ರಾಜಕೀಯ ಹಿನ್ನಲೆಯಲ್ಲಿ ನಡೆಯುತ್ತಿರುವ ಚರ್ಚೆಗಳ ನಡುವೆ, ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ಕೆಲ ಗಂಟೆಗಳಲ್ಲೇ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಆಪ್ತ ಶಾಸಕರೊಂದಿಗೆ ನಗರದಲ್ಲಿರುವ ಗೋಲ್ಡ್ ಫಿಂಚ್ ಹೋಟೆಲಿನಲ್ಲಿ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ.
ಮಂಗಳವಾರ ರಾತ್ರಿ ಜಾರಕಿಹೊಳಿ ಜೊತೆ ಡಿಕೆಶಿ ಮಾತುಕತೆ ನಡೆಸಿದ್ದರು. ಈ ವೇಳೆ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಡಿಕೆಶಿ ಜಾರಕಿಹೊಳಿಗೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಮಂಗಳವಾರ ರಾತ್ರಿ ನಡೆದ ಡಿಕೆಶಿ–ಜಾರಕಿಹೊಳಿ ಮಾತುಕತೆಯ ನಂತರ ಬುಧವಾರ ಮಧ್ಯಾಹ್ನವೂ ಜಾರಕಿಹೊಳಿ ಆಪ್ತರೊಂದಿಗೆ ಸಭೆ ಕರೆದಿದ್ದರು.
ಈ ಸಭೆಯಲ್ಲಿ ಶಾಸಕರಾದ ಹಂಪನಗೌಡ ನಾಯಕ್, ಕಂಪ್ಲಿ ಗಣೇಶ್, ಬಾಬಾ ಸಾಹೇಬ್ ಪಾಟೀಲ್, ಆಸಿಫ್ ಪಠಾಣ್, ವಿಶ್ವಾಸ್ ವೈದ್ಯ, ಪ್ರಕಾಶ್ ಕೋಳಿವಾಡ ಮತ್ತು ಪಾವಗಡ ವೆಂಕಟೇಶ್ ಭಾಗವಹಿಸಿದ್ದರು.
ಡಿಕೆಶಿ ಭೇಟಿಯ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಜಾರಕಿಹೊಳಿ, ಶಿವಕುಮಾರ್ ಎಲ್ಲಾ ಸಚಿವರನ್ನು, ಶಾಸಕರನ್ನ ಭೇಟಿಯಾಗಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ನಾನೇ ಕೊನೆಯವನು ಇರಬೇಕು. ಸಾಕಷ್ಟು ಬಾರಿ ಅವರು ಭೇಟಿಯಾಗಿದ್ದಾರೆ ಎಂದು ಹೇಳಿದ್ದರು.
ವರದಿ : ಲಾವಣ್ಯ ಅನಿಗೋಳ

