Political News: ಬಾಗಲಕೋಟೆಯಲ್ಲಿ ನಡೆದ ಕಲ್ಲುತೂರಾಟಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದು, ಛತ್ರಪತಿ ಶಿವಾಜಿ ಮಹಾರಾಜರು ಹಿಂದವಿ ಸ್ವರಾಜ್ಯದ ಸ್ಥಾಪನೆಗಾಗಿ, ಭಾರತದಲ್ಲಿ ಸನಾತನ ಧರ್ಮದ ರಕ್ಷಣೆಗಾಗಿ ಹೋರಾಡಿದವರು. ಧರ್ಮ ರಕ್ಷಣೆಗಾಗಿಯೇ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಿದವರು. ಆದ್ದರಿಂದಲೇ ಒಂದು ಕೋಮಿನವರಿಗೆ ಶಿವಾಜಿ ಎನ್ನುವ ಹೆಸರೇ ಸಹಿಸಲು ಸಾಧ್ಯವಾಗುತ್ತಿಲ್ಲ. ಅಂದು ಶಿವಾಜಿ ಮಹಾರಾಜರು ಹೋರಾಡಿದ್ದ ಅದೇ ಔರಂಗಜೇಬನ ಪರಂಪರೆಯವರು ಇಂದಿಗೂ ತಮ್ಮ ಕೆಲಸ ಮುಂದುವರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಶಿವಾಜಿ ಮಹಾರಾಜರ ಜಯಂತಿಯ ಮೆರವಣಿಗೆಯ ವೇಳೆ ಕಲ್ಲು ತೂರಾಟ ನಡೆದ ಘಟನೆಯೂ ಇದಕ್ಕೆ ಉದಾಹರಣೆ. ಇಂತಹ ದಾಳಿಗಳು ಹಿಂದೂ ಸಮಾಜದ ಅಂತಃಸತ್ವವನ್ನು ತಗ್ಗಿಸಲು ಸಾಧ್ಯವೇ ಇಲ್ಲ. ಶಿವಾಜಿ ಜಯಂತಿಯ ಮೆರವಣಿಗೆಯನ್ನೇ ಸಹಿಸಲು ಸಾಧ್ಯವಿಲ್ಲದವರು ಈ ದೇಶದ ಕಾನೂನನ್ನು ಗೌರವಿಸಲು ಸಾಧ್ಯವೇ? ಪೊಲೀಸ್ ಭದ್ರತೆಯ ನಡುವೆ ಸಾಗುತ್ತಿದ್ದ ಮೆರವಣಿಗೆಯ ಮೇಲೆ ದಾಳಿ ಮಾಡುತ್ತಾರೆ ಎಂದರೆ, ಇದು ಸಮಾಜ ಘಾತಕ ಶಕ್ತಿಗಳ ಕಾರ್ಯವಲ್ಲವೇ? ಸ್ವತಃ ಪೊಲೀಸ್ ಅಧಿಕಾರಿಗಳ ಮೇಲೂ ಕಲ್ಲು ತೂರಾಟ ನಡೆದಿದ್ದು, ಇದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ವ್ಯವಸ್ಥೆಯ ಸಂಪೂರ್ಣ ವೈಫಲ್ಯಕ್ಕೆ ಹಿಡಿದ ಸಾಕ್ಷಿಯಾಗಿದೆ ಎಂದು ರವಿ ವಾಗ್ದಾಳಿ ನಡೆಸಿದ್ದಾರೆ.
ಶಾಂತಿಯುತವಾಗಿ ನಡೆದ ಮೆರವಣಿಗೆಯ ಮೇಲೆ ಮಸೀದಿಯಿ ಕಡೆಯಿಂದ ಕಲ್ಲು ತೂರಾಟ ನಡೆದಿದೆ. ಇದು ಹಿಂದೂಗಳ ಭಾವನೆಯನ್ನು ಕೆರಳಿಸುವ, ತಾಳ್ಮೆಯನ್ನು ಪರೀಕ್ಷಿಸುವ ಪ್ರಯತ್ನ. ಇದನ್ನು ನಾವು ಸಹಿಸಿಕೊಂಡಿರಲು ಸಾಧ್ಯವೇ ಇಲ್ಲ. ಸರ್ಕಾರ ತಕ್ಷಣವೇ ದಾಳಿಕೋರರನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲೇಬೇಕು. ನೆನಪಿರಲಿ, ಇದು ಶಿವಾಜಿ ಮಹಾರಾಜರಂತಹ ವೀರರ ನೆಲ. ಕಾನೂನು ಕೈಗೆತ್ತಿಕೊಳ್ಳುವ ಮುನ್ನ ಪುಂಡರು ಎಚ್ಚರದಿಂದಿರಬೇಕು! ಎಂದು ಸಿ.ಟಿ.ರವಿ ಎಚ್ಚರಿಕೆ ಸಂದೇಶ ನೀಡಿದ್ದಾರೆ.




