Hubli News: ಹುಬ್ಬಳ್ಳಿ: ಗಣೇಶೋತ್ಸವ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿದೆ. ಗಣೇಶೋತ್ಸವದ ಸಂಭ್ರಮ ಎಲ್ಲೆಡೆಯೂ ಮನೆ ಮಾಡಿದೆ. ನಗರದ ಬೀದಿ-ಬೀದಿಗಳಲ್ಲಿ ಹಬ್ಬದ ಕಳೆ ಮೊಳಕೆ ಒಡೆದಿದೆ.
ಹೂವುಗಳ ಗಂಧ, ಮಣ್ಣಿನ ಮೂರ್ತಿಯ ಸುಗಂಧ,ಭಕ್ತರ ಹೃದಯದಲ್ಲಿ ಭಕ್ತಿಯ ನಿನಾದ ಗಣೇಶೋತ್ಸವ ಸಂಭ್ರಮಕ್ಕೆ ಪುಷ್ಟಿ ನೀಡಿದೆ. ಹೌದು. ಗಣೇಶ ಹಬ್ಬದ ಸಿದ್ಧತೆ ನೋಡಿದರೆ, ಮಂಗಳವಾರ ಕಳೆದು ಬುಧವಾರದ ನಸುಕಿನ ವೇಳೆಗೆ ನಗರವೇ ವಿಭಿನ್ನ ಮತ್ತು ವಿಶಿಷ್ಟ ರೀತಿಯಲ್ಲಿ ಕಂಗೊಳಿಸಲಿದೆ. ಓಣಿಗಳಲ್ಲಿಯ ದೀಪಾಲಂಕಾರ, ವೈವಿಧ್ಯಮಯ ಅಲಂಕಾರದ ಹೂ-ಬಳ್ಳಿಗಳು, ಬಗೆಬಗೆಯ ಮಂಟಪಗಳು ಹನ್ನೊಂದು ದಿನ ನಡೆಯುವ ಉತ್ಸವಕ್ಕೆ ಮೆರಗು ನೀಡಲಿವೆ.
ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರ ಗಣೇಶ ಪೆಂಡಾಲ್ಗಳು ನಿರ್ಮಾಣದ ಅಂತಿಮ ಹಂತದಲ್ಲಿವೆ. ಹಬ್ಬಕ್ಕೆ ಇನ್ನೂ ಒಂದು ದಿನ ಬಾಕಿಯಿದ್ದು, ಮಾರುಕಟ್ಟೆ ಪ್ರದೇಶ ಹಾಗೂ ಪ್ರಮುಖ ರಸ್ತೆಗಳಲ್ಲಿ ಗಣೇಶ ಮೂರ್ತಿಗಳ ಮಾರಾಟ ಹಾಗೂ ಕಾಯ್ದಿರಿಸುವಿಕೆ ಜೋರಾಗಿದೆ. ಅಲ್ಲದೇ ಮಾರುಕಟ್ಟೆಯಲ್ಲಿ ಖರೀದಿ ಭರದಿಂದ ಸಾಗಿದೆ.