಎನ್ನುವುದೇ ಎಲ್ಲ ಕನ್ನಡಿಗರ ಹಾಗೂ ಭಾರತೀಯರ ಆಶಯವಾಗಿದೆ.