Hubli News: ಹುಬ್ಬಳ್ಳಿ: ಪಹಲ್ಗಾಂ ಪ್ರಕರಣದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಾ ಖಾಡ್ಸೆ ಹೇಳಿದ್ದಾರೆ.
ಉಗ್ರಗಾಮಿಗಳ ಕೃತ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋದಾಗಿ ಪ್ರಧಾನಿಗಳು ಹೇಳಿದ್ದಾರೆ. ಭಾರತದ ಪ್ರತಿಯೊಬ್ಬ ನಾಗರೀಕರಿಗೆ ಸುರಕ್ಷತೆ ಕೊಡೋದು ನಮ್ಮ ಆದ್ಯ ಕರ್ತವ್ಯ. ಕಾಶ್ಮೀರದಲ್ಲಿ ನಡೆದ ಘಟನೆಗೆ ತಕ್ಕ ಉತ್ತರ ಕೊಡಲಾಗುತ್ತದೆ. ಕಲಂ 370 ವಾಪಸ್ ಪಡೆದ ನಂತರ ಜಮ್ಮು – ಕಾಶ್ಮೀರದ ಜನ ಹೊಸ ಜೀವನ ಆರಂಭಿಸಿದ್ದಾರೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಇತರೆ ರಾಜ್ಯಗಳಂತೆ ಕಾಶ್ಮೀರವೂ ಅಭಿವೃದ್ಧಿಯಾಗಬೇಕಿದೆ. ಪ್ರವಾಸೋದ್ಯಮದ ಜೊತೆಗೆ ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿಯಾಗಬೇಕಿದೆ.
ಒಳ್ಳೊಳ್ಳೆ ಯೋಜನೆ ಕೊಡಲು ಕೇಂದ್ರ ಸರ್ಕಾರ ತಯಾರಿಯಿದೆ. ಅಲ್ಲಿ ನಡೆಯುತ್ತಿರೋ ಉಗ್ರಗಾಮಿ ಚಟುವಟಿಕೆ ಹತ್ತಿಕ್ಕಲು ಕೇಂದ್ರ ಎಲ್ಲ ರೀತಿಯ ಪ್ರಯತ್ನ ನಡೆಸಿದೆ. ಇದರಲ್ಲಿ ಯಾರೂ ರಾಜಕಾರಣ ಮಾಡಲು ಹೋಗಬಾರದು. ನಮ್ಮ ದೇಶದ ನಾಗರೀಕರ ಮೇಲೆ ದಾಳಿಯಾಗಿದೆ. ಎಲ್ಲ ಪಕ್ಷದ ನಾಯಕರೂ ಕೇಂದ್ರ ಸರ್ಕಾರದ ಜೊತೆಗೆ ನಿಲ್ಲಬೇಕು. ಎಲ್ಲ ಪಕ್ಷಗಳೂ ಕೇಂದ್ರ ಸರ್ಕಾರದ ಜೊತೆಗೆ ನಿಲ್ಲಲಿದೆ ಅನ್ನೋ ವಿಶ್ವಾಸವಿದೆ ಎಂದು ರಕ್ಷಾ ಖಾಡ್ಸೆ ಹೇಳಿದ್ದಾರೆ.