Wednesday, June 18, 2025

Latest Posts

ಕೂಡಲೇ ತೋತಾಪುರಿ ಮಾವು ನಿಷೇಧ ವಾಪಸ್ ಪಡೆಯಿರಿ ; ಆಂಧ್ರ ಸಿಎಂ ನಾಯ್ಡುಗೆ ಸಿದ್ದರಾಮಯ್ಯ ಪತ್ರ

- Advertisement -

Political News: ಆಂಧ್ರಪ್ರದೇಶದ ಚಿತ್ತೂರು ಜಿಲ್ಲಾಡಳಿತವು ಕರ್ನಾಟಕ ರಾಜ್ಯದ ಮಾವು ಸಾಗಾಣಿಕೆಗೆ ನಿರ್ಬಂಧ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಪತ್ರ ಬರೆದು ನಾಯ್ಡು ಅವರಿಗೆ ಸಿದ್ದರಾಮಯ್ಯ ಮನವಿ..

ಕರ್ನಾಟಕದ ಮಾವಿಗೆ ಆಂಧ್ರಪ್ರದೇಶ ನಿಷೇಧ ಹೇರಿದ್ದರಿಂದ ರಾಜ್ಯದ ತೋತಾಪುರಿ ಮಾವಿನ ಬೆಲೆ ಕುಸಿದಿತ್ತು. ಇದರಿಂದ ಮಾವು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಇದಾದ ಬಳಿಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಆಂಧ್ರಪ್ರದೇಶದ ಸರ್ಕಾರಕ್ಕೆ ನಿಷೇಧ ಹಿಂಪಡೆಯುವಂತೆ ಪತ್ರ ಬರೆದಿದ್ದರು. ಆದರೆ ಇದೀಗ ಈ ವಿಚಾರವನ್ನು ಗಂಭೀರವಾಗಿ ಪಡೆದ ಸಿಎಂ ಖುದ್ದು ಮುತುವರ್ಜಿ ವಹಿಸಿ ಪತ್ರ ಬರೆದು ರೈತರ ಸಂಕಷ್ಟಕ್ಕೆ ಮಿಡಿದಿದ್ದಾರೆ.

ಕಳೆದ ಜೂನ್ 7 ರಂದು ನಿರ್ಬಂಧ ಹೇರಿದ್ದ ಚಿತ್ತೂರು ಜಿಲ್ಲಾಡಳಿತ..

ಇನ್ನೂ ಪ್ರಮುಖವಾಗಿ ಚಿತ್ತೂರು ಜಿಲ್ಲಾಡಳಿತವು ರಾಜ್ಯದ ತೋತಾಪುರಿ ಮಾವು ಖರೀದಿ ಮೇಲೆ ಹೇರಿರುವ ನಿಷೇಧವನ್ನು ಹಿಂಪಡೆಯುವಂತೆ ಸೂಚನೆ ನೀಡಬೇಕೆಂದು ಎಂದು ಸಿಎಂ ನಾಯ್ಡು ಅವರಿಗೆ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.

ಅಲ್ಲದೆ ಇತರ ರಾಜ್ಯಗಳಿಂದ ತೋತಾಪುರಿ ಮಾವಿನ ಹಣ್ಣುಗಳನ್ನು ಜಿಲ್ಲೆಗೆ ಪ್ರವೇಶಿಸುವುದನ್ನು ನಿಷೇಧಿಸಿ ಚಿತ್ತೂರು ಜಿಲ್ಲಾಧಿಕಾರಿಗಳು ಜೂನ್ 07 ರಂದು ಆದೇಶ ಹೊರಡಿಸಿರುವುದು ತಿಳಿದುಬಂದಿದೆ. ಈ ದಿಢೀರ್ ಮತ್ತು ಏಕಮುಖವಾದ ನಿರ್ಧಾರವು ಕರ್ನಾಟಕದ ಮಾವು ಬೆಳೆಗಾರರಿಗೆ, ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಗಣನೀಯ ಪ್ರಮಾಣದಲ್ಲಿ ತೋತಾಪುರಿ ಮಾವನ್ನು ಬೆಳೆಯುವವರಿಗೆ ಅಧಿಕ ತೊಂದರೆಯನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.

ರೈತರ ಜೀವನೋಪಾಯದ ಮೇಲೆ ನೇರ ಪರಿಣಾಮ..

ನಮ್ಮ ಈ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಚಿತ್ತೂರು ಮೂಲದ ಸಂಸ್ಕರಣಾ ಘಟಕಗಳೊಂದಿಗೆ ದೀರ್ಘಕಾಲದಿಂದ ಸಂಪರ್ಕದಲ್ಲಿದ್ದಾರೆ. ಸದ್ಯ ಈ ನಿರ್ಬಂಧವು ಈ ಚಾಲ್ತಿಯಲ್ಲಿದ್ದ ಪೂರೈಕೆ ಸರಪಳಿಗೆ ಅಡ್ಡಿಪಡಿಸಿದೆ ಹಾಗೂ ಕೊಯ್ಲಿನ ಬಳಿಕ ಸಾಕಷ್ಟು ನಷ್ಟವನ್ನುಂಟುಮಾಡಿದೆ, ಇದು ಸಾವಿರಾರು ರೈತರ ಜೀವನೋಪಾಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನಿಮ್ಮ ಈ ನಿರ್ಧಾರ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ..

ಮುಖ್ಯವಾಗಿ ಪೂರ್ವ ಮಾತುಕತೆ ಅಥವಾ ಸಮನ್ವಯವಿಲ್ಲದೆ ತೆಗೆದುಕೊಳ್ಳುವ ಈ ರೀತಿಯ ನಿರ್ಧಾರಗಳು ಸಹಕಾರಿ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿವೆ. ಇದು ಉದ್ವಿಗ್ನತೆ ಮತ್ತು ಪ್ರತೀಕಾರದ ಕ್ರಮಗಳಿಗೆ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸುತ್ತೇನೆ. ಪಾಲುದಾರರು ಈಗಾಗಲೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ, ಇದು ತರಕಾರಿಗಳು ಮತ್ತು ಇತರ ಕೃಷಿ ಸರಕುಗಳ ಅಂತರ-ರಾಜ್ಯ ಸಾಗಣೆಯನ್ನು ಅಡ್ಡಿಪಡಿಸಬಹುದು ಎಂದು ಅವರು ಆತಂಕ ಹೊರ ಹಾಕಿದ್ದಾರೆ.

ಜಿಲ್ಲಾಡಳಿತದ ಆದೇಶವನ್ನು ತಕ್ಷಣವೇ ರದ್ದುಗೊಳಿಸಲು ನಿರ್ದೇಶಿಸಿ..

ಈ ವಿಷಯದಲ್ಲಿ ನೀವು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸುತ್ತೇನೆ ಮತ್ತು ಚಿತ್ತೂರು ಜಿಲ್ಲಾಡಳಿತದ ಆದೇಶವನ್ನು ತಕ್ಷಣವೇ ರದ್ದುಗೊಳಿಸಲು ಜಿಲ್ಲೆಯ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಬೇಕೆಂದು ವಿನಂತಿಸುತ್ತೇನೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ರೈತರ ಸಂಕಷ್ಟವನ್ನು ಬಿಚ್ಚಿಡುವ ಮೂಲಕ ಅನ್ನದಾತನ ನೈಜ ಪರಿಸ್ಥಿತಿಯನ್ನು ಅನಾವರಣ ಮಾಡಿದ್ದಾರೆ.

ಅಲ್ಲದೆ ನೀವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ರೈತರ ಕಲ್ಯಾಣದ ಹಿತದೃಷ್ಟಿಯಿಂದ ಕೃಷಿ ಉತ್ಪನ್ನಗಳ ಸರಾಗ ಸಾಗಣೆಯನ್ನು ಯಥಾ ಪ್ರಕಾರ ಮುಂದುವರೆಯಲು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಒತ್ತಾಯಿಸಿದ್ದಾರೆ.

- Advertisement -

Latest Posts

Don't Miss