“ಮದುವೆ ಬೇಡ… ಮೊದಲು ಮತಾಂತರ” – 32 ಪೀಸ್ ಮಾಡುವೆ ಎಂದು ಬೆದರಿಕೆ!

ಬೆಂಗಳೂರು ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ವಿವಾದಾತ್ಮಕ ಪ್ರಕರಣ ಬೆಳಕಿಗೆ ಬಂದಿದೆ. ಸುದ್ದಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಯಲ್ಲಿ, ಒಬ್ಬ ಯುವಕ ತನ್ನ ಪ್ರೀತಿಸಿದ ಯುವತಿಗೆ ಧಮ್ಕಿ ನೀಡಿದ್ದಾನೆ ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾನೆ. ಸಂತ್ರಸ್ಥೆ ನೀಡಿರುವ ಹೇಳಿಕೆಯ ಪ್ರಕಾರ, ತನ್ನನ್ನು ಪ್ರೀತಿಸುತ್ತಿದ್ದ ಯುವಕ ಮದುವೆಗೆ ಒಪ್ಪಿಕೊಳ್ಳುವ ಮೊದಲು ಮತಾಂತರಗೊಳ್ಳುವಂತೆ ಬಲವಂತಪಡಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಯುವತಿ ಮಾಧ್ಯಮಗಳ ಮುಂದೆ ಮಾತನಾಡುತ್ತಾ, ಉಸ್ಮಾನ್‌ ಎಂಬ ಯುವಕನೊಂದಿಗೆ 1.5 ವರ್ಷಗಳ ಕಾಲ ಲಿವ್–ಇನ್ ಸಂಬಂಧದಲ್ಲಿ ಇದ್ದ ನಂತರ ಮದುವೆಯ ವಿಷಯ ಬಂದಾಗ ಮತಾಂತರ ವಿಚಾರವನ್ನು ಒತ್ತಾಯಿಸಿದ್ದಾನೆ ಎಂದು ಹೇಳಿದ್ದಾರೆ. ಇದನ್ನು ತಾನು ನಿರಾಕರಿಸಿದ್ದಾಗ, ತನ್ನ ಮೇಲೆ ಹಲ್ಲೆ, ದೌರ್ಜನ್ಯ, ಕೊಲೆ ಬೆದರಿಕೆ ಹಾಗೂ ಖಾಸಗಿ ಫೋಟೋಗಳ ಆಧಾರದ ಮೇಲೆ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂಬ ಗಂಭೀರ ಆರೋಪಗಳನ್ನು ಯುವತಿ ಮಾಡಿದ್ದಾರೆ. ಅಲ್ಲದೇ 32 ಪೀಸ್ ಮಾಡಿ ಫ್ರಿಡ್ಜ್ ನಲ್ಲಿಟ್ಟು ನಂತರ ಇನ್ನೊಂದು ಮದುವೆ ಆಗ್ತೀನಿ ಎಂದು ಉಸ್ಮಾನ್​ ಬೆದರಿಕೆ ಹಾಕಿದ್ದ ಎಂದು ಯುವತಿ ದೂರು ಕೊಟ್ಟಿದ್ದಾರೆ.

ಯುವತಿ ವಿವರಿಸಿರುವಂತೆ, ಆರಂಭದಲ್ಲಿ ಪ್ರೀತಿ ನಿರಾಕರಿಸಿದಾಗ ಆತ್ಮಹತ್ಯೆಯ ಹೆಸರಿನಲ್ಲಿ ಮನೋವೈಜ್ಞಾನಿಕ ಒತ್ತಡ ಹಾಕಿದ್ದು, ನಂತರ ಮತಾಂತರ ಬೇಡ, ಸಾಮಾನ್ಯವಾಗಿ ಮದುವೆಯಾಗುತ್ತೇನೆ ಎಂದು ಆತ ಪ್ರೀತಿಯ ನಂಬಿಕೆ ಮೂಡಿಸಿದ್ದಾನೆ. ಈ ನಂಬಿಕೆಯಿಂದ ಇಬ್ಬರು ಲಿವ್–ಇನ್‌ನಲ್ಲಿ ವಾಸಿಸಲು ಆರಂಭಿಸಿದ್ದಾಗಿ ಹೇಳಲಾಗಿದೆ. ಆದರೆ ನಂತರ ಹಣ, ಚಿನ್ನ ಹಾಗೂ ಖಾಸಗಿ ವಸ್ತುಗಳನ್ನು ಬಲವಂತವಾಗಿ ಪಡೆದುಕೊಳ್ಳಲು ಒತ್ತಡ ಹಾಕಿದ್ದಾನೆ ಎಂದು ಯುವತಿ ಹೇಳುತ್ತಾರೆ.

ಈ ಘಟನೆಗಳ ಒತ್ತಡದಿಂದ ತಾನೇ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದು ಯುವತಿ ಹೇಳಿಕೊಂಡಿದ್ದಾರೆ. ಮತ್ತೊಂದೆಡೆ, ಮಾರ್ಚ್‌ನಲ್ಲಿ ಪೊಲೀಸರಿಗೆ ದೂರು ನೀಡಿದ್ದರೂ, FIR ದಾಖಲಿಸುವಲ್ಲಿ ಮತ್ತು ತನಿಖೆ ಮುಂದುವರಿಸುವಲ್ಲಿ ವಿಳಂಬವಾಗಿದೆ ಎಂದು ಅವರು ದೂರಿದ್ದಾರೆ. ನನಗೆ ನ್ಯಾಯ ಬೇಕು. ನನ್ನ ಹೇಳಿಕೆಯಂತೆ FIR ಮಾಡಿಲ್ಲ. ನನಗೆ ಜೀವಭಯ ಇದೆ ಎಂದು ಯುವತಿ ಮಾಧ್ಯಮಗಳ ಮುಂದೆ ಅಳುತ್ತಾ ಹೇಳಿದ್ದಾರೆ.

ಪ್ರಸ್ತುತ ಸುದ್ದಗುಂಟೆ ಪೊಲೀಸರು ಪ್ರಕರಣದ ಸಮಗ್ರ ಪರಿಶೀಲನೆಯನ್ನು ಮುಂದುವರೆಸಿದ್ದು, ಆರೋಪಗಳ ಬಗ್ಗೆ ಅಧಿಕೃತ ಪ್ರತಿಕ್ರಿಯೆಯನ್ನು ನೀಡುವ ನಿರೀಕ್ಷೆಯಿದೆ. ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ನಡೆಯುತ್ತಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author