ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಭಾರಿ ಪ್ರತಿಭಟನೆಗೆ ಕೊನೆಗೂ ರೈಲ್ವೆ ಇಲಾಖೆ ಮಣಿದಿದೆ. ಗೂಡ್ಸ್ ಮ್ಯಾನೇಜರ್ LDC ಹುದ್ದೆಗಳಿಗಾಗಿ ಮಾರ್ಚ್ 17 ರಂದು ನಡೆಸಲಿದ್ದ ಮುಂಬಡ್ತಿ ಪರೀಕ್ಷೆಯನ್ನು ರದ್ದುಪಡಿಸಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿನ ಕೆಲವು ಅವ್ಯವಸ್ಥೆಗಳು ಮತ್ತು ಸ್ಥಳೀಯ ಭಾಷೆಗಳ ಕಡೆಗಣನೆ ಕುರಿತು ಕರವೇ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ ತೀವ್ರ ಹೋರಾಟ ನಡೆಸಿದ್ರು.
ಈ ಹೋರಾಟದ ಪರಿಣಾಮವಾಗಿ, ರೈಲ್ವೆ ಇಲಾಖೆಯು ಮುಂಬಡ್ತಿ ಪರೀಕ್ಷೆಯನ್ನು ಮುಂದೂಡಲು ನಿರ್ಧರಿಸಿದೆ. ಹಲವು ದಿನಗಳಿಂದ ಕರವೇ ಮುಖಂಡರು ಮತ್ತು ಸದಸ್ಯರು ರೈಲ್ವೆ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದರು. ಈ ಮುಂಬಡ್ತಿ ಪರೀಕ್ಷೆಯು ಸ್ಥಳೀಯ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುತ್ತಿಲ್ಲ ಎಂದು ಆರೋಪಿಸಿದ್ದರು.
ಕರವೇ ಹೋರಾಟದ ಒತ್ತಡ ಹೆಚ್ಚಿದ ನಂತರ, ರೈಲ್ವೆ ಇಲಾಖೆಯು ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿತು. ಕರವೇ ಮನವಿಗೆ ಸ್ಪಂದಿಸಿದ ರೈಲ್ವೆ ಇಲಾಖೆ, ಈ ಮಹತ್ವದ ಪರೀಕ್ಷೆಯನ್ನು ರದ್ದುಗೊಳಿಸುವ ಮೂಲಕ ತಾತ್ಕಾಲಿಕವಾಗಿ ಪರಿಸ್ಥಿತಿಯನ್ನು ತಿಳಿಗೊಳಿಸಿದೆ. ಮುಂಬಡ್ತಿ ಪರೀಕ್ಷೆಗೆ ಸಂಬಂಧಿಸಿದ ಮುಂದಿನ ಕ್ರಮಗಳ ಬಗ್ಗೆ ರೈಲ್ವೆ ಇಲಾಖೆ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.
ವರದಿ : ಲಾವಣ್ಯ ಅನಿಗೋಳ




