ಕೊಪ್ಪಳಕ್ಕೆ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಸ್ವಪಕ್ಷದವರ ವಿರುದ್ಧವೇ ಕಿಡಿಕಾರಿರುವ ಆಡಿಯೋ ವೈರಲ್ ಆಗಿದೆ.ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ್, ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದಲ್ಲಿ ನಡೆಯುತ್ತಿರುವ ಸಿಎಂ ಕಾರ್ಯಕ್ರಮಕ್ಕೆ, ಗಂಗಾವತಿಯಿಂದ 200ಕ್ಕೂ ಅಧಿಕ ಬಸ್ ಬಿಡಲಾಗಿದೆ. ನನ್ನ ಗುಂಪಿನ ನಾಯಕರು ಬಸ್ನಲ್ಲಿ ಜನರನ್ನು ಕಳುಹಿಸುತ್ತಿದಾರೆ. ಆದರೆ, ಕಾಂಗ್ರೆಸ್ ಪಕ್ಷದಿಂದ ಗೆದ್ದವರು, ಅನ್ಸಾರಿ ಜನರನ್ನು ಕಳಿಸಿಲ್ಲ ಎಂದು ಸಿಎಂಗೆ ಹೇಳುತ್ತಾರೆ. ಸಂಸದ ರಾಜಶೇಖರ ಹಿಟ್ನಾಳ, ಗಂಗಾವತಿಯಿಂದ ಜನರನ್ನು ಸೇರಿಸಿದ್ದಾನೆಂದು ರೀಲ್ಸ್ ಹಾಕುತ್ತಾರೆ. ಕೊಪ್ಪಳ ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ ಇದೇ ರೀತಿ ರೀಲ್ಸ್ ಹಾಕುತ್ತಿದ್ದಾರೆ. ಇವರು ಗೆದ್ದ ಬಳಿಕ ಜನರಿಗೆ ಮೋಸ ಮಾಡುತ್ತಿದಾರೆಂದು ಏಕ ವಚನದಲ್ಲೇ ಮಾತನಾಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ನನಗೆ ರಾಜಶೇಖರ ಹಿಟ್ನಾಳ್ ಪರ, ಚುನಾವಣೆ ಮಾಡಲು ಇಷ್ಟ ಇರಲಿಲ್ಲ. ಆದರೆ, ಸಿಎಂ ಮುಖ ನೋಡಿ ಲೋಕಸಭೆ ಚುನಾವಣೆಯಲ್ಲಿ, ಹಿಟ್ನಾಳ್ ಗೆಲ್ಲಲು ಕೆಲಸ ಮಾಡಿದ್ದೇನೆ. ಗಂಗಾವತಿಯಲ್ಲಿ ನಾನು ಶಾಸಕನಲ್ಲದಿದ್ದರೂ 16 ಸಾವಿರ ಲೀಡ್ ಕೊಟ್ಟಿದ್ದೇವೆ. ಗೆದ್ದ ಬಳಿಕ ಆ ವ್ಯಕ್ತಿ, ಆರ್ಥಿಕ ಸಲಹೆಗಾರ ಪ್ಲ್ಯಾನ್ ಮಾಡಿ, ಸಿಎಂ ಬಳಿ ಎಲ್ಲರೂ ಚುನಾವಣೆ ಮಾಡಿದ್ದಕ್ಕೆ ಗೆದ್ದಿದ್ದೇವೆ ಎಂದಿದ್ದಾರೆ. ಮತ್ತೇಕೆ ಅಂದು ನಂಗೆ ಚುನಾವಣೆ ಮಾಡೋಕೆ ಹೇಳಿದರು? ಎಂದು ಗರಂ ಆಗಿದ್ದಾರೆ.
ಹಿಟ್ನಾಳ್ ಕುಟುಂಬ ಕ್ಯಾಸೆಟ್ ಹಾಕುತ್ತಾರೆ. ಶಿವರಾಜ್ ತಂಗಡಗಿ, ಬಸವರಾಜ ರಾಯರೆಡ್ಡಿ ನನ್ನ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ.
ನಾನು ಮುಸ್ಲಿಂ ಇರುವ ಕಾರಣಕ್ಕೆ ನನ್ನ ಸೋಲಿಸಲು, ರೆಡ್ಡಿ ಗೆಲ್ಲಲು ಇವರೆಲ್ಲ ಸಹಾಯ ಮಾಡಿದ್ದಾರೆ. ಇಡೀ ಕರ್ನಾಟಕದ ಮುಸ್ಲಿಂ ಬಾಂಧವರಿಗೆ ನಾನು ಇದನ್ನು ತಿಳಿಸುತ್ತೇನೆ ಎಂದು ಅನ್ಸಾರಿ ಹೇಳಿರುವ ಆಡಿಯೋ ವೈರಲ್ ಆಗಿದೆ.