ನಮ್ಮ ಮೆಟ್ರೋ (Namma Metro) ಪರ್ಪಲ್ ಲೈನ್ನಲ್ಲಿ ಭಾನುವಾರ (ಮೇ 17) ಬೆಳಗ್ಗೆ ಕೆಲಕಾಲ ಸೇವೆ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ತಿಳಿಸಿದೆ. ತುರ್ತು ನಿರ್ವಹಣಾ ಕಾರ್ಯಗಳ ಹಿನ್ನೆಲೆಯಲ್ಲಿ ಬೆಳಿಗ್ಗೆ 7ರಿಂದ 9ರವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಳ್ಳಲಿದೆ.
ಮಾಹಿತಿಯಂತೆ, ನಾಡಪ್ರಭು ಕೆಂಪೇಗೌಡ ನಿಲ್ದಾಣ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣಗಳ ನಡುವೆ ನಿರ್ವಹಣಾ ಕೆಲಸ ನಡೆಯಲಿದ್ದು, ಈ ಅವಧಿಯಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ (ಹೊಸಹಳ್ಳಿ) ನಿಲ್ದಾಣದಿಂದ ಕಬ್ಬನ್ ಪಾರ್ಕ್ ನಿಲ್ದಾಣದವರೆಗೆ ಮೆಟ್ರೋ ಸೇವೆ ಲಭ್ಯವಿರುವುದಿಲ್ಲ. ಈ ಕಾರ್ಯವು ಮೆಟ್ರೋ ಸುರಕ್ಷತೆ ಮತ್ತು ದೀರ್ಘಕಾಲೀನ ಕಾರ್ಯಕ್ಷಮತೆಯನ್ನು ಸುಧಾರಿಸಲು ಕೈಗೊಳ್ಳಲಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಆದರೆ ಈ ಅವಧಿಯಲ್ಲೂ ಪರ್ಪಲ್ ಲೈನ್ನ ಉಳಿದ ಭಾಗಗಳಲ್ಲಿ ಸೇವೆ ಮುಂದುವರಿಯಲಿದೆ. ಚಲ್ಲಘಟ್ಟದಿಂದ ವಿಜಯನಗರದವರೆಗೆ ಹಾಗೂ ಎಂಜಿ ರಸ್ತೆದಿಂದ ವೈಟ್ಫೀಲ್ಡ್ (ಕಾಡುಗೋಡಿ) ವರೆಗೆ ರೈಲುಗಳು ಎಂದಿನಂತೆ ಸಂಚರಿಸಲಿವೆ. ಜೊತೆಗೆ ಹಸಿರು ಮಾರ್ಗ (ನಾಗಸಂದ್ರ–ಸಿಲ್ಕ್ ಇನ್ಸ್ಟಿಟ್ಯೂಟ್) ಮತ್ತು ಹಳದಿ ಮಾರ್ಗ (ಆರ್ವಿ ರಸ್ತೆ–ಬೊಮ್ಮಸಂದ್ರ)ಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಬೆಳಿಗ್ಗೆ 9 ಗಂಟೆಯ ನಂತರ ಪರ್ಪಲ್ ಲೈನ್ ಸಂಪೂರ್ಣವಾಗಿ ಮತ್ತೆ ಸಾಮಾನ್ಯ ಸಂಚಾರಕ್ಕೆ ಮರಳಲಿದೆ ಎಂದು ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳಬೇಕು ಹಾಗೂ ಆ ಎರಡು ಗಂಟೆಗಳ ಅವಧಿಯಲ್ಲಿ ಬದಲಾವಣೆಗಳನ್ನು ಗಮನದಲ್ಲಿಡಬೇಕು ಎಂದು ಸಂಸ್ಥೆ ಮನವಿ ಮಾಡಿದೆ.




