2019ರಿಂದ 2023ರವರೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ತನಿಖೆಗೆ, ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು. ಇದೀಗ ಈ ಆಯೋಗದ ಅವಧಿ ಮುಗಿಯುವುದಕ್ಕೂ ಮುನ್ನವೇ ವಿಸರ್ಜನೆ ಮಾಡಲಾಗಿದೆ. ಸೆಪ್ಟೆಂಬರ್ 30ರವರೆಗೆ ಅಧಿಕಾರ ಅವಧಿ ವಿಸ್ತರಿಸುವಂತೆ ಆಯೋಗ ಮನವಿ ಮಾಡಿತ್ತು. ಈ ಮನವಿಯನ್ನು ಸರ್ಕಾರ ಪರಿಗಣಿಸಿಲ್ಲ ಎನ್ನಲಾಗಿದೆ.
ಬಿಜೆಪಿ ಸರ್ಕಾರದ ಅವಧಿಯ 40% ಕಮಿಷನ್ ಆರೋಪ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪದ ತನಿಖಾ ಜವಾಬ್ದಾರಿಯನ್ನು ಆಯೋಗಕ್ಕೆ ವಹಿಸಲಾಗಿತ್ತು. ಆಯೋಗಕ್ಕೆ ನೀಡಲಾಗಿದ್ದ ವಾಹನ ಹಾಗೂ ಸಿಬ್ಬಂದಿಯನ್ನು ಸರ್ಕಾರ, ಸೆಪ್ಟೆಂಬರ್ 23ರ ಮಂಗಳವಾರ ಸಂಜೆಯಿಂದಲೇ ವಾಪಸ್ ಪಡೆಯಲಾಗಿದೆ.
ಅಧ್ಯಕ್ಷರ ಸೂಚನೆ ಮೇರೆಗೆ ಆಯೋಗದ ಕಾರ್ಯಚಟುವಟಿಕೆ ಅಧಿಕೃತವಾಗಿ ಮುಕ್ತಾಯಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಕ್ರಮದ ಬಗ್ಗೆ ತನಿಖೆ ನಡೆಸಿದ್ದ ಆಯೋಗ, ಆಗಸ್ಟ್ 30ರಂದು, ಸರ್ಕಾರಕ್ಕೆ 8,900 ಪುಟಗಳ ಬೃಹತ್ ತನಿಖಾ ವರದಿಯನ್ನು ಸಲ್ಲಿಸಿತ್ತು. 761 ಕಾಮಗಾರಿಗಳನ್ನು ಪರಿಶೀಲಿಸಿ ಹಲವು ನ್ಯೂನತೆಗಳನ್ನು ಪತ್ತೆಹಚ್ಚಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡಿತ್ತು. ಏಕ ಸದಸ್ಯ ಆಯೋಗದ ಕೆಲಸ ಮುಗಿದಿದ್ದರೂ, ಕೆಲವು ಆಡಳಿತಾತ್ಮಕ ಕಾರ್ಯ ಹಾಗೂ ದಾಖಲೆ ನಿರ್ವಾಹಣೆಗಾಗಿ ಅವಧಿ ವಿಸ್ತರಿಸುವಂತೆ ಮನವಿ ಮಾಡಲಾಗಿತ್ತು. ಆದರೆ, ರಾಜ್ಯ ಸರ್ಕಾರ ಆಯೋಗಕ್ಕೆ ನೀಡಿದ್ದ ಎಲ್ಲಾ ಸವಲತ್ತುಗಳನ್ನು, ಏಕಾಏಕಿ ವಾಪಸ್ ಪಡೆದಿದೆ.
ಸರ್ಕಾರದ ನಡೆಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ಇದು ಹತ್ತಿದ ಏಣಿ ಒದ್ದಂತೆ. ಕೆಲಸ ಆದ ಮೇಲೆ ಬೆಲೆ ಇಲ್ಲ ಎನ್ನುವ ಧೋರಣೆ ಎಂದು ಕಿಡಿಕಾರಿದ್ದಾರೆ. ಸರ್ಕಾರಕ್ಕೆ ನಾಗಮೋಹನದಾಸ್ ಆಯೋಗಕ್ಕೆ, ಕನಿಷ್ಠ ಸವಲತ್ತು ಕೊಡುವ ಯೋಗ್ಯತೆಯೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.