ಕಲಬುರಗಿ ಜಿಲ್ಲೆಯ ಚಿತ್ತಾಪುರ ಬಳಿಕ, ಈಗ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸರದಿ. ಆರ್ಎಸ್ಎಸ್ ಪಥಸಂಚಲನ ನಡೆಯಲಿದ್ದು, ಕೆಂಭಾವಿ ಪಟ್ಟಣ ಸಂಪೂರ್ಣ ಕೇಸರಿಮಯವಾಗಿದೆ. RSS ಪಥ ಸಂಚಲನ ಹಿನ್ನೆಲೆ ಭಗವಾಧ್ವಜ, ಹನುಮಂತ ಧ್ವಜ, ಶ್ರೀರಾಮನ ಧ್ವಜಗಳು ರಾರಾಜಿಸುತ್ತಿವೆ. ದೇಶಭಕ್ತರ ಹೆಸರಿನಲ್ಲಿ ನಿರ್ಮಿತ ಮಹಾಧ್ವಾರಗಳು ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಸೇರಿದಂತೆ, ಹಲವು ಮಹಾನ್ ವ್ಯಕ್ತಿಗಳ ಹೆಸರು, ಫೋಟೋಗಳ ಕಮಾನ್ಗಳನ್ನು ನಿರ್ಮಿಸಲಾಗಿದೆ.
ಇಂದು ಮಧ್ಯಾಹ್ನ 3 ಗಂಟೆಗೆ ಕೆಂಭಾವಿ ಪುರಸಭೆ ಕಚೇರಿ ಬಳಿಯಿಂದ ಆರಂಭವಾಗಲಿರುವ ಈ ಪಥ ಸಂಚಲನ, ಬಸವೇಶ್ವರ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಮಾರ್ಗವಾಗಿ ಸಾಗಲಿದೆ. ಸುಮಾರು 1,000ಕ್ಕೂ ಹೆಚ್ಚು ಗಣವೇಷಧಾರಿ ಸ್ವಯಂಸೇವಕರು ಭಾಗವಹಿಸುತ್ತಿದ್ದು, ಕೆಂಭಾವಿ ನಿವಾಸಿಗಳು ಉತ್ಸಾಹದಿಂದ ಸ್ವಾಗತಿಸಲು ಸಿದ್ಧರಾಗಿದ್ದಾರೆ.
ಪಥ ಸಂಚಲನ ವೇಳೆ ಯಾವುದೇ ಅಹಿತಕಾರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯಿಂದ, ಭಾರೀ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಓರ್ವ ಎಸ್ಪಿ, ಓರ್ವ ಎಎಸ್ಪಿ, ಮೂವರು ಡಿವೈಎಸ್ಪಿ, 8 ಸಿಪಿಐ, 26 ಪಿಎಸ್ಐ, 19 ಎಎಸ್ಐ, 147 ಹೆಡ್ಕಾನ್ಸ್ಟೇಬಲ್ ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ಸ್, 5 DAR ತುಕಡಿ, 2 KSRP ತುಕಡಿ ಸೇರಿದಂತೆ, 300ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರ ಜೊತೆಗೆ ಡ್ರೋಣ್ ಕ್ಯಾಮರಾ ಮೂಲಕ ನಿಗಾ ಇರಿಸಲಾಗಿದ್ದು, 7 ಜನರ ವಿಡಿಯೋಗ್ರಾಫಿ ತಂಡವು ಪೂರ್ಣ ಪರೇಡ್ ನಡೆಯುವ ಸ್ಥಳದ ವಿಡಿಯೋ ರೆಕಾರ್ಡ್ ಮಾಡಲಿದೆ.

