ದೊಡ್ಡಕೆರೆ ಮೈದಾನದ ಬಳಿ ನಡೆದ ವೆಂಕಟೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ಐವರು ಮಂಗಳವಾರ ತಡರಾತ್ರಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಮನೋಜ್ ಅಲಿಯಾಸ್ ಬಿಗ್ ಶೋ, ಮಲ್ಲಿಕಾರ್ಜುನ ಅಲಿಯಾಸ್ ಹಾಲಪ್ಪ ಸೇರಿದಂತೆ ಐವರು ಶರಣಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈಚೆಗೆ ನಡೆದ ಕಾರ್ತಿಕ್ ಹತ್ಯೆ ಪ್ರಕರಣದ ನಂತರ ಉಂಟಾದ ಘಟನೆಗಳ ಸರಪಳಿಯೇ ವೆಂಕಟೇಶ್ ಹತ್ಯೆಗೆ ಕಾರಣವಾಗಿದೆ ಎಂದು ಮೂಲಗಳು ಹೇಳುತ್ತಿವೆ.
ಮಂಗಳವಾರ ಬೆಳಿಗ್ಗೆ ವೆಂಕಟೇಶ್ ಕಾರಿನಲ್ಲಿ ತೆರಳುತ್ತಿದ್ದ ವೇಳೆ, ದೊಡ್ಡಕೆರೆ ಮೈದಾನದ ಬಳಿ ಆರೋಪಿಗಳು ಆಟೊದಲ್ಲಿ ಅಡ್ಡಗಟ್ಟಿ, ಕಣ್ಣಿಗೆ ಕಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಬರ್ಬರವಾಗಿ ದಾಳಿ ನಡೆಸಿ ಕೊಲೆ ಮಾಡಿದ್ದರು.
ಘಟನೆಯ ನಂತರ ಸ್ಥಳಕ್ಕೆ ನಗರದ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳು ಬಿಂದುರಾಣಿ ಹಾಗೂ ಕೆ.ಎಸ್. ಸುಂದರ್ ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಪೊಲೀಸರ ಒತ್ತಡದ ಹಿನ್ನೆಲೆಯಲ್ಲಿ ಆರೋಪಿ ತಂಡ ತಡರಾತ್ರಿ ಶರಣಾಗಿರುವುದು ಪ್ರಕರಣದಲ್ಲಿ ತಿರುವು ತರಿಸಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ