ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ದಿನೇ ದಿನೇ ಕಾಮುಕರ ಅಟ್ಟಹಾಸ ಹೆಚ್ಚಾಗುತ್ತಲೇ ಇದೆ. ನಡುರಸ್ತೆಯಲ್ಲೇ ಹುಡುಗಿಯನ್ನು ಎಳೆದಾಡುವುದು. ಹುಡುಗಿಯರು ನಡೆದುಕೊಂಡು ಹೋಗುವಾಗ ಕಾಮುಕರು ಬೈಕ್ನಲ್ಲಿ ಬಂದು ಅವರ ಮೈಮುಟ್ಟಿ ಅಲ್ಲಿಂದ ಎಸ್ಕೇಪ್ ಆಗುವುದು. ಅಡ್ಡಗಟ್ಟಿ ಲೈಗಿಂಕ ಕಿರುಕುಳ ನೀಡುವುದು, ಬಟ್ಟೆ ಎಳೆದಾಡುವುದು. ಹೀಗೇ ಪ್ರತಿದಿನ ಒಂದಲ್ಲ ಒಂದು ಕಿರುಕುಳ ಮಹಿಳೆಯರ ಮೇಲೆ ಆಗುತ್ತಿದೆ. ಆದರೂ ಯಾವುದೇ ಕಠಿಣ ಕ್ರಮಗಳು ಆಗುತ್ತಿಲ್ಲ. ಈಗ ಇದೇ ರೀತಿ ಬೆಂಗಳೂರನಲ್ಲಿ ಮಹಿಳೆ ನಡೆದುಕೊಂಡು ಹೋಗಬೇಕಾದರೆ ಕಾಮುಕನೋರ್ವ ಸಾರ್ವಜನಿಕ ಸ್ಥಳದಲ್ಲಿ ಬಲವಂತವಾಗಿ ತಬ್ಬಿ ಯುವತಿಯ ತುಟಿ ಕಚ್ಚಿ ಲೈಂಗಿಕ ಹಿಂಸೆ ಕೊಟ್ಟು ಎಸ್ಕೇಪ್ ಆಗಿದ್ದ. ಇದೀಗ ಆ ಲೋಫರ್ ಕಾಮುಕನ್ನು ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಮರೂಫ್ ಶರೀಫ್ ಎಂಬುವನು ಈ ರೀತಿ ಅಸಭ್ಯ ವರ್ತನೆ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಇನ್ನು ಪೊಲೀಸರ ಪ್ರಕಾರ, ಮಹಿಳೆಯು ಪಡಿತರ ಖರೀದಿಸಲು ಹೊರಗೆ ಹೋದಾಗ ಈ ಘಟನೆ ನಡೆದಿದೆ. ಆರೋಪಿ ಮರೂಫ್ ಆಕೆಯನ್ನು ಹಿಂಬಾಲಿಸಿದ್ದು, ಅಸಭ್ಯವಾಗಿ ವರ್ತಿಸಿ, ಬಲವಂತವಾಗಿ ತಬ್ಬಿಕೊಂಡು ರಸ್ತೆಯ ಮಧ್ಯದಲ್ಲಿ ಆಕೆಯ ತುಟಿಗಳಿಗೆ ಕಚ್ಚಿದ್ದಾನೆ. ಘಟನೆಯಿಂದ ಆಘಾತಕ್ಕೊಳಗಾದ ಮಹಿಳೆ ಅವನಿಂದ ತಪ್ಪಿಸಿಕೊಂಡು ತನ್ನ ತಾಯಿಗೆ ವಿಷಯ ತಿಳಿಸಿದ್ದಾಳೆ. ನಂತರ ತಾಯಿ ಮತ್ತು ಮಗಳು ಗೋವಿಂದಪುರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ತಕ್ಷಣ ಎಚ್ಚೆತ್ತಂತ ಪೊಲೀಸರು ಕಾಮುಕ ಮರೂಫ್ನನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಸಾರ್ವಜನಿಕ ಅಸಭ್ಯತೆಯ ಆರೋಪದಡಿ ಪ್ರಕರಣ ದಾಖಲಾಗಿದೆ. ಇದೊಂದೆ ಘಟನೆ ಅಲ್ಲ ಬೆಂಗಳೂರಿನಲ್ಲಿ ಈ ಹಿಂದೆ ಇದೇ ರೀತಿ ಬಹಳಷ್ಟು ಘಟನೆಗಳು ನಡೆದಿವೆ. ಇದಕ್ಕೂ ಮುಂಚೆ, ಜೂನ್ 6 ರಂದು ಕುಕ್ ಟೌನ್ನ ಮಿಲ್ಟನ್ ಪಾರ್ಕ್ ಬಳಿ ಎರಡು ಸಾರ್ವಜನಿಕ ಕಿರುಕುಳ ಘಟನೆಗಳು ವರದಿಯಾಗಿದ್ದವು.
ಒಂದು ಘಟನೆಯಲ್ಲಿ ಕುಟುಂಬದೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬಳ ಮೇಲೆ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿದ್ದ. ಇನ್ನೊಂದು ಘಟನೆಯಲ್ಲಿ, ಉದ್ಯಾನವನದೊಳಗೆ ಬಲವಂತವಾಗಿ ಮಹಿಳೆಯನ್ನು ತಬ್ಬಿಕೊಂಡು ತುಟಿಗಳಿಗೆ ಮುತ್ತಿಟ್ಟಿದ್ದ. ಇದನ್ನ ಎದುರಿಸಿದ್ದ ಮಹಿಳೆಗೆ ಆರೋಪಿ ಯಾರಿಗೂ ಹೇಳಿದರೂ ಏನೂ ನಡೆಯೋಲ್ಲ ಎಂದು ಹೇಳಿ ಪರಾರಿಯಾಗಿದ್ದ. ಇದೇ ರೀತಿ, ಏಪ್ರಿಲ್ನಲ್ಲಿ ಬಿಟಿಎಂ ಲೇಔಟ್ನಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಘಟನೆಯೊಂದರಲ್ಲಿ, ಒಬ್ಬ ವ್ಯಕ್ತಿ ಇಬ್ಬರು ಮಹಿಳೆಯರನ್ನು ಹಿಂಬಾಲಿಸಿ, ಒಬ್ಬರನ್ನು ಮುಟ್ಟಿದ ನಂತರ ಪರಾರಿಯಾಗಿರುವ ದೃಶ್ಯ ವೈರಲ್ ಆಗಿತ್ತು.
ಈ ಎಲ್ಲ ಘಟನೆಗಳು ನಗರದಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಗಂಭೀರ ಆತಂಕವನ್ನು ಹುಟ್ಟುಹಾಕಿವೆ. ಪೊಲೀಸರು ಹೆಚ್ಚಿನ ಜಾಗೃತೆ ವಹಿಸಬೇಕಾಗಿದೆ. ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಿದೆ. ಇಲ್ಲವಾದರೆ ನಡು ರೋಡಿನಲ್ಲೇ ಅತ್ಯಾಚಾರವಾದರೂ ಆಶ್ಚರ್ಯ ಪಡುವಂತಿಲ್ಲ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ