ಮನೆ, ಮನೆಗೂ ತೆರಳಿ ಜಾತಿಗಣತಿ ನಡೆಸುವ ಸರ್ಕಾರದ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮೇಲೆ ಹಲವು ಸಚಿವರು ಸಿಡಿಮಿಡಿಯಾಗಿದ್ದಾರೆ. ಜಾತಿ ಕಿಚ್ಚು, ಸರ್ಕಾರದ ಗೊಂದಲ ನಿವಾರಣೆಗಾಗಿ ದೆಹಲಿಯಿಂದ ಕಾಂಗ್ರೆಸ್ ಹೈಕಮಾಂಡ್ ನಾಯಕರೇ ಎಂಟ್ರಿ ಕೊಡಬೇಕಾಗಿ ಬಂದಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ದಿಢೀರ್ ಬೆಂಗಳೂರಿಗೆ ಬಂದಿದ್ದಾರೆ. ನಿನ್ನೆ ಕ್ಯಾಬಿನೆಟ್ ಮೀಟಿಂಗ್ ಮುಗಿದ ಬಳಿಕ ಜಾತಿಗಣತಿ ವಿಚಾರವಾಗಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಇಂದು ಬೆಳಗ್ಗೆಯೇ ಮೀಟಿಂಗ್ ಮಾಡಿದ್ರು. ಇದಾದ ಬಳಿಕ ಇಬ್ಬರೂ ಒಟ್ಟಾಗಿ, ರಾಜ್ಯ ಉಸ್ತುವಾರಿ ಸುರ್ಜೇವಾಲರನ್ನ ಭೇಟಿಯಾಗಿದ್ದಾರೆ.
ಸಿಎಂ, ಡಿಸಿಎಂ ಸಡನ್ ಆಗಿ ಒಂದೇ ಕಾರಲ್ಲಿ ಹೋಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಜಾತಿಗಣತಿ ವಿಚಾರ ಭಾರೀ ಸದ್ದು ಮಾಡ್ತಿದೆ. ಹಿಂದೂ ಹೆಸರಿನ ಜೊತೆ ಬೇರೆ ಧರ್ಮದ ಹೆಸರು ಸೇರ್ಪಡೆ, ಉಪಜಾತಿಗಳ ಸೇರ್ಪಡೆ ವಿರುದ್ಧ ಆಕ್ರೋಶ ವ್ಯಕ್ತವಾಗ್ತಿತ್ತು. ಇದೀಗ ಸಚಿವ ಸಂಪುಟ ಮಟ್ಟದಲ್ಲೇ ವಿರೋಧ ಎದ್ದಿದ್ದು, ಗೊಂದಲಗಳ ನಿವಾರಣೆಗೆ, ಹೈಕಮಾಂಡ್ ಮಟ್ಟದ ನಾಯಕರೇ ಬಂದಿದ್ದಾರೆ.
ಸೆಪ್ಟೆಂಬರ್ 18ರ ರಾತ್ರಿಯಿಂದಲೂ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ, ನಿರಂತರ ಸಭೆ ಮಾಡಲಾಗ್ತಿದೆ. ಡಿಕೆಶಿ ಸೇರಿದಂತೆ ಸಚಿವರು ಕೆಂಡಾಮಡಲರಾಗಿದ್ರು. ಸಚಿವರ ಸಿಟ್ಟು ಕಂಡು ಸ್ವತಃ ಸಿದ್ದು ಶಾಕ್ ಆಗಿದ್ರು. ಹೀಗಾಗಿ ಬೆಳಗ್ಗೆಯೇ ಮತ್ತೊಂದು ಹೈವೋಲ್ಟೇಜ್ ಮೀಟಿಂಗ್ ಮಾಡಿದ್ದಾರೆ. ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮಹತ್ವದ ಚರ್ಚೆ ನಡೆಸಲಾಗಿದೆ. ಡಿಸಿಎಂ ಡಿಕೆಶಿ, ಹೆಚ್.ಕೆ. ಪಾಟೀಲ್, ಸಂತೋಷ್ ಲಾಡ್, ಭೈರತಿ ಸುರೇಶ್, ಶಿವರಾಜ್ ತಂಗಡಗಿ ಮತ್ತು ಹಿಂದುಳಿದ ವರ್ಗಗಳ ಆಯೋಗದ ಅಧಿಕಾರಿಗಳು ಭಾಗಿಯಾಗಿದ್ರು. ಸಭೆಯಲ್ಲಿ ಹೆಚ್ಚುವರಿ ಜಾತಿ ತೆಗೆದು ಸಮೀಕ್ಷೆ ಮುಂದುವರಿಕೆ ಬಗ್ಗೆ ಚರ್ಚೆಯಾಗಿದೆ.
ಸಭೆಯಲ್ಲಿ ಚರ್ಚೆ ಬಳಿಕ ಕೆಲವು ಸಚಿವರು, ಜಾತಿಗಣತಿಗೆ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ನಿಗದಿಯಂತೆ ಸೆಪ್ಟೆಂಬರ್ 22ರಿಂದ ಜಾತಿಗಣತಿಗೆ, ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ. ಇರುವ ಗೊಂದಲಗಳನ್ನು ನಿವಾರಣೆ ಮಾಡಿ ಗಣತಿ ಪ್ರಾರಂಭಿಸಿ ಅಂತಾ ಆದೇಶಿಸಿದ್ದಾರೆ.
ಯಾವುದೇ ಹೊಸ ಜಾತಿ ಸೇರಿಸುವಾಗ ಅಧ್ಯಯನ ಮಾಡ್ಬೇಕು. ಸರ್ಕಾರ ಮಾನ್ಯತೆ ಕೊಟ್ಟರೆ ಮಾತ್ರ, ಜಾತಿ ಪಟಿಯಲ್ಲಿ ಹೊಸ ಜಾತಿ ಸೇರಿಸಲು ಸಾಧ್ಯವಾಗುತ್ತದೆ. ಆದ್ರೆ, ಏಕಾಏಕಿ ಪಟ್ಟಿಯಲ್ಲಿ ಹೊಸ ಜಾತಿ ಸೇರಿಸಿದ್ದಾರೆ. ಮನವಿಯನ್ನಷ್ಟೇ ಪರಿಗಣಿಸಿ ಎಲ್ಲವನ್ನೂ ಸೇರಿಸಿದ್ದಾರೆ. ಇದು ಜಾತಿಗಣತಿ ವಿರೋಧಕ್ಕೆ ಬಹುಮುಖ್ಯ ಕಾರಣ ಎನ್ನಲಾಗ್ತಿದೆ. ಈ ಎಲ್ಲಾ ವಿರೋಧಗಳಿಗೆ ಮಣಿಯದ ಸಿಎಂ ಸಿದ್ದರಾಮಯ್ಯ ಅವರು ನಿಗಧಿಯಂತೆ ಜಾತಿಗಣತಿ ನಡೆಸೋ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.