ಎಸ್ಟಿ ಸಮುದಾಯದ ಪ್ರಭಾವಿ ನಾಯಕರ ರಾಜಕೀಯ ಭವಿಷ್ಯವನ್ನು ರಾಜ್ಯ ಕಾಂಗ್ರೆಸ್ ಕೊನೆಗಾಣಿಸುತ್ತಿದೆ ಎಂದು ಜೆಡಿಎಸ್ ಮುಖಂಡ ಕೆ.ಎಂ.ಕೃಷ್ಣನಾಯಕ ಆರೋಪಿಸಿದ್ದಾರೆ. ಮೈಸೂರಲ್ಲಿ ನಡೆದ ನಾಯಕ ಸಮುದಾಯದ ಸಭೆಯಲ್ಲಿ ಅವರು ಮಾತನಾಡಿದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ಮಾಡಲಾಯಿತು. ಅಲ್ಲದೇ ವಾಲ್ಮೀಕಿ ಹಗರಣದ ಕೋಟ್ಯಂತರ ಹಗರಣದ ಮೂಲಕ ಬಿ.ನಾಗೇಂದ್ರ ಅವರನ್ನು ಜೈಲು ಸೇರುವಂತೆ ಮಾಡಿದ್ದಾರೆ. ಪ್ರಸ್ತುತ ಸಹಕಾರ ಸಚಿವ ರಾಜಣ್ಣ ಅವರ ರಾಜಕೀಯವನ್ನು ಕೊನೆಗಾಣಿಸಲು ಸಂಚು ರೂಪಿಸಲಾಗಿದೆ ಎಂದು ದೂರಿದರು.
ವಾಲ್ಮೀಕಿ ಭವನ ನಿರ್ಮಾಣದ ಕಾಮಗಾರಿ ಕಳೆದ ಹದಿನೈದು ವರ್ಷಗಳಿಂದಲೂ ಕುಂಟುತ್ತಾ ಸಾಗುತ್ತಿದೆ. ಸಿಎಂ ಸೇರಿದಂತೆ ಕೆಲವು ಸಚಿವರು ಜಿಲ್ಲೆಯವರೇ ಆಗಿದ್ದರೂ ಹೆಚ್ಚಿನ ಅನುದಾನ ತಂದು ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿಲ್ಲ ಪ್ರತಿ ಚುನಾವಣೆ ಸಂದರ್ಭದಲ್ಲಿ ವಾಲ್ಮೀಕಿ ಭವನ ತೋರಿಸಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇನ್ನು ಜನರು ಕಳೆದ 15 ವರ್ಷಗಳಿಂದ ಒಂದೇ ಕುಟುಂಬದವರಿಗೆ ಅಧಿಕಾರ ನೀಡಿದ್ದಾರೆ. ಮೀಸಲಾತಿಯ ನೆರಳಿನಲ್ಲಿ ಜನಾಂಗದವರಿಂದ ಮತ ಪಡೆದು, ವಾಲ್ಮೀಕಿ ಸಮುದಾಯದ ಜನರ ಅಭಿವೃದ್ಧಿ ಕಡೆಗಾಣಿಸಿದ್ದಾರೆ ಎಂದರು.
ಶಾಸಕ ಅನಿಲ್ ಚಿಕ್ಕಮಾದುಗೆ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ನ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಿದ್ದರೂ, ತಾಲ್ಲೂಕಿನ ಯುವಕರಿಗೆ ಉದ್ಯೋಗ ನೀಡುವ ಬದಲು ಪ್ರತಿ ವರ್ಷ ಐದಾರು ರೆಸಾರ್ಟ್ ಅಕ್ರಮ ನಿರ್ಮಾಣಕ್ಕೆ ಬೆಂಬಲ ನೀಡುತ್ತಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಸಹಕಾರ ಸಂಘಗಳ ಮತದಾನದ ಹಕ್ಕು ಕಸಿದಿದ್ದಾರೆ. ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಲಕ್ಷ್ಮೀಪ್ರಸಾದ್ ಸಮಬಲ ಸಾಧಿಸಿದ್ದಾರೆ. ಕ್ಷೇತ್ರದಲ್ಲಿ ಶಾಸಕರ ವಿರೋಧಿ ಅಲೆ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದೆ ಬರುತ್ತದೆ ಎಂದಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ