ದಶಕಗಳ ಹೋರಾಟದ ನಂತರ ಪರಿಶಿಷ್ಟ ಜಾತಿಯೊಳಗಿನ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ ನೇತೃತ್ವದ ಏಕಸದಸ್ಯ ಆಯೋಗ ಸಲ್ಲಿಸಿದ ಜಾತಿವಾರು ವರ್ಗೀಕರಣ ವರದಿಗೆ ಸಂಪುಟ ಸಭೆ ಅನುಮೋದನೆ ನೀಡಿದೆ. ರಾಜ್ಯದ 101 ಪರಿಶಿಷ್ಟ ಜಾತಿಗಳನ್ನು ಮೂರು ವಿಭಿನ್ನ ವರ್ಗಗಳಾಗಿ (ಎಡಗೈ, ಬಲಗೈ, ಇತರರು) ವಿಭಾಗಿಸಲು ತೀರ್ಮಾನಿಸಲಾಗಿದೆ.
ಎಡಗೈ ಸಮುದಾಯದ 18 ಜಾತಿಗಳಿಗೆ 6% ಮೀಸಲಾತಿ, ಬಲಗೈ ಸಮುದಾಯದ 20 ಜಾತಿಗಳಿಗೆ 6% ಮೀಸಲಾತಿ, ಉಳಿದ 63 ಜಾತಿಗಳ ಇತರ ಗುಂಪಿಗೆ 5% ಮೀಸಲಾತಿ ನೀಡಲು ಸಚಿವ ಸಂಪುಟ ತೀರ್ಮಾನಿಸಿದೆ. ಈ ಒಳಮೀಸಲಾತಿ ಕ್ರಮವು 35 ವರ್ಷಗಳ ಹೋರಾಟದ ಫಲವಾಗಿದ್ದು, ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಿನ್ನೆಲೆಯಲ್ಲಿ ಆಧಾರಿತವಾಗಿದೆ.
ಇದರ ಜಾರಿಗೆ ಹೊರತಾದು, ಮುಖ್ಯಮಂತ್ರಿ ಸಿದ್ದರಾಮಯ್ಯ ‘ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ’ ಹೊಡೆದಿದ್ದಾರೆ ಎನ್ನಲಾಗುತ್ತಿದೆ. ಬಲಗೈ ಮತ್ತು ಎಡಗೈ ಸಮುದಾಯಗಳನ್ನು ಒಟ್ಟಿಗೆ ತಲುಪಿದ ಈ ನಿರ್ಧಾರವು ಕಾಂಗ್ರೆಸ್ ಪಕ್ಷಕ್ಕೆ ಮತಬ್ಯಾಂಕ್ ಕಟ್ಟುವ ಯತ್ನವಾಗಿದೆ ಎಂಬ ರಾಜಕೀಯ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.
ಇದುವರೆಗೆ ಎಡಗೈ ಸಮುದಾಯದ ಹೆಚ್ಚಿನವುಗಳು ಬಿಜೆಪಿ ಪರವಾಗಿದ್ದರೆ, ಈಗ ಅವರು ಕಾಂಗ್ರೆಸ್ ಕಡೆಗೆ ವಾಲುವ ಸಾಧ್ಯತೆಯಿದೆ. ಮುಂದಿನ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಈ ನಿರ್ಧಾರದಿಂದ ಕಾಂಗ್ರೆಸ್ ಲಾಭ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ಜನತೆಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಮತ್ತು ಸಾಮಾಜಿಕ ನ್ಯಾಯದ ಆಳವಾದ ಚರ್ಚೆಗೆ ನಾಂದಿ ಹಾಕುವ ನಿರೀಕ್ಷೆ ಇದೆ.
ವರದಿ : ಲಾವಣ್ಯ ಅನಿಗೋಳ