ಮನೆಯ ಗೋಡೆ ಕುಸಿದು ಬಿದ್ದು ತಾಯಿ ಕಣ್ಣೆದುರೇ ಮಗು ಸಾವನ್ನಪ್ಪಿರುವ ಘಟನೆ, ಬೆಂಗಳೂರಿನ ಕುಂದಲಹಳ್ಳಿ ಕಾಲೋನಿಯಲ್ಲಿ ನಡೆದಿದೆ. ಸಿದ್ದಪ್ಪ ಹಾಗೂ ಲಾವಣ್ಯ ದಂಪತಿಯ ಪುತ್ರ, 1 ವರ್ಷದ 8 ತಿಂಗಳ ಪ್ರಣವ್ ಮೃತಪಟ್ಟಿದೆ. ನವೆಂಬರ್ 7ರ ಸಂಜೆ ಹೊಸ ಮನೆಯೊಂದರ ಮೋಲ್ಡಿಂಗ್ ಕೆಲಸ ಮುಗಿಸಿ, ಸಿಮೆಂಟ್ ಮಿಕ್ಸರ್ ಲಾರಿ ಹೋಗುತ್ತಿತ್ತು.
ಈ ವೇಳೆ ಮೇಲೆ ಹಾದು ಹೋಗಿರುವ ವೈರಿಂಗ್ ವಿದ್ಯುತ್ ತಂತಿ, ಲಾರಿಗೆ ಸಿಲುಕಿಕೊಂಡಿದೆ. ತಕ್ಷಣವೇ ಸ್ಥಳೀಯರು ಕೂಗಿಕೊಂಡಿದ್ದಾರೆ. ಆದರೆ ಚಾಲಕ ಗಮನಿಸದೇ ಲಾರಿ ಡ್ರೈವ್ ಮಾಡಿಕೊಂಡು ಹೋಗಿದ್ದಾನೆ. ಪರಿಣಾಮ ವೈರಿಂಗ್ ಕಂಬ ಕಿತ್ತು ಬಂದಿದ್ದು, ಮನೆಯ ಗೋಡೆಯೇ ಕುಸಿದು ಆಟ ಆಡ್ತಿದ್ದ ಮಗುವಿನ ಮೇಲೆ ಬಿದ್ದಿದೆ. ಮಗು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಸಾವನ್ನಪ್ಪಿದೆ.
ಲಾರಿ ಚಾಲಕ ವಾಹನವನ್ನು ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಚಾಲಕನ ನಿರ್ಲಕ್ಷ್ಯಕ್ಕೆ ಒಂದು ಅಮಾಯಕ ಜೀವ ಬಲಿಯಾಗಿದ್ದು, ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಈ ಸಂಬಂಧ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

