ಬೀದರ್ನಲ್ಲಿ ನಡೆದ ಸ್ವಾಭಿಮಾನಿ ಮರಾಠ ಸಮಾವೇಶದಲ್ಲಿ, ಮರಾಠ ಸಮುದಾಯದ ಒಗ್ಗಟ್ಟು, ಪ್ರಗತಿ ಮತ್ತು ಶೈಕ್ಷಣಿಕ ಶಕ್ತಿಕರಣದ ಬಗ್ಗೆ ದಿಟ್ಟ ಸಂದೇಶ ನೀಡಿದ್ದಾರೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್. ಸಮಾಜವನ್ನು ಗಟ್ಟಿಗೊಳಿಸುವ ಕೆಲಸ ನಮ್ಮೆಲ್ಲರ ಜವಾಬ್ದಾರಿ, ಮರಾಠ ಸಮಾಜದ ಬಂಧುಗಳು ಸಂಕಷ್ಟದಲ್ಲಿದ್ದಾರೆ, ಎಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಮುಂದೆ ಸಾಗಬೇಕು ಎಂದು ಕರೆ ಕೊಟ್ಟಿದ್ದಾರೆ.
ಸಮಾವೇಶದ ಬಗ್ಗೆ ಮಾತನಾಡಿದ ಅವರು, ಬೀದರ್ಗೆ ಹಲವು ಬಾರಿ ಬಂದಿದ್ದೆ. ಸಮಾಜದ ಸಂಘಟನೆ ಮತ್ತು ಒಗ್ಗಟ್ಟಿನ ಅಗತ್ಯವನ್ನು ಯಾವಾಗಲೂ ಒತ್ತಿ ಹೇಳಿದ್ದೆವು. ಇಂದಿನ ದಿನ ಆ ಸಂಭ್ರಮದ ಕ್ಷಣ. ಸಮಾಜದ ಮುಖಂಡರ ಶ್ರಮಕ್ಕೆ ಧನ್ಯವಾದಗಳು ಎಂದರು. ಛತ್ರಪತಿ ಶಿವಾಜಿ ಮಹಾರಾಜರ ವಿಚಾರಗಳು ಜಾತ್ಯತೀತತೆಯ ಬದುಕು ತೋರಿಸುತ್ತವೆ ಎಂದು ಸಚಿವರು ಹೇಳಿದರು. ಶಿವಾಜಿ ಮಹಾರಾಜರು ಮೊಘಲರ ವಿರುದ್ಧ ಹೋರಾಡಿದರು, ಮುಸ್ಲಿಮರ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದರು. ಸಮಾಜದ ಶಿಕ್ಷಣ ಮತ್ತು ಸುಧಾರಣೆಯಲ್ಲಿ ಮರಾಠ ರಾಜರ ಬೃಹತ್ ಪಾತ್ರವನ್ನು ಸ್ಮರಿಸಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಲಂಡನ್ನಲ್ಲಿ ಉನ್ನತ ಅಧ್ಯಯನ ಮಾಡಲು ಸಹಾಯ ಮಾಡಿದವರು ಗಾಯಕ್ವಾಡ್ ಮತ್ತು ಶಾಹು ಮಹಾರಾಜರು ಎಂದು ಹೇಳಿದರು.
ರಾಜ್ಯದ ವಿಭಿನ್ನ ಭಾಗಗಳಿಗೆ ಭೇಟಿ ನೀಡಿದಾಗ ಮರಾಠ ಸಮಾಜದ ಬಂಧುಗಳ ಸಂಕಷ್ಟ ಕಣ್ಣಿಗೆ ಬೀಳುತ್ತದೆ ಎಂದು ಸಚಿವರು ವಿವರಿಸಿದರು. ನಾನು ಮರಾಠ ಸಮಾಜದಲ್ಲಿ ಹುಟ್ಟಿದ್ದೇನೆ ಎಂದು ಹೇಳಿಕೊಳ್ಳಲು ಹೆಮ್ಮೆ ಎಂದರು. ಸಮಾಜದ ಶೈಕ್ಷಣಿಕ ಮತ್ತು ಆರ್ಥಿಕ ಬಲವೇ ಅಭಿವೃದ್ಧಿಯ ಅಡಿಪಾಯ ಎಂದು ಹೇಳಿದ ಲಾಡ್, ನಾವು ಒಂದಾಗಿ ಜೀಜಾಬಾಯಿ ಟ್ರಸ್ಟ್ ಆರಂಭಿಸೋಣ. ಪ್ರತಿಯೊಂದು ತಿಂಗಳು ಬರಲು ನಾನು ಸಿದ್ಧನಿದ್ದೇನೆ. ಸಂಪೂರ್ಣ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.
ರಾಜಕೀಯದ ಬದಲು ಸಮಾಜ ಸೇವೆಯೇ ಮೊದಲ ಗುರಿ ಎಂದು ಒತ್ತಿ ಹೇಳಿದರು. ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಬಲವಾಗಿದಾಗ ರಾಜಕೀಯ ಸ್ವತಃ ಬರುತ್ತದೆ. ಇಂದು ಸಮಾಜಕ್ಕಾಗಿ ಕೆಲಸ ಮಾಡುವ ಪ್ರಮಾಣ ಮಾಡೋಣ ಎಂದು ಕರೆ ನೀಡಿದರು. ಬೀದರ್ ಜಿಲ್ಲೆಯಲ್ಲಿನ ಮರಾಠ ಬಂಧುಗಳು ಲಕ್ಷಾಂತರ ಸಂಖ್ಯೆಯಲ್ಲಿ ಇದ್ದರೂ, ಎಲ್ಲಾ ಸಮಾಜದೊಂದಿಗೆ ಸಾಮರಸ್ಯದಿಂದ ಬಾಳುವ ಅಗತ್ಯವಿದೆ ಎಂದು ಹೇಳಿದರು. ಶಿವಾಜಿ, ಶಾಹು ಮತ್ತು ಗಾಯಕ್ವಾಡ್ ಮಹಾರಾಜರ ಮಾರ್ಗವನ್ನು ಅನುಸರಿಸೋಣ ಎಂದು ಹೇಳಿದರು.
ಟ್ರಸ್ಟ್ ಮುಖಾಂತರ ಬಸವಣ್ಣ ಮತ್ತು ಅಂಬೇಡ್ಕರ ವಿಚಾರಗಳನ್ನು ಹೊಸ ಪೀಳಿಗೆಗೆ ತಲುಪಿಸುವ ಯೋಜನೆ ಇದೆ ಎಂದು ಸಚಿವರು ಮಾಹಿತಿ ನೀಡಿದರು. ಬಡ ಬಂಧುಗಳನ್ನು ಹುಡುಕಿ, ಓದಿಸಿ, ಸಹಾಯ ಮಾಡುವುದು ನಮ್ಮ ಮೊದಲ ಉದ್ದೇಶ ಎಂದರು. ರಾಜಕೀಯ ಸಾಧನೆಗಳ ಬಗ್ಗೆ ಮಾತನಾಡಿದ ಲಾಡ್, ನಾನು ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದೇನೆ. ನಾಲ್ಕು ಬಾರಿ ಶಾಸಕ, ಸಚಿವ. ದೇವರು ಕೊಟ್ಟ ಶಕ್ತಿಯವರೆಗೆ ಶೋಷಿತರ ಪರವಾಗಿ ಕೆಲಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಾವೇಶದ ಯಶಸ್ಸು ಶಕ್ತಿ ನೀಡಿದೆ ಎಂದು ತಿಳಿಸಿದ ಅವರು, ಜೀಜಾಬಾಯಿ ಟ್ರಸ್ಟ್ ಉತ್ತರ ಕರ್ನಾಟಕದಲ್ಲಿ ನಂ.1 ಆಗಲು ಸಹಾಯ ಮಾಡುತ್ತೇವೆ. ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಒಂದಾಗಬೇಕು ಎಂದರು. ಯುವಕರಿಗೆ ಸಂದೇಶ ನೀಡಿದ ಸಚಿವರು, ಛತ್ರಪತಿ ಶಿವಾಜಿ ಮಹಾರಾಜರ ವಿಚಾರಗಳನ್ನು ಓದಿರಿ, ಚಿಂತಿಸಿರಿ. ನಾನು ಮರಾಠ ಎಂಬ ಭಾವನೆಯೊಂದೇ ನಮ್ಮನ್ನು ಇಲ್ಲಿ ಸೇರಿಸಿದೆ ಎಂದು ಹೇಳಿದರು. ಸಮಾವೇಶಕ್ಕೂ ಮುನ್ನ, ಬೀದರ್ನ ಶಿವಾಜಿ ವೃತ್ತದಲ್ಲಿ ಮರಾಠ ಸಮಾಜದ ಬಂಧುಗಳು ಭಾರಿ ಸಂಖ್ಯೆಯಲ್ಲಿ ಸೇರಿ ಸಚಿವ ಲಾಡ್ಗೆ ಅದ್ದೂರಿ ಸ್ವಾಗತ ಕೋರಿದರು. ನಂತರ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

