ಮಧ್ಯಪ್ರದೇಶದಲ್ಲಿ 20 ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಸಿರಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಮಾಲೀಕ ಎಸ್. ರಂಗನಾಥನ್ ಅವರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಕಂಪನಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಇಂದು ಬೆಳಿಗ್ಗೆ ಚೆನ್ನೈನಲ್ಲಿ ರಂಗನಾಥನ್ ಅವರನ್ನು ಮಧ್ಯಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯದಲ್ಲಿ ವಿಷಕಾರಿ ಸಿರಪ್ ಸೇವನೆದಿಂದ ಕನಿಷ್ಠ 20 ಮಕ್ಕಳು ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಹುಡುಕಾಟ ನಡೆಸುತ್ತಿದ್ದರು. ಮಾಹಿತಿ ನೀಡಿದವರಿಗೆ ₹20,000 ಬಹುಮಾನವನ್ನೂ ಘೋಷಿಸಲಾಗಿತ್ತು.
ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಕೋಲ್ಡ್ರಿಫ್ ಸಿರಪ್ ಸೇವಿಸಿದ ನಂತರ ಮಕ್ಕಳು ಮೂತ್ರಪಿಂಡದ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದರು. ಕೋಲ್ಡ್ರಿಫ್ ಸಿರಪ್ ಶೀತ, ಕೆಮ್ಮು, ಮೂಗು ಕಾರುವುದು, ಗಂಟಲು ನೋವು ಹಾಗೂ ಕಣ್ಣೀರು ಬರುವಂತಹ ಲಕ್ಷಣಗಳಿಗೆ ಮಕ್ಕಳಿಗೆ ನೀಡುವ ಔಷಧವಾಗಿತ್ತು.
ಈ ತಿಂಗಳ ಆರಂಭದಲ್ಲಿ ತಮಿಳುನಾಡು ಆರೋಗ್ಯ ಇಲಾಖೆ ಸಿರಪ್ ಮಾದರಿಗಳನ್ನು ಪರೀಕ್ಷಿಸಿದಾಗ, ಅದರೊಳಗೆ ವಿಷಕಾರಿ ಡೈಥಿಲೀನ್ ಗ್ಲೈಕೋಲ್ ಪದಾರ್ಥ ಪತ್ತೆಯಾಯಿತು. ಬಳಿಕ, ಆ ಸಿರಪ್ ಗಳನ್ನು ತಕ್ಷಣವೇ ಕಲಬೆರಕೆ ಉತ್ಪನ್ನವೆಂದು ಘೋಷಿಸಲಾಯಿತು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ