Political News: ಸತತ ಹನ್ನೊಂದು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸಿರುವ ವಿಪಕ್ಷ ಕಾಂಗ್ರೆಸ್, ಈ 11 ವರ್ಷಗಳು ದೇಶದ ಪ್ರಜಾಪ್ರಭುತ್ವ, ಆರ್ಥಿಕತೆ ಮತ್ತು ಸಾಮಾಜಿಕ ರಚನೆಯ ಪಾಲಿಗೆ ದೊಡ್ಡ ಹೊಡೆತ ನೀಡಿದ್ದು , ಕೇಂದ್ರ ಸರ್ಕಾರದವರು ಸರ್ವಾಧಿಕಾರಿಯಂತೆ ಆಡಳಿತ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.
ಇನ್ನೂ ಮೋದಿ ಸರ್ಕಾರದ 11 ವರ್ಷಗಳ ಆಡಳಿತದ ವಿರುದ್ಧ ಮಾತನಾಡಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ವಾಸ್ತವತೆಯ ಬಗ್ಗೆ ಮಾತನಾಡದೆ ಮೋದಿ 2047ಕ್ಕೆ ದೇಶ ಹೇಗೀರಬೇಕೆಂಬ ಕನಸಿನ ಕುರಿತು ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಮೋದಿ ಸರ್ಕಾರ ಸಂವಿಧಾನದ ಪ್ರತಿ ಪುಟಕ್ಕೆ ಸರ್ವಾಧಿಕಾರದ ಮಸಿ ಬಳಿದಿದೆ.
ಬಿಜೆಪಿ ಮತ್ತು ಆರ್ ಎಸ್ ಎಸ್ ಸೇರಿ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಿ, ಅವುಗಳ ಸ್ವಾಯತ್ತತೆಯ ಮೇಲೆ ದಾಳಿ ಮಾಡಿವೆ. ಮೋದಿ ಸರ್ಕಾರವು ಸಂವಿಧಾನದ ಪ್ರತಿ ಪುಟಕ್ಕೆ ಸರ್ವಾಧಿಕಾರದ ಮಸಿಯನ್ನು ಬಳಿದಿದೆ. ರಾಜ್ಯಗಳ ಹಕ್ಕುಗಳನ್ನು ನಿರ್ಲಕ್ಷ್ಯಿಸಿ ಒಕ್ಕೂಟ ರಚನೆಯನ್ನು ಬಲಹೀನಗೊಳಿಸಿದೆ. ಆರ್ಥಿಕತೆಯ ಬೆಳವಣಿಗೆಯೂ ಕುಸಿದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಮೋದಿ ಇದುವರೆಗೂ ಒಂದೇ ಒಂದು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿಲ್ಲ..
ಇನ್ನೂ ಪ್ರಧಾನಿ ನರೇಂದ್ರ ಮೋದಿ ಇದುವರೆಗೂ ಒಂದೇ ಒಂದು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ, ಅದರಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿಲ್ಲ. ಅವರು ಇದರಿಂದ ತಪ್ಪಿಸಿಕೊಂಡು ಓಡುತ್ತಿರುವುದು ಯಾಕೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ವ್ಯಂಗ್ಯವಾಡಿದ್ದಾರೆ.
ಅಲ್ಲದೆ ಮೋದಿ ಆಡಳಿತದಲ್ಲಿ ಭಾರತದ ಅಸಮಾನತೆಯ ಮಟ್ಟವು ವಸಾಹತುಶಾಹಿ ಬ್ರಿಟಿಷ್ ಆಡಳಿತಾವಧಿಯ ಹಂತವನ್ನೂ ಮೀರಿದೆ. ಪ್ರಮುಖ ವಲಯಗಳಲ್ಲಿ ಏಕಸ್ವಾಮ್ಯತೆ ಮತ್ತು ಭಾರತೀಯರ ವೇತನದ ನಿಶ್ಚಲತೆ ಹೆಚ್ಚಿದೆ ಎಂದು ದೂರಿದ್ದಾರೆ.
ಮೋದಿ ಆಡಳಿತದಲ್ಲಿ ಧನಿಕರು ದಾಖಲೆಯ ಸಂಖ್ಯೆಯಲ್ಲಿ ಬೆಳೆಯುತ್ತಲೇ ಇದ್ದಾರೆ..
ಕಳೆದ ಹನ್ನೊಂದು ವರ್ಷಗಳಲ್ಲಿ ಆರ್ಥಿಕ ಅಸಮಾನತೆಯನ್ನು ಮತ್ತಷ್ಟು ಗಾಢಗೊಳಿಸಿದೆ. ಮೋದಿ ಆಡಳಿತಾವಧಿಯಲ್ಲಿ ಭಾರತದ ಏಕಸ್ವಾಮ್ಯ ನೀತಿಯಿಂದ ದೊಡ್ಡ ಪ್ರಮಾಣದ ಬೆಲೆ ಏರಿಕೆಗೆ ಕಾರಣವಾಗಿದೆ. ಗ್ರಾಮೀಣ ಕೃಷಿ ಕಾರ್ಮಿಕರಿಂದ ಹಿಡಿದು ಸಂಬಳ ಪಡೆಯುವ ಮಧ್ಯಮ ವರ್ಗದವರೆಗೆ ಸರಾಸರಿ ಭಾರತೀಯರ ವೇತನವು ಕಳೆದ ಹತ್ತು ವರ್ಷಗಳಲ್ಲಿ ನಿಶ್ಚಲಗೊಂಡಿದೆ ಎಂದು ರಮೇಶ್ ಆರೋಪಿಸಿದ್ದಾರೆ.
ಅಲ್ಲದೆ ನಾನು ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ, ಮೋದಿ ಆಡಳಿತದಲ್ಲಿ ಧನಿಕರು ದಾಖಲೆಯ ಸಂಖ್ಯೆಯಲ್ಲಿ ಬೆಳೆಯುತ್ತಲೇ ಇದ್ದಾರೆ. ಬೆರಗುಗೊಳಿಸುವ ದರದಲ್ಲಿ ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.