ಸಿದ್ಧಾರೂಢರ ಮಠಕ್ಕಿಲ್ಲ ಸಿಲಿಂಡರ್ ಅಭಾವದ ಆತಂಕ: ಬಾಯ್ಲರ್ ಬಳಕೆಯಲ್ಲಿ ಅನ್ನದಾಸೋಹ ನಿರಂತರ..!

Hubli News: ಹುಬ್ಬಳ್ಳಿ: ವಾಣಿಜ್ಯ ಬಳಕೆ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಬಿಸಿ ದೇವಸ್ಥಾನ, ಮಠ-ಮಂದಿರಗಳಿಗೂ ತಟ್ಟಿದೆ. ಆದರೆ, ಇಲ್ಲಿನ ಸದ್ಗುರು ಸಿದ್ಧಾರೂಢರ ಮಠದ ನಿತ್ಯ ದಾಸೋಹಕ್ಕೆ ಮಾತ್ರ ಅದರ ಪರಿಣಾಮ ಬೀರಿಲ್ಲ. ಇಲ್ಲಿ ಬಾಯ್ಲರ್‌ನಿಂದ ಆಹಾರ ಸಿದ್ಧಪಡಿಸಲಾಗಿದ್ದು, ಪ್ರಸಾದ ಸೇವೆ ನಿರಂತರವಾಗಿ ನಡೆಯುತ್ತಿದೆ.

ಸಾಮಾನ್ಯವಾಗಿ ದೇವಸ್ಥಾನ, ಮಠ-ಮಂದಿರಗಳಲ್ಲಿ ನಿತ್ಯ ಸಿಲಿಂಡರ್‌ ಬಳಸಿ ಪ್ರಸಾದ ಸಿದ್ಧಪಡಿಸಲಾಗುತ್ತದೆ. ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧ ನಡೆಯುತ್ತಿರುವ ಪರಿಣಾಮ ಅನಿಲ ಪೂರೈಕೆಯಲ್ಲಿ ಸಾಕಷ್ಟು ವ್ಯತ್ಯಯವಾಗಿದ್ದರಿಂದ ರಾಜ್ಯದ ವಿವಿಧ ದೇವಸ್ಥಾನದಲ್ಲಿ ಪ್ರಸಾದ ಸೇವೆ ಸ್ಥಗಿತಗೊಳಿಸಲಾಗಿದೆ. ಆದರೆ, ಸಿದ್ಧಾರೂಢರ ಮಠದಲ್ಲಿ ಮಾತ್ರ ಆರಂಭದಿಂದಲೂ ಬಾಯ್ಲರ್‌ ಬಳಸಿಕೊಂಡೇ ಪ್ರಸಾದ ಸಿದ್ಧಪಡಿಸಲಾಗುತ್ತಿದೆ.

ಸಿದ್ಧಾರೂಢ ಮಠದಲ್ಲಿ ಕಟ್ಟಿಗೆ ಬಳಸಿಯೇ ಪ್ರಸಾದ ಸಿದ್ಧಪಡಿಸಲಾಗುತ್ತದೆ. 2013ರಿಂದ ಬಾಯ್ಲರ್‌ ಮೂಲಕ ಬರುವ ಹವೆ (ಸ್ಟೀಮ್‌)ನಿಂದ ಪ್ರಸಾದ ಮಾಡಲಾಗುತ್ತದೆ. ಶ್ರೀಮಠದ ಹಿಂಭಾಗದಲ್ಲಿ 4 ಬೃಹತ್‌ ಆಕಾರದ ಬೈಲರ್‌ ಅಳವಡಿಸಿದ್ದು, ಇವುಗಳಿಗೆ ಉರುವಲಾಗಿ ಕಟ್ಟಿಗೆ ಬಳಸುತ್ತಿದೆ. ಈ ಬಾಯ್ಲರ್‌ಗಳಿಂದ ಬರುವ ಹವೆಯನ್ನು ಮಠದ ಅಡುಗೆ ಕೋಣೆ ವರೆಗೆ ಪೈಪ್‌ಲೈನ್‌ ಅಳವಡಿಸಿ ಅಲ್ಲಿ 40 ಕೆಜಿ ಸಾಮರ್ಥ್ಯದ 9 ಸ್ಟೀಮ್‌ ಕುಕ್ಕರ್‌ ಅಳವಡಿಸಲಾಗಿದೆ. ಏಕಕಾಲಕ್ಕೆ 4 ಕ್ವಿಂಟಲ್‌ಗೂ ಅಧಿಕ ಅನ್ನ ತಯಾರಿಸುವ ಸಾಮರ್ಥ್ಯ ಹೊಂದಿವೆ. ಈ ಸ್ಟೀಮ್‌ ಮೂಲಕವೇ ಶೇ. 90ರಷ್ಟು ಅಡುಗೆ ತಯಾರಿಸಲಾಗುತ್ತದೆ. ಇನ್ನು ಶೇ. 10ರಷ್ಟು ಮಾತ್ರ ಅಂದರೆ ಪಲಾವ್‌, ಪಲ್ಲೆ, ಸಾಂಬಾರ್‌ಗೆ ಒಗ್ಗರಣೆ ಮಾಡಲು ಸಿಲಿಂಡರ್‌ ಬಳಸಲಾಗುತ್ತದೆ. ಇದಕ್ಕೆ ನಿತ್ಯವೂ ಒಂದು ಸಿಲಿಂಡರ್‌ ಬೇಕಾಗುತ್ತದೆ. ಹಾಗೊಂದು ವೇಳೆ ಸಿಲಿಂಡರ್‌ ಕೊರತೆಯಾದಲ್ಲಿ ಕಟ್ಟಿಗೆ ಬಳಸಿ ಅಡುಗೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು 4-5 ತಿಂಗಳು ಬಾಯ್ಲರ್‌ ಬಳಸಲು ಆಗುವಷ್ಟು ಕಟ್ಟಿಗೆ ಸಂಗ್ರಹ ಮಾಡಿಟ್ಟುಕೊಂಡಿದೆ. ಹಾಗಾಗಿ ಶ್ರೀಮಠದಲ್ಲಿ ನಡೆಯುವ ಅನ್ನದಾಸೋಹಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.

ಶ್ರೀಮಠದಲ್ಲಿ ನಿತ್ಯವೂ ಮೂರು ಹೊತ್ತು ಅನ್ನದಾಸೋಹ ನಡೆಯುತ್ತದೆ. ಬೆಳಗಿನ ವೇಳೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಪಾಯಸದೊಂದಿಗೆ ಪಲ್ಲೆ, ಅನ್ನ-ಸಾಂಬಾರ ನೀಡಲಾಗುತ್ತಿದೆ. ನಿತ್ಯ 6 ಕ್ವಿಂಟಲ್‌ ಅಕ್ಕಿ, 2 ಕ್ವಿಂಟಲ್‌ ಪಾಯಸ, 1200 ಲೀಟರ್‌ ಸಾಂಬಾರ, 1 ಕ್ವಿಂಟಲ್‌ ಪಲ್ಲೆ ಮಾಡಲಾಗುತ್ತದೆ. ಸಾಮಾನ್ಯ ದಿನಗಳಲ್ಲಿ ನಿತ್ಯವೂ 5ರಿಂದ 6 ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ.

ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

About The Author