Political News: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಎದುರು ಸಂಭವಿಸಿದ್ದ ಭೀಕರ ಕಾಲ್ತುಳಿತ ದುರಂತದಲ್ಲಿ 11 ಜನ ಆರ್ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದರು. ಸತತ ಹದಿನೆಂಟು ವರ್ಷಗಳ ಬಳಿಕ ಆರ್ಸಿಬಿ ಐಪಿಎಲ್ ಕಪ್ ಪಡೆಯುವ ಮೂಲಕ ತನ್ನ ಕನಸನ್ನು ನನಸಾಗಿಸಿಕೊಂಡಿತ್ತು. ಆದರೆ ಕಪ್ ಗೆದ್ದ ಮರುದಿನವೇ ಬೆಂಗಳೂರಿನಲ್ಲಿ ವಿಜಯೋತ್ಸವ ಆಚರಣೆಗಾಗಿ ಚಿನ್ನಸ್ವಾಮಿ ಸ್ಟೇಡಿಯಂಗೆ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದರು.
ಇನ್ನೂ ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನಸಂದಣಿಯಿಂದ ಏಕಾಏಕಿ ಕಾಲ್ತುಳಿತ ಸಂಭವಿಸಿ 47ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಆದರೆ ಮೃತ ಆಭಿಮಾನಿಗಳ ಕುಟುಂಬಕ್ಕೆ ರಾಜ್ಯ ಸರ್ಕಾರ ಘೋಷಿಸಿರುವ 10 ಲಕ್ಷ ರೂಪಾಯಿ ಪರಿಹಾರದ ವಿಚಾರದಲ್ಲಿಯೂ ಇದೀಗ ಪರ ವಿರೋಧದ ಚರ್ಚೆ ಶುರುವಾಗಿದೆ. ವಿಪಕ್ಷಗಳೂ ಸಹ ಇದೇ ವಿಚಾರಕ್ಕೆ ಸರ್ಕಾರದ ನಡೆಯನ್ನು ಖಂಡಿಸಿವೆ.
ಅಲ್ಲದೆ ಪರಿಹಾರ ವಿತರಣೆಯಲ್ಲಿಯೂ ರಾಜ್ಯ ಸರ್ಕಾರ ಇಬ್ಬಗೆಯ ನೀತಿಯನ್ನು ಅನುಸರಿಸಿದೆ, ಕೇರಳಕ್ಕೆ ಮಿಡಿದಿದ್ದ ಸರ್ಕಾರದ ಮನ ತಮ್ಮಲ್ಲೇ ಆದ ದುರಂತಕ್ಕೆ ಮಿಡಿಯಲಿಲ್ಲ ಯಾಕೆ ಎಂಬ ಪ್ರಶ್ನೆಗಳು ಸೃಷ್ಟಿಯಾಗುತ್ತಿವೆ.
ದುರಂತರದ ಬಳಿಕ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತ ಅಭಿಮಾನಿಗಳ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದರು. ಅಲ್ಲದೆ ಗಾಯಾಳುಗಳಿಗೆ ಸರ್ಕಾರದ ವತಿಯಿಂದ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದರು. ಅಲ್ಲದೆ ಅವರ ಸಂಚಾರ ವೆಚ್ಚಗಳನ್ನೂ ಸಹ ಸರ್ಕಾರ ನೋಡಿಕೊಳ್ಳಲಿದೆ ಎಂದು ಹೇಳಿದ್ದರು. ಆದರೆ ಇದೇ ಪರಿಹಾರ ವಿತರಣೆಯಲ್ಲಿ ಸರ್ಕಾರ ಮಾಡಿರುವ ನಿರ್ಧಾರಕ್ಕೆ ಸ್ವಪಕ್ಷದಲ್ಲಿಯೇ ಅಸಮಾಧಾನದ ಹೊಗೆಯಾಡುತ್ತಿದ್ದು, ಪರಿಹಾರದ ಮೊತ್ತವನ್ನು ಇನ್ನಷ್ಟು ಏರಿಕೆ ಮಾಡಬಹುದಿತ್ತು ಎಂಬ ಕೂಗು ಜೋರಾಗಿದೆ.
ಇನ್ನೂ ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಳಿಗೆ ಸರ್ಕಾರ ತಲಾ ಒಂದೊಂದು ಕೋಟಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರ ಒಂದೊಂದು ಕೋಟಿ ರೂಪಾಯಿಗಳಷ್ಟು ಪರಿಹಾರ ನೀಡಬೇಕು..
ದುರಂತದಲ್ಲಿ ಮೃತರಾದ ಅಭಿಮಾನಿಗಳಿಗೆ ಸರ್ಕಾರ ಇನ್ನೂ ಹೆಚ್ಚಿನ ಪರಿಹಾರ ಕೊಡಬೇಕು ಅಂತಾ ನಾನು ಕೂಡ ಒತ್ತಾಯ ಮಾಡುತ್ತೇನೆ. ಸರ್ಕಾರ ಅಷ್ಟೇ ಅಲ್ಲ ಆರ್ಸಿಬಿ ಫ್ರಾಂಚೈಸಿ, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಸೇರಿ ಎಲ್ಲರೂ ಹೆಚ್ಚಿನ ಪರಿಹಾರ ಕೊಡಬೇಕು. ಬರೀ ಹತ್ತು ಲಕ್ಷ ಅಲ್ಲ ಒಂದೊಂದು ಕೋಟಿ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಎಷ್ಟೇ ಪರಿಹಾರ ಕೊಟ್ಟರೂ ಕೂಡ ಸತ್ತ ಜೀವ ವಾಪಸ್ ತರಲು ಆಗುವುದಿಲ್ಲ. ವಿಪಕ್ಷದವರು ಜನರ ದಿಕ್ಕು ತಪ್ಪಿಸಲು ಏನು ಮಾಡಬೇಕೋ ಅದನ್ನ ಮಾಡುತ್ತಾರೆ. ನಮ್ಮ ಹಿರಿಯರು ಏನೇನೋ ಉತ್ತರ ಕೊಡಬೇಕು ಅದನ್ನು ಕೊಟ್ಟೆ ಕೊಡುತ್ತಾರೆ. ಘಟನೆಯಲ್ಲಿ ಇಂಟಲಿಜೆನ್ಸ್ ತಪ್ಪಾಗಿದ್ರೇ ತನಿಖೆಯಿಂದ ಗೊತ್ತಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಬಿಸಿಸಿಐ ಒಂದೊಂದು ಕೋಟಿ ರೂಪಾಯಿ ನೀಡಲಿ ಎಂದಿದ್ದ ಬಿಕೆ ಹರಿಪ್ರಸಾದ್..
ಇನ್ನೂ ಇದಕ್ಕೂ ಮುನ್ನ ಮಂಗಳೂರಿನಲ್ಲಿ ಇದೇ ವಿಚಾರಕ್ಕೆ ಮಾತನಾಡಿದ್ದ ಎಂಎಲ್ಸಿ ಬಿಕೆ ಹರಿಪ್ರಸಾದ್, ಐಪಿಎಲ್ ನಡೆಸುವವರೆಲ್ಲರೂ ಕರೋಡ್ ಪತಿಗಳಾಗಿದ್ದಾರೆ. ಬಿಸಿಸಿಐ ಪ್ರತಿಯೊಬ್ಬ ಅಭಿಮಾನಿಯ ಕುಟುಂಬಕ್ಕೆ ಒಂದೊಂದು ಕೋಟಿ ರೂಪಾಯಿಗಳ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದರು. ಇದಾದ ಬಳಿಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬಗ್ಗೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ತಮ್ಮದೇ ಪಕ್ಷದ ಮಂತ್ರಿ ಹಾಗೂ ಪರಿಷತ್ ಸದಸ್ಯರ ಒತ್ತಾಯಕ್ಕೆ ರಾಜ್ಯ ಸರ್ಕಾರ ಸೊಪ್ಪು ಹಾಕುತ್ತದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.