ಮದ್ದೂರಿಗೆ ಫೈರ್ ಬ್ರ್ಯಾಂಡ್, ಹಿಂದೂ ಹುಲಿ ಯತ್ನಾಳ್ ಎಂಟ್ರಿ ಸಂಚಲನ ಮೂಡಿಸಿದೆ. ಪ್ರಚೋದನಕಾರಿ ಭಾಷಣ ಆರೋಪದಡಿ, ಈಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಗಣೇಶ ಮೆರವಣಿಗೆ ವೇಳೆ ನಡೆದಿದ್ದ ಕಲ್ಲು ತೂರಾಟದ ಬಳಿಕ, ಸೆಪ್ಟೆಂಬರ್ 11ರ ಗುರುವಾರದಂದು, ಯತ್ನಾಳ್ ಮದ್ದೂರಿಗೆ ಭೇಟಿ ನೀಡಿದ್ದರು. ಈ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು, ಸಬ್ಇನ್ಸ್ಪೆಕ್ಟರ್ ಮಂಜುನಾಥ್ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ. ಬಿಎನ್ಎಸ್ ಸೆಕ್ಷನ್ 196(1), 299, 353(2) ಅನ್ಯಕೋಮಿಗೆ ಧಕ್ಕೆ ಹಾಗೂ ಕೋಮುಗಳ ನಡುವೆ ವೈರತ್ವ ಉಂಟು ಮಾಡುವ ಭಾಷಣ ಮಾಡಿರುವ ಆರೋಪದಡಿ, ಎಫ್ಐಆರ್ ಹಾಕಲಾಗಿದೆ.
ಪಾಕಿಸ್ತಾನಕ್ಕೆ ಜೈ ಅಂದ್ರೆ ಅಲ್ಲೇ ಎನ್ಕೌಂಟರ್. ನಾನು ಅಧಿಕಾರಕ್ಕೆ ಬಂದರೆ ಗೋಹತ್ಯೆ ಮಾಡುವವರನ್ನು ಢಮಾರ್ ಮಾಡುತ್ತೇನೆ. ವಕ್ಫ್ ಅನುದಾನವನ್ನು ಗೋರಕ್ಷಕರಿಗೆ ನೀಡುತ್ತೇನೆ. ದೇವಸ್ಥಾನದ ಹುಂಡಿ ಹಣ ದೇಗುಲದ ಅಭಿವೃದ್ಧಿಗೆ ಮೀಸಲಿರಬೇಕು. ಭಾರತದಲ್ಲಿರುವ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು. ಪಾಕಿಸ್ತಾನದಲ್ಲಿರುವ ಹಿಂದೂಗಳನ್ನು ಭಾರತಕ್ಕೆ ಕರೆತಬೇಕು. ಹೀಗೆ.. ಯತ್ನಾಳ್ ಆಡಿದ ಒಂದೊಂದು ಮಾತು ಬೆಂಕಿಯುಂಡೆಯಂತಿದ್ವು.
ಇದಕ್ಕೂ ಮುನ್ನ, ಬಿಜೆಪಿ ಎಂಎಲ್ಸಿ ಸಿ.ಟಿ. ರವಿ ವಿರುದ್ಧವೂ, ಮದ್ದೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಸೆಪ್ಟೆಂಬರ್ 10ರಂದು ಪಟ್ಟಣದಲ್ಲಿ ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಯ್ತು. ಈ ವೇಳೆ ಸಿ.ಟಿ. ರವಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ, ಮದ್ದೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿತ್ತು. ನೀವು ಹೊರಗಡೆಯಿಂದ ಬಂದವರು. ನಾವು ಇಲ್ಲೇ ಇರುವವರು. ತೊಡೆ ತಟ್ಟುವ ಕೆಲಸ ಮಾಡಬೇಡಿ. ತೊಡೆ ತಟ್ಟಿ ಸವಾಲು ಹಾಕಿದ್ರೆ, ತೊಡೆ ಮುರಿಯುತ್ತೇವೆ. ತಲೆಯನ್ನೂ ತೆಗೆಯುತ್ತೇವೆ. ನಮ್ಮಲ್ಲೂ ಉರಿಗೌಡ, ನಂಜೇಗೌಡರು ಇದ್ದಾರೆ ಅಂತಾ, ಸಿ.ಟಿ. ರವಿ ಹೇಳಿದ್ದಾರೆ ಎನ್ನಲಾಗಿದೆ. ಸಿ.ಟಿ. ರವಿ ವಿರುದ್ಧ ದೂರು ಕೊಟ್ಟಿದ್ದು ಇದೇ ಪಿಎಸ್ಐ ಮಂಜುನಾಥ್. ಮದ್ದೂರಿನಲ್ಲಿ ಹಿಂದುತ್ವದ ಜಪ ಜೋರಾಗಿದ್ದು, ದಿನಕ್ಕೊಬ್ಬ ನಾಯಕರ ಮೇಲೆ ಎಫ್ಐಆರ್ ದಾಖಲಾಗ್ತಿದೆ. ಸಾಲು, ಸಾಲು ಎಫ್ಐಆರ್ಗಳು ಈಗ ಮತ್ತೊಂದು ರಾಜಕೀಯಕ್ಕೆ ಕಾರಣವಾಗುತ್ತಿದೆ.




