ಕಬ್ಬಿನ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಆರಂಭವಾಗಿರುವ ಹೋರಾಟದ ಕಿಚ್ಚು, ರಾಜ್ಯಾದ್ಯಂತ ವ್ಯಾಪಿಸುತ್ತಿದೆ. ಬೆಳಗಾವಿಯಲ್ಲಿ 7ನೇ ದಿನಕ್ಕೆ ಅಹೋರಾತ್ರಿ ಹೋರಾಟ ಮುಂದುವರೆದಿದ್ದು, 7 ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿದ್ದಾರೆ.
ಕಬ್ಬು ಬೆಳೆಗಾರರ ಬೇಡಿಕೆಗಳು ಏನು ಅನ್ನೋದನ್ನ ನೋಡೋದಾದ್ರೆ..
1) 1 ಟನ್ ಕಬ್ಬಿಗೆ 3,500ಕ್ಕೂ ಹೆಚ್ಚಿನ ದರ ನಿಗದಿ
2) ಕಬ್ಬಿಗೆ ಬೆಂಬಲ ಬೆಲೆ ನೀಡಿ
3) ಕೇಂದ್ರ, ರಾಜ್ಯದಿಂದ 2 ಸಾವಿರ ಕೊಡಿ
4) ಪ್ರತಿ ಟನ್ಗೆ 5,500 ರೂ. ದರ ನಿಗದಿ ಮಾಡಿ
5) ಕೇಂದ್ರ ನಿಗದಿ ಮಾಡಿರುವುದಕ್ಕಿಂತ ಹೆಚ್ಚು ಫಿಕ್ಸ್ ಮಾಡಿ
6) ಗರಿಷ್ಠ 2 ಕಂತುಗಳಲ್ಲಿ ಬಿಲ್ ಪಾವತಿ ಮಾಡಿ
7) ಹಂಗಾಮು ಆರಂಭಕ್ಕೂ ಮುನ್ನವೇ ದರ ಫಿಕ್ಸ್ ಮಾಡಿ
ಹೀಗೆ 7 ಬೇಡಿಕೆಗಳನ್ನು ಸರ್ಕಾರದ ಎದುರು ಕಬ್ಬು ಬೆಳೆಗಾರರು ಇಟ್ಟಿದ್ದಾರೆ. ಕೇಂದ್ರ ಸರ್ಕಾರ ಕನಿಷ್ಠ 3,291 ರೂಪಾಯಿ ಹಾಗೂ ಗರಿಷ್ಠ 4,339 ರೂಪಾಯಿ ಫಿಕ್ಸ್ ಮಾಡಿದೆ. ಇದರಲ್ಲಿ ಸರಕು ಸಾಗಾಣೆ ವೆಚ್ಚ ಸೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಪ್ರತಿ ಟನ್ಗೆ 3200 ರೂಪಾಯಿ ಕೊಡಲಾಗಿತ್ತಂತೆ. ಈ ಬಾರಿ 3500ಕ್ಕೂ ಹೆಚ್ಚು ದರ ನಿಗದಿ ಮಾಡುವಂತೆ ಡಿಮ್ಯಾಂಡ್ ಮಾಡಿದ್ದಾರೆ.
ಹೋರಾಟ ಮಾಡಿ ಕಬ್ಬಿನ ಬೆಲೆ ತೆಗೆದುಕೊಳ್ಳಬೇಕಿದೆ. ಮನೆ ಕೆಲಸ ಬಿಟ್ಟು ಬಂದು ನಿಂತಿದ್ದೇವೆ. ಜನಪ್ರತಿನಿಧಿಗಳು ನಮಗೆ ಸಹಾಯ ಮಾಡ್ಬೇಕು. ಪ್ರತಿವರ್ಷ ಹೋರಾಟ ಮಾಡೋದು ಯಾವ ನ್ಯಾಯ. ಇದು ರೈತರ ದುರ್ದೈವ. ಸರ್ಕಾರ ನಿಷ್ಕ್ರಿಯವಾಗಿದೆ. ಶಿವಾನಂದ್ ಪಾಟೀಲರು ನಾಲಾಯಕ್ ಸಚಿವರೆಂದು ಗುಡುಗಿದ್ದಾರೆ. ನೀವೆಲ್ಲಾ ಉದ್ಧಾರ ಆಗಿದ್ದೀರಿ. ನಮ್ಮನ್ನೇಕೆ ಹಾಳು ಮಾಡ್ತೀರಾ ಎಂದು ಗುಡುಗಿದ್ದಾರೆ.
ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಹಲವೆಡೆ ರೈತರು ಬೀದಿಗೆ ಇಳಿದಿದ್ದಾರೆ. ಈಗಾಗಲೇ ರೈತರು ಸರ್ಕಾರಕ್ಕೆ ಕೊಟ್ಟಿದ್ದ ಡೆಡ್ಲೈನ್ ಸಹ ಮುಗಿದಿದೆ. ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಳ್ತಿಲ್ಲ. ಹೀಗಾಗಿ ಪಂಜಾಬ್ ಮಾದರಿಯ ಹೋರಾಟಕ್ಕೆ ರೈತರು ಮುಂದಾಗಿದ್ದಾರೆ. ನವೆಂಬರ್ 7ರಂದು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬಂದ್ಗೆ ಕರೆ ಕೊಟ್ಟಿದ್ದಾರೆ.

