Political News: ಮಂಡ್ಯದ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಸಮಯದಲ್ಲಿ ಗಲಭೆ ನಡೆದಿದ್ದು, ಹಿಂದೂ- ಮುಸ್ಲಿಂರ ನಡುವೆ ಗಲಾಟೆಯಾಗಿ ಕಲ್ಲು ತೂರಾಟ ನಡೆದಿದೆ. ಈ ಘಟನೆ ಸುದ್ದಿಯಾಗುತ್ತಿದ್ದಂಂತೆ, ರಾಜಕೀಯ ಸ್ವರೂಪ ಪಡೆದಿದ್ದು, ರಾಜಕಾರಣಿಗಳ ಮಧ್ಯದಲ್ಲೂ ಪರ ವಿರೋಧ ಆರೋಪ ಜೋರಾಗಿದೆ.
ಸಿ.ಟಿ.ರವಿ ಅವರು ಮುಸ್ಲಿಂರ ತಲೆ ತೆಗೆಯುವುದಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಈ ಹೇಳಿಕೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಸ್ಲಿಮರ ತಲೆ ತೆಗೆಯುವುದಾಗಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಸಿ.ಟಿ. ರವಿಯವರಿಗೆ ಸಮಾಜದಲ್ಲಿ ಬೆಂಕಿ ಹಚ್ಚುವುದೇ ಕೆಲಸ. ಸಿ.ಟಿ.ರವಿ ಇಂತಹ ಪ್ರಚೋದನಕಾರಿ ಹೇಳಿಕೆ ನೀಡಿ ಬಡವರ ಮಕ್ಕಳನ್ನು ಬಾವಿಗೆ ತಳ್ಳುತ್ತಾರೆಯೇ ಹೊರತು ಅವರು ಹಾಗೂ ಅವರ ಕುಟುಂಬದವರು ಇಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ ಎಂದು ಗುಂಡೂರಾವ್ ಹೇಳಿದ್ದಾರೆ.
ಕಂಡವರ ಮಕ್ಕಳ ಭವಿಷ್ಯ ಹಾಳು ಮಾಡುವುದೇ ಸಿ.ಟಿ.ರವಿ ಸೇರಿದಂತೆ ಬಿಜೆಪಿಯ ಅನೇಕ ನಾಯಕರ ಕೆಲಸ. ಬಿಜೆಪಿಯಲ್ಲಿ ಇಂತಹ ಕೋಮು ಕ್ರಿಮಿಗಳ ದೊಡ್ಡ ದಂಡೇ ಇದೆ. ಹೊಡಿ- ಬಡಿ, ಕೊಚ್ಚು-ಕೊಲ್ಲು, ಕೈ ಕಾಲು ತೆಗಿ- ತಲೆ ತೆಗಿ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ಕೊಡುವ ಬಿಜೆಪಿ ನಾಯಕರು ಎಂದಾದರೂ ಆ ಕೆಲಸವನ್ನು ಸ್ವತಃ ತಾವೇ ಮಾಡಿದ್ದಾರೆಯೇ ಅಥವಾ ಅವರ ಕುಟುಂಬದ ಯಾರಾದರೂ ಮಾಡಿದ್ದಾರೆಯೇ.? ಎಂದು ಗುಂಡುರಾವ್ ಪ್ರಶ್ನಿಸಿದ್ದಾರೆ.