ಮಂಡ್ಯದಲ್ಲಿ ರೈತ ಆತ್ಮಹತ್ಯೆ ಪ್ರಕರಣ ಮತ್ತೊಮ್ಮೆ ಸರ್ಕಾರದ ವಿರುದ್ಧ ವಿರೋಧಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರೈತ ಮಂಜೇಗೌಡ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸರ್ಕಾರವೇ ನೇರ ಕಾರಣ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್, ಸರ್ಕಾರ ರೈತರ ಪರವಾಗಿಲ್ಲ, ಬೆಳೆ ಹಾನಿಗೆ ಪರಿಹಾರ ಸಿಗುತ್ತಿಲ್ಲ, ನೀರಾವರಿ ಸೌಲಭ್ಯವೂ ಇಲ್ಲ. ರೈತರು ಸಾಲದ ಒತ್ತಡದಲ್ಲಿ ಬದುಕು ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಅವರು ಚಿನ್ನಾಭರಣ ಅಡಮಾನ ಇಟ್ಟು 11 ಲಕ್ಷ ರೂ. ಸಾಲ ಮಾಡಿದ್ದರೂ ಸರ್ಕಾರದಿಂದ ಯಾವುದೇ ನೆರವು ಸಿಗಲಿಲ್ಲ ಎಂದು ಟೀಕಿಸಿದರು.
ಮುಖ್ಯಮಂತ್ರಿಯವರು ಕುರ್ಚಿಯ ಆಟದಲ್ಲಿ ತೊಡಗಿರುವಾಗ ಜನರ ಬದುಕು ಬೀದಿಗೆ ಬಿದ್ದಿದೆ ಎಂದು ಕಿಡಿಕಾರಿದ ಅಶೋಕ್, ರಾಜ್ಯ ಸರ್ಕಾರ ಜನರ ಮೇಲಿನ ತೆರಿಗೆ ಹೆಚ್ಚಿಸಿ, ತುಪ್ಪ ಮತ್ತು ಹಾಲಿನ ದರವನ್ನೂ ಏರಿಸಿದ್ದು ಪಾಪಿಗಳ ಸರ್ಕಾರದ ನಡವಳಿಕೆ ಎಂದು ಕಟು ಟೀಕೆ ಮಾಡಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

