ನಾಡು, ನುಡಿ, ಸಂಸ್ಕೃತಿ ಮತ್ತು ಸಾಹಿತ್ಯದ ಸುಗಂಧವನ್ನು ಮರೆತು, ಕೇವಲ ದ್ವೇಷದ ವಾತಾವರಣವನ್ನು ಹರಡುತ್ತಿರುವ ಬಿಜೆಪಿ ನಾಯಕರು ಒಬ್ಬ ಮಹಿಳೆಯ ವಿಷಯವನ್ನೇ ರಾಜಕೀಯದ ಅಂಗಳಕ್ಕೆ ಎಳೆದಿರುವುದು ಲಜ್ಜಾಸ್ಪದ ಎಂದು ಸಮಾಜ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಆರೋಪಿಸಿದ್ದಾರೆ.
ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿತರಾದ ಬಾನು ಮುಸ್ತಾಕ್ ಅವರು, ಸಮಾಜದಲ್ಲಿನ ಅನ್ಯಾಯ ಮತ್ತು ಧಾರ್ಮಿಕ ಬಿಗುವುಗಳ ವಿರುದ್ಧ ಧೈರ್ಯದಿಂದ ಧ್ವನಿ ಎತ್ತಿದ ಸಾಹಿತಿ. ರೈತರ ಮತ್ತು ಮಹಿಳೆಯರ ಪರವಾಗಿ ದಶಕಗಳಿಂದ ಸಾಹಿತ್ಯ ಸೇವೆ ಸಲ್ಲಿಸಿರುವ ಅವರು ಇತ್ತೀಚೆಗೆ ಬೂಕರ್ ಪ್ರಶಸ್ತಿಯನ್ನು ಪಡೆದಿರುವುದು ಎಲ್ಲ ಕನ್ನಡಿಗರ ಹೆಮ್ಮೆ. ಇಂತಹ ಸಾಧನೆ ಮಾಡಿದವರ ಆಯ್ಕೆಯನ್ನು ಪ್ರಶ್ನಿಸುವುದು ಸೂಕ್ತವಲ್ಲ ಎಂದು ಸಚಿವರು ಹೇಳಿದ್ದಾರೆ.
ಬಿಜೆಪಿಯವರೇ ಅವಮಾನ ಮಾಡಿದ ಪರಿಣಾಮ ಟಿಕೆಟ್ ತಪ್ಪಿಸಿಕೊಂಡು ಕುಸಿದಿದ್ದ ಮಾಜಿ ಸಂಸದ ಪ್ರತಾಪ ಸಿಂಹ ಅವರು, ಬಾನು ಅವರ ಆಯ್ಕೆ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದು ನಿಜವಾಗಿ ದ್ವೇಷದ ಹಿತಾಸಕ್ತಿ ಮಾತ್ರ ಎಂದು ಸ್ಪಷ್ಟವಾಗಿದೆ. ಅವರ ಈ ಕೋಮು ರಾಜಕೀಯವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವೇ ಇಲ್ಲ ಎಂದು ಮಹಾದೇವಪ್ಪ ತಿಳಿಸಿದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ