Political News: ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಾಯಕರ ಬುಲಾವ್ ಮೇರೆಗೆ ದೆಹಲಿಗೆ ತೆರಳಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ರಾಹುಲ್ ಗಾಂಧಿ ಸೇರಿದಂತೆ ಎಐಸಿಸಿ ವರಿಷ್ಠರನ್ನು ಭೇಟಿಯಾಗಿದ್ದಾರೆ. ಪ್ರಮುಖವಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಭೀಕರ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಇಬ್ಬರೂ ನಾಯಕರು ಹೈಕಮಾಂಡ್ ಗೆ ಸಂಪೂರ್ಣ ವಿವರ ನೀಡಿದ್ದಾರೆ. ಅಲ್ಲದೆ ಇನ್ನು ಮುಂದೆ ಈ ರೀತಿಯ ಘಟನೆಗಳು ಆಗದಂತೆ ಎಚ್ಚರಿಕೆ ವಹಿಸಬೇಕೆಂದು ಕೈ ನಾಯಕರು ಸಿಎಂ ಹಾಗೂ ಡಿಸಿಎಂ ಇಬ್ಬರಿಗೂ ತಾಕೀತು ಮಾಡಿದ್ದಾರೆ.
ಇನ್ನೂ ರಾಜ್ಯದ ಸಚಿವ ಸಂಪುಟ ಪುನಾರಚನೆಯ ಬಗ್ಗೆಯೂ ಹೈಕಮಾಂಡ್ ನಾಯಕರು ಒಲವು ತೋರಿದ್ದು, ಶೀಘ್ರದಲ್ಲೇ ಈ ಕುರಿತು ನಿರ್ಧಾರ ಹೊರಬೀಳಲಿದೆ. ಮುಖ್ಯವಾಗಿ ಜಾತಿ ಜನಗಣತಿ ವರದಿಯ ಕುರಿತು ಎದ್ದಿರುವ ಅಪಸ್ವರಗಳನ್ನು ಸರಿಪಡಿಸಿ ಶೀಘ್ರದಲ್ಲೇ ಮತ್ತೊಮ್ಮೆ ಜಾತಿ ಸಮೀಕ್ಷೆ ಮಾಡುವಂತೆ ಪಕ್ಷದ ವರಿಷ್ಠರು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ.
ಕಾಲ್ತುಳಿತ ದುರಂತದ ಬಗ್ಗೆ ಸಂಪೂರ್ಣ ವಿವರಣೆ ನೀಡಿದ್ದೇವೆ..
ಅಲ್ಲದೆ ವರಿಷ್ಠರ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ವರಿಷ್ಠರನ್ನು ಭೇಟಿಯಾದ ವೇಳೆ ಸಚಿವ ಸಂಪುಟ ಪುನಾರಚನೆ ಕುರಿತಂತೆ ಯಾವುದೇ ಚರ್ಚೆ ಆಗಿಲ್ಲ. ಶಾಸಕರಿಗೆ ಸಚಿವ ಸ್ಥಾನ ನೀಡುವ ಕುರಿತು ಯಾವುದೇ ರೀತಿಯಾದ ಚರ್ಚೆ ಸಭೆಯಲ್ಲಿ ಆಗಿಲ್ಲ. ಆದರೆ ಬೆಂಗಳೂರಿನ ಕಾಲ್ತುಳಿತದ ದುರಂತದ ಕುರಿತು, ಕಾಲ್ತುಳಿತದ ದುರಂತದಲ್ಲಿ ಕೈಗೊಂಡಿರುವ ಕ್ರಮದ ಬಗ್ಗೆ ವಿವರಣೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಇದರ ಸಮರ್ಥನೆಗೆ ಕುಂಭಮೇಳದ ಘಟನೆ ಉದಾಹರಣೆಗೆ ತಗೋಳಲ್ಲ..
ಈಗಾಗಲೇ ಸಿಐಡಿ, ನ್ಯಾಯಮೂರ್ತಿ ಕುನ್ಹಾ ನೇತೃತ್ವದ ತನಿಖೆಯ ಬಗ್ಗೆ ವರಿಷ್ಠ ರಿಗೆ ಮಾಹಿತಿ ನೀಡಿದ್ದೇವೆ. ಪೊಲೀಸ್ ಅಧಿಕಾರಿಗಳ ಅಮಾನತು, ಇಂಟಲಿಜೆನ್ಸ್ ಮುಖ್ಯಸ್ಥರ ವರ್ಗಾವಣೆ ಈ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಿದ್ದೇವೆ. 11 ಜನರು ಸಾಯಬಾರದಿತ್ತು ಈ ಘಟನೆಯಿಂದ ನೋವಾಗಿದೆ. ಇದರ ಸಮರ್ಥನೆಗೆ ಕುಂಭಮೇಳದ ಘಟನೆಯನ್ನು ತೆಗೆದುಕೊಳ್ಳುವುದಿಲ್ಲ ರಾಜ್ಯದಲ್ಲಿ ನಡೆದ ಘಟನೆ ಯಿಂದ ನೋವಾಗಿದೆ ತನಿಖೆಯ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
90 ದಿನಗಳೊಳಗೆ ಜಾತಿ ಸಮೀಕ್ಷೆ ಪೂರ್ಣ..
ಮುಖ್ಯವಾಗಿ ಜಾತಿಗಣತಿ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದರು. ಕೆಲವರು ವರದಿಗೆ ಅಪಸ್ವರ ಎತ್ತಿರುವ ಬಗ್ಗೆ ಚರ್ಚೆಯಾಯಿತು. ಜಾತಿಗಣತಿ ಸಮೀಕ್ಷೆ ಮಾಡಿ 9 ರಿಂದ 10 ವರ್ಷ ಆಗಿದೆ. ಹಾಗಾಗಿ ಮತ್ತೊಮ್ಮೆ ಮಾಡಲು ರಾಹುಲ್ ಗಾಂಧಿ ಹೇಳಿದ್ದಾರೆ. ಮತ್ತೊಮ್ಮೆ ಜಾತಿಗಣತಿ ಸಮೀಕ್ಷೆಗೆ ನಾವು ಒಪ್ಪಿಗೆ ನೀಡಿದ್ದೇವೆ. 90 ದಿನದೊಳಗೆ ಜಾತಿಗಣತಿ ಸಮೀಕ್ಷೆ ಮುಗಿಯಲಿದೆ ಎಂದು ಅವರು ತಿಳಿಸಿದ್ದಾರೆ.
ವರಿಷ್ಠರ ಕರೆಯ ಮೇರೆಗೆ ದೆಹಲಿಗೆ ಬಂದಿದ್ದೇವೆ..
ಇನ್ನೂ ಹೈಕಮಾಂಡ್ ನಾಯಕರ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ವರಿಷ್ಠರು ನನಗೆ ಹಾಗೂ ಸಿಎಂ ಅವರಿಗೆ ಬರಲು ಹೇಳಿದ್ದರು. ಹೀಗಾಗಿ ನಮ್ಮ ನಾಯಕರನ್ನು ಭೇಟಿ ಮಾಡಿದ್ದೇವೆ. ಜೂನ್ 12 ರಂದು ಜಾತಿ ಗಣತಿ ಕುರಿತು ತೀರ್ಮಾನ ಮಾಡಲು ಸಮಯ ನಿಗದಿ ಆಗಿತ್ತು. ಅಂದು ಜಾತಿ ಗಣತಿ ಬಗ್ಗೆ ಚರ್ಚೆ ನಡೆಸಲು ವಿಶೇಷ ಸಂಪುಟ ಸಭೆ ಕರೆಯಲಾಗಿತ್ತು. ಅಲ್ಲದೆ ಜಾತಿ ಗಣತಿ ಕುರಿತು ಅನೇಕ ಮಠಾಧೀಶರು ವರಿಷ್ಠರನ್ನು ಭೇಟಿಯಾಗಿದ್ದರು. ಅಂಕಿ ಸಂಖ್ಯೆಯ ಬಗ್ಗೆ ಆಕ್ಷೇಪ ಇದೆ ಎಂದು ಕೆಲವರು ಹೇಳಿದ್ದರು. ಹೀಗಾಗಿ ಯಾವುದೇ ಅಪಸ್ವರ ಬರಬಾರದೆಂಬ ಉದ್ದೇಶದಿಂದ ಮತ್ತೆ ಜಾತಿ ಗಣತಿಗೆ ಸಲಹೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ವರಿಷ್ಠರ ಸೂಚನೆ ಮೇರೆಗೆ ಜಾತಿ ಗಣತಿ ಸಮೀಕ್ಷೆ..
ನಮ್ಮ ವರಿಷ್ಠರ ಸೂಚನೆಯ ಮೇರೆಗೆ ಸರ್ಕಾರದ ವತಿಯಿಂದ ಜಾತಿ ಗಣತಿ ಸಮೀಕ್ಷೆ ಮಾಡಲು ತೀರ್ಮಾನಿಸಿದ್ದೇವೆ. ಹೊಸದಾಗಿ ನಡೆಯುವ ಜಾತಿ ಗಣತಿಗೆ ಎಲ್ಲರೂ ಸಹಕಾರ ನೀಡಿ, ನಮ್ಮ ಸರ್ಕಾರದ ಬಗ್ಗೆ ಯಾರಿಗೂ ಆತಂಕ ಬೇಡ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮೀಕ್ಷೆ ಮಾಡಲಿದ್ದೇವೆ. ಯಾವಾಗ ಸಮೀಕ್ಷೆ ಮಾಡಬೇಕೆಂದು ಸಿಎಂ ಅವರು ಸಂಪುಟ ಸಭೆ ನಡೆಸಿ ಮಾಹಿತಿ ನೀಡುತ್ತಾರೆ. ಆನ್ ಲೈನ್ ಮೂಲಕವೂ ಮಾಹಿತಿ ನೀಡಲು ಅವಕಾಶ ನೀಡುತ್ತೇವೆ. ಜಾತಿ ಗಣತಿ ಬಗ್ಗೆ ಅಪಸ್ವರ ಕೇಳಿ ಬಂದಿರುವುದರಿಂದ ಮತ್ತೆ ಸಮೀಕ್ಷೆ ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.